'ದೆಹಲಿಯ ರೂಪ ಬದಲಿಸಿದ ನಾಯಕಿ'ಗೆ ಗಣ್ಯರ ಶ್ರದ್ಧಾಂಜಲಿ
ನವದೆಹಲಿ, ಜುಲೈ 20: ದೆಹಲಿ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕಿ ಶೀಲಾ ದೀಕ್ಷಿತ್ (81) ಅವರ ನಿಧನಕ್ಕೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಮೂರು ಬಾರಿ ದೆಹಲಿ ಮುಖ್ಯಮಂತ್ರಿಯಾಗಿದ್ದ ಅವರು ವಯೋಸಹಜ ಕಾಯಿಲೆಗಳಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಶನಿವಾರ ಹೃದಯಾಘಾತದಿಂದ ನಿಧನಹೊಂದಿದರು. ಕಳೆದ ಲೋಕಸಭೆ ಚುನಾವಣೆಯಲ್ಲಿ ಕೂಡ ಅವರು ಸ್ಪರ್ಧಿಸಿ ಸೋಲು ಅನುಭವಿಸಿದ್ದರು.
ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ನಿಧನ
ಅಪಾರ ರಾಜಕೀಯ ಅನುಭವ ಹೊಂದಿದ್ದ ಅವರು ಎಲ್ಲ ಪಕ್ಷಗಳು ಪ್ರಮುಖ ನಾಯಕರೊಂದಿಗೆ ಒಡನಾಟ ಹೊಂದಿದ್ದರು. ಅವರ ನಿಧನಕ್ಕೆ ಪಕ್ಷಾತೀತವಾಗಿ ನಾಯಕರು, ಕಲಾವಿದರು ಸೇರಿದಂತೆ ಗಣ್ಯರು ಕಂಬನಿ ಮಿಡಿದಿದ್ದಾರೆ.
'ಶೀಲಾ ದೀಕ್ಷಿತ್ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಅವರು ಸ್ನೇಹಪರ ಮತ್ತು ಎಲ್ಲರೊಂದಿಗೆ ಬೆರೆಯುವ ವ್ಯಕ್ತಿತ್ವ ಹೊಂದಿದ್ದರು. ದೆಹಲಿಯ ಅಭಿವೃದ್ಧಿಗೆ ಅವರು ಗಣನೀಯ ಕಾಣಿಕೆ ನೀಡಿದ್ದಾರೆ. ಅವರ ಕುಟುಂಬ ಮತ್ತು ಬೆಂಬಲಿಗರಿಗೆ ನನ್ನ ಸಂತಾಪಗಳು. ಓಂ ಶಾಂತಿ' ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
'ಶೀಲಾ ದೀಕ್ಷಿತ್ ಅವರ ನಿಧನದ ಸುದ್ದಿ ಕೇಳಿ ಅಪಾರ ದುಃಖವಾಗಿದೆ. ತಮ್ಮ ಅಧಿಕಾರಾವಧಿಯಲ್ಲಿ ಅವರು ದೆಹಲಿಯ ರೂಪವನ್ನೇ ಬದಲಿಸಿದರು. ಅವರ ಕುಟುಂಬಕ್ಕೆ ಹೃದಯಪೂರ್ವಕ ಸಂತಾಪಗಳು' ಎಂದು ನಟ ಅಕ್ಷಯ್ ಕುಮಾರ್ ಹೇಳಿದ್ದಾರೆ.
ಮೋದಿ ಗುಣಗಾನ, ಶೀಲಾ ದೀಕ್ಷಿತ್ ಗೆ ಕೃತಜ್ಞತೆ ಅರ್ಪಿಸಿದ ಅಮಿತ್ ಶಾ
'ಶೀಲಾ ದೀಕ್ಷಿತ್ ಅವರು ಇನ್ನಿಲ್ಲ ಎಂಬ ದುರಂತದ ಸುದ್ದಿಯನ್ನು ಈಗಷ್ಟೇ ಕೇಳಿದೆ. ಸದಾ ನಗುಮೊಗದ ಮತ್ತು ಪ್ರೀತಿ ತುಂಬಿರುವ ಶೀಲಾ ಜಿ ಅವರು ದೆಹಲಿಯ ಅಭಿವೃದ್ಧಿಗೆ ನೀಡಿರುವ ಅಪಾರ ಕೊಡುಗೆಯಿಂದ ಸದಾ ಸ್ಮರಣೀಯರಾಗಿರುತ್ತಾರೆ ಎಂದು ಉದ್ಯಮಿ ನವೀನ್ ಜಿಂದಾಲ್ ಸಂತಾಪ ಸೂಚಿಸಿದ್ದಾರೆ.
'ಶೀಲಾ ದೀಕ್ಷಿತ್ ಅವರ ನಿಧನದ ಆಘಾತಕಾರಿ ಸಂಗತಿ ತಿಳಿಯಿತು. ಎಂತಹ ದುಃಖಕರ ಸುದ್ದಿ. ಅವರೊಬ್ಬ ತುಂಬಾ ಸ್ನೇಹಪರ ಮತ್ತು ಪ್ರೀತಿಪಾತ್ರ ಮಹಿಳೆಯಾಗಿ ನನಗೆ ಗೊತ್ತು. ಮುಖ್ಯಮಂತ್ರಿಯಾಗಿ ದೆಹಲಿಗೆ ಅದ್ಭುತಗಳನ್ನು ನೀಡಿದರು. ಅವರನ್ನು ಬಲ್ಲವರೆಲ್ಲರೂ ಅವರ ಅಗಲುವಿಕೆಯನ್ನು ಅನುಭವಿಸುತ್ತಾರೆ' ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದ್ದಾರೆ.
'ಕಾಂಗ್ರೆಸ್ ಪಕ್ಷದ ಮುದ್ದಿನ ಮಗಳಾದ ಶೀಲಾ ದೀಕ್ಷಿತ್ ಅವರ ನಿಧನದ ಸುದ್ದಿ ಕೇಳಿ ಆಘಾತವಾಗಿದೆ. ಅವರೊಂದಿಗೆ ನನ್ನ ತುಂಬಾ ವೈಯಕ್ತಿಕ ಒಡನಾಟವನ್ನು ಹೊಂದಿದ್ದೆ. ಮೂರು ಬಾರಿ ಮುಖ್ಯಮಂತ್ರಿಯಾಗಿ ನಿಸ್ವಾರ್ಥದಿಂದ ಸೇವೆ ಸಲ್ಲಿಸಿದ್ದ ಅವರ ನಿಧನದ ಈ ದುಃಖದ ಸಮಯದಲ್ಲಿ ಅವರ ಕುಟುಂಬ ಮತ್ತು ದೆಹಲಿ ನಾಗರಿಕರಿಗೆ ನನ್ನ ಸಂತಾಪಗಳು' ಎಂದು ಕಾಂಗ್ರೆಸ್ನ ನಿರ್ಗಮಿತ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
'ಶೀಲಾ ದೀಕ್ಷಿತ್ ಅವರ ಅಕಾಲಿಕ ನಿಧನದ ಸುದ್ದಿಯಿಂದ ತೀವ್ರ ದುಃಖವಾಗಿದೆ. ಜನರ ದಿಟ್ಟ ಚಾಂಪಿಯನ್, ದೆಹಲಿಯ ಸುಧಾರಣೆಗಾಗಿ ತಮ್ಮ ಜೀವನವನ್ನು ಅರ್ಪಿಸಿದ್ದರು. ರಾಜಧಾನಿಗೆ ಇದು ದೊಡ್ಡ ನಷ್ಟ' ಎಂದು ಬಿಜೆಪಿ ಸಂಸದ, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಹೇಳಿದ್ದಾರೆ.
'ದೆಹಲಿಯ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ರಾಜಕಾರಣಿ ಶೀಲಾ ದೀಕ್ಷಿತ್ ಅವರ ನಿಧನದ ವಾರ್ತೆಯಿಂದ ದುಃಖವಾಗಿದೆ. ಅವರ ಅಧಿಕಾರಾವಧಿಯು ರಾಜಧಾನಿಯ ಗಮನಾರ್ಹ ಪರಿವರ್ತನೆಯ ಗಳಿಗೆಯಾಗಿತ್ತು. ಅದಕ್ಕಾಗಿ ಅವರನ್ನು ನೆನಪಿಸಿಕೊಳ್ಳುತ್ತೇವೆ' ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಿಳಿಸಿದ್ದಾರೆ.