ಕಲ್ಲಿದ್ದಲು ಪೂರೈಕೆ ಕಟ್: ದೆಹಲಿ ಮೆಟ್ರೋ, ಆಸ್ಪತ್ರೆಗಳಲ್ಲಿ ಪವರ್ ಕಟ್!
ನವದೆಹಲಿ, ಏಪ್ರಿಲ್ 29: ರಾಷ್ಟ್ರ ರಾಜಧಾನಿಯಲ್ಲಿ ಕಲ್ಲಿದ್ದಲು ಕೊರತೆ ಸೃಷ್ಟಿಯಾಗಿರುವುದರ ಹಿನ್ನೆಲೆ ದೆಹಲಿಯ ಆಸ್ಪತ್ರೆ ಮತ್ತು ಮೆಟ್ರೋ ನಿಲ್ದಾಣ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ ಎಂದು ಸರ್ಕಾರ ಎಚ್ಚರಿಕೆ ನೀಡಿದೆ.
"ದಾದ್ರಿ-II ಮತ್ತು ಉಂಚಹಾರ್ ವಿದ್ಯುತ್ ಕೇಂದ್ರಗಳಿಂದ ವಿದ್ಯುತ್ ಪೂರೈಕೆಯಲ್ಲಿ ಅಡಚಣೆಯಾಗಿದೆ. ಇದರಿಂದಾಗಿ ದೆಹಲಿ ಮೆಟ್ರೋ ಮತ್ತು ದೆಹಲಿ ಸರ್ಕಾರಿ ಆಸ್ಪತ್ರೆಗಳು ಸೇರಿದಂತೆ ಅನೇಕ ಅಗತ್ಯ ಸಂಸ್ಥೆಗಳಿಗೆ 24 ಗಂಟೆಗಳ ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆ ಉಂಟಾಗಬಹುದು," ಎಂದು ಸರ್ಕಾರ ಹೇಳಿದೆ.
ಆತಂಕಕಾರಿ ವರದಿ: ಕಲ್ಲಿದ್ದಲು ಸುಡುವಿಕೆಯಿಂದ ಅಕಾಲಿಕ ಮರಣ ಪ್ರಮಾಣ ಹೆಚ್ಚಳ
ದೆಹಲಿಯ ವಿದ್ಯುತ್ ಸಚಿವ ಸತ್ಯೇಂದ್ರ ಜೈನ್ ಇದೀಗ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, ರಾಷ್ಟ್ರ ರಾಜಧಾನಿಗೆ ವಿದ್ಯುತ್ ಒದಗಿಸುವ ವಿದ್ಯುತ್ ಸ್ಥಾವರಗಳಿಗೆ ಸಾಕಷ್ಟು ಕಲ್ಲಿದ್ದಲು ಪೂರೈಕೆಯನ್ನು ಮಾಡುವಂತೆ ಒತ್ತಾಯಿಸಿದ್ದಾರೆ.
ಜನರು ವಿದ್ಯುತ್ ಕಡಿತ ಎದುರಿಸದಂತೆ ಕ್ರಮ:
ದೆಹಲಿಯ ಶೇ.25 ರಿಂದ ಶೇ. 30 ವಿದ್ಯುತ್ ಬೇಡಿಕೆಯನ್ನು ಪ್ರಸ್ತುತ ಕಲ್ಲಿದ್ದಲು ಚಾಲಿತ ಕೇಂದ್ರಗಳಿಂದ ಪೂರೈಸಲಾಗುತ್ತಿದೆ ಎಂದು ವಿದ್ಯುತ್ ಸಚಿವ ಸತ್ಯೇಂದ್ರ ಜೈನ್ ಹೇಳಿದ್ದಾರೆ. "ಸರ್ಕಾರವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ, ಜನರು ವಿದ್ಯುತ್ ಕಡಿತದ ಸಮಸ್ಯೆಯನ್ನು ಎದುರಿಸದಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು.
"ಈ ವಿದ್ಯುತ್ ಕೇಂದ್ರಗಳು ದೆಹಲಿಯ ಹಲವಾರು ಭಾಗಗಳಲ್ಲಿ ಬ್ಲ್ಯಾಕ್ಔಟ್ಗಳನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಬೇಸಿಗೆಯಲ್ಲಿ ದೆಹಲಿ ಮೆಟ್ರೋ ರೈಲು ನಿಗಮ, ಆಸ್ಪತ್ರೆಗಳು ಮತ್ತು ಮನೆಗಳಿಗೆ ನಿರಂತರ ವಿದ್ಯುತ್ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಇದು ಅವಶ್ಯಕವಾಗಿದೆ," ಎಂದು ವಿದ್ಯುತ್ ಸಚಿವ ಸತ್ಯೇಂದ್ರ ಜೈನ್ ಹೇಳಿದ್ದಾರೆ.
ದೆಹಲಿ ಸರ್ಕಾರದ ಭಯಕ್ಕೆ ಕಾರಣವೇನು?:
ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ (ಎನ್ಟಿಪಿಸಿ) ದ ದಾದ್ರಿ-II ಮತ್ತು ಝಜ್ಜರ್ (ಅರಾವಲಿ) ನಲ್ಲಿ ಕಲ್ಲಿದ್ದಲು ನಿಕ್ಷೇಪಗಳು ತುಂಬಾ ಕಡಿಮೆಯಾಗುತ್ತಿರುವುದು ದೆಹಲಿ ಸರ್ಕಾರದ ಭಯಕ್ಕೆ ಕಾರಣವಾಗಿದೆ. ಈ ಕೇಂದ್ರಗಳನ್ನು ಪ್ರಾಥಮಿಕವಾಗಿ ದೆಹಲಿಯಲ್ಲಿನ ವಿದ್ಯುತ್ ಅವಶ್ಯಕತೆಗಳನ್ನು ಪೂರೈಸಲು ಸ್ಥಾಪಿಸಲಾಗಿದೆ.
ದಾದ್ರಿ-II, ಉಂಚಹಾರ್, ಕಹಲ್ಗಾಂವ್, ಫರಕ್ಕಾ ಮತ್ತು ಝಜ್ಜರ್ ವಿದ್ಯುತ್ ಸ್ಥಾವರಗಳಿಂದ ದೆಹಲಿಗೆ 1,751 ಮೆಗಾವ್ಯಾಟ್ (MW) ವಿದ್ಯುತ್ ಪೂರೈಕೆಯಾಗುತ್ತದೆ. ದಾದ್ರಿ-II ಪವರ್ ಸ್ಟೇಷನ್ನಿಂದ ರಾಜಧಾನಿಯು ಗರಿಷ್ಠ 728 ಮೆಗಾವ್ಯಾಟ್ ವಿದ್ಯುತ್ ಪೂರೈಕೆಯನ್ನು ಪಡೆಯುತ್ತದೆ, ಅದೇ ರೀತಿ ಉಂಚಹಾರ್ ಕೇಂದ್ರದಿಂದ 100 ಮೆಗಾವ್ಯಾಟ್ ಪಡೆಯುತ್ತದೆ.
ವಿದ್ಯುತ್ ಬೇಡಿಕೆಯನ್ನು ಪೂರೈಸಲು ಹೆಣಗಾಟ:
ಕಲ್ಲಿದ್ದಲು ಕೊರತೆ, ಉತ್ತರ ಮತ್ತು ಪೂರ್ವದಲ್ಲಿ ಶಾಖದ ಅಲೆಯ ದೀರ್ಘಾವಧಿಯೊಂದಿಗೆ ಸೇರಿಕೊಂಡಿದೆ. ಇದರಿಂದ ದೇಶದ ಅನೇಕ ಭಾಗಗಳಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಲಿದ್ದು, ಅನೇಕ ರಾಜ್ಯಗಳು ವಿದ್ಯುತ್ ಬೇಡಿಕೆಯನ್ನು ಪೂರೈಸಲು ಹೆಣಗಾಡುತ್ತಿವೆ. ಇದರ ಮಧ್ಯೆ ದಾಸ್ತಾನುಗಳನ್ನು ನಿರ್ಮಿಸಲು ಮುಂದಿನ ಮೂರು ವರ್ಷಗಳಲ್ಲಿ ತಮ್ಮ ಆಮದುಗಳನ್ನು ಹೆಚ್ಚಿಸಲು ಕೇಂದ್ರ ಸರ್ಕಾರವು ರಾಜ್ಯಗಳನ್ನು ಕೇಳಿದೆ. ಭಾರತದಾದ್ಯಂತ ಥರ್ಮಲ್ ಪವರ್ ಪ್ಲಾಂಟ್ಗಳು ಕಲ್ಲಿದ್ದಲು ಕೊರತೆಯನ್ನು ಎದುರಿಸುತ್ತಿವೆ ಎಂದು ಆಲ್ ಇಂಡಿಯಾ ಪವರ್ ಇಂಜಿನಿಯರ್ಸ್ ಫೆಡರೇಶನ್ ಹೇಳಿದೆ, ಇದು ದೇಶದಲ್ಲಿ ವಿದ್ಯುತ್ ಬಿಕ್ಕಟ್ಟನ್ನು ಸೂಚಿಸುತ್ತದೆ.