ಅರ್ನಬ್ ಗೋಸ್ವಾಮಿ ಚಾಟ್ ಲೀಕ್; ರಾಷ್ಟ್ರೀಯ ಭದ್ರತೆ ಪ್ರಶ್ನೆ ಎತ್ತಿದ ಕಾಂಗ್ರೆಸ್
ನವದೆಹಲಿ, ಜನವರಿ 21: ರಿಪಬ್ಲಿಕ್ ಟಿ.ವಿ. ಮಾಲೀಕ ಅರ್ನಬ್ ಗೋಸ್ವಾಮಿ ಹಾಗೂ ಬಾರ್ಕ್ ಮಾಜಿ ಸಿಇಒ ಪಾರ್ಥೊ ದಾಸ್ ಗುಪ್ತಾ ಅವರ ವಾಟ್ಸಪ್ ಚಾಟ್ ಈಚೆಗೆ ಸೋರಿಕೆಯಾಗಿದ್ದು, ಈ ಬಗ್ಗೆ ಕೇಂದ್ರಕ್ಕೆ ಕಾಂಗ್ರೆಸ್ ಮತ್ತೆ ಪ್ರಶ್ನಿಸಿದೆ.
ದೇಶದ ಭದ್ರತೆ ಹಾಗೂ ಏಕತೆಗೆ ಸಂಬಂಧಿಸಿದ ಇಂಥ ಗೌಪ್ಯ ಮಾಹಿತಿ ಹೇಗೆ ಎಲ್ಲಾ ಭದ್ರತೆಗಳನ್ನು ಮೀರಿ ಸೋರಿಕೆಯಾಗಲು ಸಾಧ್ಯ ಎಂದು ಪ್ರಶ್ನೆ ಮಾಡಿದ್ದು, ಇದಕ್ಕೆ ಕ್ಯಾಬಿನೆಟ್ ಸಮಿತಿ ಸದಸ್ಯರೇ ಹೊಣೆಗಾರರು ಎಂದು ಆರೋಪಿಸಿದೆ.
ಬಾಲಾಕೋಟ್ ವೈಮಾನಿಕ ದಾಳಿ ಮಾಹಿತಿ ಸೋರಿಕೆ: ವಿಪಕ್ಷಗಳ ಆರೋಪ
ಫೆಬ್ರುವರಿ 26, 2019ರಲ್ಲಿ ನಡೆದ ಬಾಲಾಕೋಟ್ ದಾಳಿಗೆ ಮೊದಲೇ ಇವರಿಗೆ ರಹಸ್ಯ ಮೂಲದಿಂದ ಮಾಹಿತಿ ಬಂದಿದೆ. ಫೆ.23ರ ವಾಟ್ಸ್ ಆಪ್ ಚಾಟ್ ನಲ್ಲಿ ವೈಮಾನಿಕ ದಾಳಿ ಮಾದರಿಯ ದೊಡ್ಡ ದಾಳಿ ನಡೆಯಬಹುದು ಎಂಬ ಬಗ್ಗೆ ಅರ್ನಬ್ ಉಲ್ಲೇಖಿಸಿದ್ದಾರೆ. ಈ ಬಗ್ಗೆ ಅವರಿಗೆ ಹೇಗೆ ತಿಳಿಯಲು ಸಾಧ್ಯ? ಇದು ರಾಷ್ಟ್ರೀಯ ಭದ್ರತೆಯ ಉಲ್ಲಂಘನೆ ವಿಷಯ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹಸಚಿವ ಅಮಿತ್ ಶಾಗೆ ಕಾಂಗ್ರೆಸ್ ಪ್ರಶ್ನೆ ಮಾಡಿದೆ.
ಇಬ್ಬರ ನಡುವಿನ ಈ ಚಾಟ್ ಸೋರಿಕೆಯಾಗುತ್ತಿದ್ದಂತೆ ರಾಹುಲ್ ಗಾಂಧಿ ಕೇಂದ್ರವನ್ನು ಈ ಬಗ್ಗೆ ತನಿಖೆ ಕೈಗೊಳ್ಳಬೇಕೆಂದು ಆಗ್ರಹಿಸಿದ್ದರು. ಅದರ ಬೆನ್ನಲ್ಲೇ ಮಾಜಿ ಗೃಹ ಸಚಿವ ಸುಶೀಲ್ ಕುಮಾರ್ ಶಿಂದೆ, ಪಕ್ಷದ ಹಿರಿಯ ಮುಖಂಡ ಸಲ್ಮಾನ್ ಖುರ್ಷಿದ್, ಗುಲಾಂ ನಬಿ ಆಜಾದ್ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. "ಅರ್ನಬ್ ಗೋಸ್ವಾಮಿಗೆ ಹೇಗೆ ದೇಶದ ಇಂಥ ರಹಸ್ಯ ಮಾಹಿತಿಗಳು ದೊರೆಯುತ್ತವೆ?, ಅರ್ನಬ್ ಗೋಸ್ವಾಮಿ ರಾಷ್ಟ್ರೀಯ ಭದ್ರತೆಯೊಂದಿಗೆ ಆಟ ಆಡಿದ್ದಾರೆ. ಇದಕ್ಕೆ ಕೇಂದ್ರ ಸರ್ಕಾರ ಹೊಣೆ. ರಾಷ್ಟ್ರೀಯ ಭದ್ರತೆಯ ಬಗ್ಗೆಯೇ ಅನುಮಾನ ಮೂಡುವಂತೆ ಆಗಿದೆ" ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿರುವ ಅರ್ನಬ್ ಗೋಸ್ವಾಮಿ, "ಒಬ್ಬ ಪತ್ರಕರ್ತ ತನ್ನ ಅಭಿಪ್ರಾಯ ವ್ಯಕ್ತಪಡಿಸಿದರೆ, ಕಾಂಗ್ರೆಸ್ ಏಕೆ ಅದನ್ನು ಅಪರಾಧ ಎಂಬಂತೆ ಬಿಂಬಿಸುತ್ತಿದೆ" ಎಂದು ಹೇಳಿದ್ದರು.