ಎನ್ಆರ್ಸಿಗೆ ಅರ್ಹರಲ್ಲದವರೆಲ್ಲರೂ ದೇಶದಿಂದ ಹೊರಕ್ಕೆ: ಅಮಿತ್ ಶಾ
Recommended Video
ನವದೆಹಲಿ, ಡಿಸೆಂಬರ್ 18: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ದೇಶದಾದ್ಯಂತ ಭಾರಿ ಪ್ರತಿಭಟನೆ, ಹಿಂಸಾಚಾರ ನಡೆಯುತ್ತಿದೆ. ಆದರೆ ಈ ಪ್ರತಿಭಟನೆಗಳಿಗೆ ಜಗ್ಗಿ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಗೃಹ ಸಚಿವ ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ.
ನೆರೆಯ ದೇಶಗಳಿಂದ ಧಾರ್ಮಿಕ ಕಿರುಕುಳದ ಕಾರಣದಿಂದ ಭಾರತಕ್ಕೆ ಬಂದ ಅಲ್ಪಸಂಖ್ಯಾತ ಸಮುದಾಯಗಳ ವಲಸಿಗರಿಗೆ ಭಾರತೀಯ ಪೌರತ್ವ ನೀಡಲು ತನ್ನ ಅಧಿಕಾರದ ವ್ಯಾಪ್ತಿಯಲ್ಲಿ ಇರುವ ಎಲ್ಲ ಪ್ರಯತ್ನಗಳನ್ನೂ ಸರ್ಕಾರ ಮಾಡಲಿದೆ ಎಂದು ಹೇಳಿದ್ದಾರೆ.
'ಕಂಡಲ್ಲಿ ಗುಂಡು': ಪ್ರತಿಭಟನಾಕಾರರಿಗೆ ಸುರೇಶ್ ಅಂಗಡಿ ಎಚ್ಚರಿಕೆ
'ಏನಾದರೂ ಬರಲಿ. ಈ ನಿರಾಶ್ರಿತರು ಭಾರತದ ಪೌರತ್ವ ಪಡೆಯುವುದನ್ನು ಮತ್ತು ಭಾರತೀಯರಾಗಿ ಗೌರವದಿಂದ ಬಾಳ್ವೆ ನಡೆಸುವುದನ್ನು ಮೋದಿ ಸರ್ಕಾರ ಖಾತರಿಪಡಿಸುತ್ತದೆ' ಎಂದು ದೆಹಲಿಯ ದ್ವಾರಕಾದಲ್ಲಿ ನಡೆದ ವೇಳೆ ರ್ಯಾಲಿ ವೇಳೆ ಅಮಿತ್ ಶಾ ತಿಳಿಸಿದರು.
ಪೌರತ್ವ ತಿದ್ದುಪಡಿ ಕಾಯ್ದೆಯಿಂದಾಗಿ ಯಾವ ವ್ಯಕ್ತಿಯ ರಾಷ್ಟ್ರೀಯತೆಗೂ ಧಕ್ಕೆಯಾಗುವುದಿಲ್ಲ ಎಂದ ಅಮಿತ್ ಶಾ, ಪ್ರತಿಭಟನಾಕಾರರಿಗೆ ಭರವಸೆ ನೀಡಲು ಪ್ರಯತ್ನಿಸಿದರು.
ಯಾರಿಗೂ ಅನ್ಯಾಯವಾಗುವುದಿಲ್ಲ
'ನಮ್ಮ ವಿದ್ಯಾರ್ಥಿಗಳು, ಮುಸ್ಲಿಂ ಸಹೋದರರು ಮತ್ತು ಸಹೋದರಿಯರು ಭಯಪಡುವುದು ಏನೂ ಇಲ್ಲ ಎಂದು ಹೇಳಲು ಬಯಸುತ್ತೇನೆ. ಯಾರೂ ಭಾರತದ ಪೌರತ್ವ ಕಳೆದುಕೊಳ್ಳುವುದಿಲ್ಲ. ಕಾಯ್ದೆಯ ಪ್ರತಿ ವಿವರಗಳೂ ವೆಬ್ಸೈಟ್ನಲ್ಲಿ ಲಭ್ಯವಿದೆ. ಅದನ್ನು ಯಾರು ಬೇಕಾದರೂ ಓದಬಹುದು. ನಾವು 'ಸಬ್ಕಾ ಸಾತ್, ಸಬ್ಕಾ ವಿಕಾಸ್'ನಲ್ಲಿ ನಂಬಿಕೆ ಇರಿಸಿದ್ದೇವೆ. ಯಾರಿಗೂ ಅನ್ಯಾಯವಾಗುವುದಿಲ್ಲ' ಎಂದ ಅಮಿತ್ ಶಾ, ವಿರೋಧಪಕ್ಷಗಳು ಜನರನ್ನು ತಪ್ಪುದಾರಿಗೆ ಎಳೆಯುತ್ತಿವೆ ಎಂದು ಆರೋಪಿಸಿದರು.
ನಿರಾಶ್ರಿತರ ಬದುಕು ಹೇಗಿದೆಯೆಂದು ನೋಡಲಿ
ನೆಹರೂ-ಲಿಖಾಯತ್ ಒಪ್ಪಂದದಂತೆ ಪಾಕಿಸ್ತಾನದಲ್ಲಿ ಈ ಅಲ್ಪಸಂಖ್ಯಾತರಿಗೆ ರಕ್ಷಣೆ ಸಿಗಬೇಕಿತ್ತು. ಆದರೆ ಅದು ಸಿಗಲಿಲ್ಲ. ಹಾಗಾದರೆ ಹಿಂದೂಗಳು, ಸಿಖ್ಖರು ಮತ್ತು ಇತರೆ ಅಲ್ಪಸಂಖ್ಯಾತರು ಭಾರತದಲ್ಲಿ ಇಲ್ಲವೆಂದರೆ ಬೇರೆ ಎಲ್ಲಿ ವಾಸಿಸಬೇಕು? ಎಂದು ಪ್ರಶ್ನಿಸಿದರು. ಈ ಸಮುದಾಯಗಳ ಜನರ ಜೀವನ ಪರಿಸ್ಥಿತಿಯನ್ನು ಮೊದಲು ವಿರೋಧಪಕ್ಷದವರು ನೋಡಲಿ ಎಂದು ಹೇಳಿದರು.
ಪೌರತ್ವ ಕಾಯ್ದೆ ಕಿಚ್ಚು, ಹಿಂಸಾಚಾರ; ಅಸ್ಸಾಂನಲ್ಲಿ ಕರ್ಫ್ಯೂ ತೆರವು
ಅರ್ಹರಾಗಿಲ್ಲದವರು ಹೊರಗೆ
ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ) ಯಾವುದೇ ಧರ್ಮಾಧಾರಿತ ಪ್ರಕ್ರಿಯೆಯಲ್ಲ. ಈ ಪಟ್ಟಿಯಲ್ಲಿ ಸೇರ್ಪಡೆಯಾಗಲು ಯಾರು ಅರ್ಹರಾಗಿಲ್ಲವೋ ಆ ಎಲ್ಲ ನುಸುಳುಕೋರರನ್ನೂ ದೇಶದಿಂದ ಹೊರಹಾಕಲಾಗುವುದು ಎಂದು ಅಮಿತ್ ಶಾ ಸಂದರ್ಶನವೊಂದರಲ್ಲಿ ತಿಳಿಸಿದರು.
ಯಾವ ದೇಶವೂ ನುಸುಳುಕೋರರನ್ನು ಒಪ್ಪೊಲ್ಲ
ತನ್ನ ನಾಗರಿಕರನ್ನು ನೋಂದಣಿ ಮಾಡಿಸದ ಜಗತ್ತಿನ ಯಾವುದಾದರೂ ದೇಶವಿದೆಯೇ? ಯಾರು ಬೇಕಾದರೂ ಅಮೆರಿಕಕ್ಕೆ ಹೋಗಿ ಅಲ್ಲಿನ ಪೌರತ್ವ ಪಡೆದುಕೊಳ್ಳಬಹುದೇ? ಜಗತ್ತಿನ ಯಾವ ದೇಶವೂ ಒಳನುಸುಳುಕೋರರನ್ನು ಒಪ್ಪುವುದಿಲ್ಲ. ಸೂಕ್ತ ಪ್ರಕ್ರಿಯೆಗಳಿಲ್ಲದೆ ಅವರಿಗೆ ತಮ್ಮ ದೇಶದ ಪೌರತ್ವವನ್ನು ನೀಡುವುದಿಲ್ಲ ಎಂದರು.
ಪೌರತ್ವ ಕಾಯ್ದೆಯನ್ನು ನನ್ನ ಹೆಣದ ಮೇಲೆ ಜಾರಿ ಮಾಡಿ: ಮಮತಾ ಬ್ಯಾನರ್ಜಿ
ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡುತ್ತೇವೆ
ಎನ್ಆರ್ಸಿಯಾಗಲೀ, ಸಿಎಎಯಾಗಲೀ ಭಾರತದ ಮುಸ್ಲಿಮರಿಗೆ ತೊಂದರೆಯುಂಟುಮಾಡುವುದಿಲ್ಲ. ಭಾರತದ ಯಾವ ಪೌರರೂ ಆತಂಕ ಪಡುವ ಅಗತ್ಯವಿಲ್ಲ. ಯಾರನ್ನೂ ಹೊರಹಾಕುವುದಿಲ್ಲ. ಎನ್ಆರ್ಸಿ ಪ್ರಕ್ರಿಯೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಯಾವ ಭಾರತೀಯ ನಾಗರಿಕನೂ ಬಲಿಪಶುವಾಗದಂತೆ ತಡೆಯಲು ವಿಶೇಷ ಆದ್ಯತೆ ನೀಡಲಾಗುತ್ತದೆ. ಹಾಗೆಂದು ನಾವು ಗಡಿಯನ್ನು ಮುಕ್ತವಾಗಿರಿಸಲು ಸಾಧ್ಯವಿಲ್ಲ. ದೇಶಗಳು ಆ ರೀತಿ ನಡೆಯುವುದಿಲ್ಲ ಎಂದು ಹೇಳಿದರು.
ಎಲ್ಲ ವಿ.ವಿಗಳಲ್ಲಿ ಪ್ರತಿಭಟನೆ ನಡೆದಿಲ್ಲ
ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆಗಳು ದೇಶದೆಲ್ಲೆಡೆ ವಿಶ್ವವಿದ್ಯಾಲಯಗಳಲ್ಲಿ ನಡೆಯುತ್ತಿವೆ ಎಂಬುದನ್ನು ಅಮಿತ್ ಶಾ ತಳ್ಳಿಹಾಕಿದರು. ದೇಶದಲ್ಲಿ 224 ವಿಶ್ವವಿದ್ಯಾಲಯಗಳಿವೆ. ಖಾಸಗಿಯವರನ್ನು ಸೇರಿಸಿದರೆ 300 ವಿ.ವಿಗಳು ದಾಟಲಿವೆ. ಇವುಗಳಲ್ಲಿ 22 ವಿಶ್ವವಿದ್ಯಾಲಯಗಳಲ್ಲಿ ಪ್ರತಿಭಟನೆ ನಡೆದಿದ್ದು, ನಾಲ್ಕು ಕಡೆ ಅದು ತೀವ್ರವಾಗಿದೆ. ಇನ್ನುಳಿದ ವಿ.ವಿಗಳಲ್ಲಿ ಪ್ರತಿಭಟನೆ ಸಾಮಾನ್ಯವಾಗಿದೆ. 10, 20, 30, 200, 300 ಹೀಗೆ ಪ್ರತಿಭನೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ಸಂಖ್ಯೆಯಲ್ಲಿಯೂ ಏರಿಳಿತವಿದೆ ಎಂದರು.