ಕಗ್ಗಂಟಾದ ಸಿಎಂ ಆಯ್ಕೆ : ಸೋನಿಯಾ, ಪ್ರಿಯಾಂಕಾ ಜೊತೆ ರಾಹುಲ್ ಚರ್ಚೆ
ನವದೆಹಲಿ, ಡಿಸೆಂಬರ್ 13 : ಮಧ್ಯ ಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಮುಖ್ಯಮಂತ್ರಿಯ ಆಯ್ಕೆ ಅಂದುಕೊಂಡಿದ್ದಕ್ಕಿಂತ ಕಗ್ಗಂಟಾಗಿ ರಾಹುಲ್ ಗಾಂಧಿಯವರಿಗೆ ಪರಿಣಮಿಸಿದೆ. ಈ ಕಾರಣದಿಂದಾಗಿ ಮುಖ್ಯಮಂತ್ರಿಯ ಘೋಷಣೆಯನ್ನು ತಡ ಮಾಡಲಾಗುತ್ತಿದೆ.
ಮಧ್ಯ ಪ್ರದೇಶದಲ್ಲಿ ಹೆಚ್ಚಿನ ಶಾಸಕರ ಆಯ್ಕೆ 72 ವರ್ಷದ ಕಮಲ್ ನಾಥ್ ಅವರಾಗಿದ್ದರೂ, 47 ವರ್ಷದ ರಾಜ ಮನೆತನದ ಜ್ಯೋತಿರಾಧಿತ್ಯ ಸಿಂಧಿಯಾ ಅವರು, 'ನಾನೂ ಮುಖ್ಯಮಂತ್ರಿಯಾಗಿ ಜವಾಬ್ದಾರಿ ಹೊರಲು ಸಿದ್ಧ' ಎಂದು ಘೋಷಿಸಿರುವುದರಿಂದ ಆಯ್ಕೆ ಸಮಸ್ಯೆಯಾಗಿ ಪರಿಣಮಿಸಿದೆ.
ಯುವ ನಾಯಕರಿಗೆ ಮಣೆ ಹಾಕಿ ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿದ್ದಾರಾ ರಾಹುಲ್?
ರಾಜಸ್ಥಾನದಲ್ಲಿಯೂ ಇದೇ ಪರಿಸ್ಥಿತಿ ತಲೆದೋರಿದೆ. ಒಂದೆಡೆ 67 ವರ್ಷದ ಹಿರಿಯ ರಾಜಕಾರಣಿ, ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಅಶೋಕ್ ಗೆಹ್ಲೋಟ್ ಅವರು ತಾವೇ 3ನೇ ಬಾರಿ ಮುಖ್ಯಮಂತ್ರಿ ಆಗಬೇಕು ಎಂದು ಪಟ್ಟು ಹಿಡಿದಿದ್ದರೆ, 41 ವರ್ಷದ ಯುವ ರಾಜಕಾರಣಿ ಸಚಿನ್ ಪೈಲಟ್ ಕೂಡ ಮುಖ್ಯಮಂತ್ರಿ ಕುರ್ಚಿಯ ಮೇಲೆ ಕಣ್ಣು ಇಟ್ಟಿದ್ದಾರೆ.
3 ರಾಜ್ಯಗಳ ಮುಂದಿನ ಮುಖ್ಯಮಂತ್ರಿ ಯಾರು? ರಾಹುಲ್ ಹೊಸ ಐಡಿಯಾ!
ರಾಹುಲ್ ಗಾಂಧಿ ಅವರು ಸೀಕ್ರೆಟ್ ಆಗಿ ಎರಡೂವರೆ ಲಕ್ಷ ಕಾರ್ಯಕರ್ತರಿಂದ ಯಾರು ಮುಖ್ಯಮಂತ್ರಿ ಆಗಬೇಕು ಎಂದು ಅಭಿಪ್ರಾಯ ಸಂಗ್ರಹಿಸಿದ್ದರೂ ಇನ್ನೂ ನಿರ್ಧಾರಕ್ಕೆ ಬರಲಾಗಿಲ್ಲ. ಆದ್ದರಿಂದ, ಕಮಲ್ ನಾಥ್, ಜ್ಯೋತಿರಾಧಿತ್ಯ ಸಿಂಧಿಯಾ, ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ಜೊತೆ ಪ್ರತ್ಯೇಕವಾಗಿ ಈಗಾಗಲೆ ಮಾತುಕತೆ ನಡೆಸಿದ್ದಾರೆ.
ಸೋನಿಯಾ, ಪ್ರಿಯಾಂಕಾರಿಂದ ರಾಹುಲ್ ಭೇಟಿ
ಎರಡೂ ರಾಜ್ಯಗಳಲ್ಲಿ ಮುಖ್ಯಮಂತ್ರಿ ಆಯ್ಕೆಯ ಸಮಸ್ಯೆ ಇನ್ನೂ ಬಗೆಹರಿಯದಿದ್ದಾಗ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಮನೆಗೆ ಈಗ ಅವರ ತಾಯಿ ಮತ್ತು ಯುಪಿಎ ಚೇರ್ ಪರ್ಸನ್ ಸೋನಿಯಾ ಗಾಂಧಿ ಮತ್ತು ಸಹೋದರಿ ಪ್ರಿಯಾಂಕಾ ಗಾಂಧಿ ವದ್ರಾ ಅವರು ಭೇಟಿ ನೀಡಿದ್ದು, ಯಾರನ್ನು ಮುಖ್ಯಮಂತ್ರಿ ಹುದ್ದೆಗೆ ಆಯ್ಕೆ ಮಾಡಿದರೆ ಉಚಿತ ಎಂಬ ಬಗ್ಗೆ ಗಹನ ಚರ್ಚೆ ನಡೆಸಿದ್ದಾರೆ. ಈ ಭೇಟಿಯಿಂದ ಕೂಡ ರಾಹುಲ್ ಗಾಂಧಿ ಅವರು ಅಂತಿಮ ನಿರ್ಣಯಕ್ಕೆ ಬರಲಾಗಿಲ್ಲ.
ಸಂಯಮದಿಂದಿರಲು ಪೈಲಟ್ ಕೋರಿಕೆ
ಯಾವುದೇ ಗಾಳಿಸುದ್ದಿಗೆ ಕಿವಿಯಾಗಬೇಡಿ, ಖಚಿತಪಡಿಸಲಾದ ಸುದ್ದಿಯನ್ನು ಮಾತ್ರ ಪ್ರಕಟಿಸಿ. ಪಕ್ಷದ ನಾಯಕರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ಅದಕ್ಕೆ ನಾನು ಬದ್ಧ. ಪಕ್ಷದ ಕಾರ್ಯಕರ್ತರಿಗೆ ಕೂಡ ಶಾಂತಿ ಕಾಪಾಡಬೇಕೆಂದು ಮನವಿ ಮಾಡುತ್ತೇನೆ. ರಾಹುಲ್ ಜಿ ಮತ್ತು ಸೋನಿಯಾಜಿ ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ಅದನ್ನು ನಾನು ಸ್ವಾಗತಿಸುತ್ತೇನೆ. ಅವರ ಮೇಲೆ ನನಗೆ ಸಂಪೂರ್ಣ ನಂಬಿಕೆಯಿದೆ. ಪಕ್ಷದ ಗೌರವವನ್ನು ಎತ್ತಿಹಿಡಿಯುವುದು ನಮ್ಮ ಕರ್ತವ್ಯ, ನಾವು ಪಕ್ಷಕ್ಕೆ ಬದ್ಧರಾಗಿರಬೇಕಾಗುತ್ತದೆ ಎಂದು ಸಚಿನ್ ಪೈಲಟ್ ಮಾಧ್ಯಮಗಳಿಗೆ ಮತ್ತು ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
ಚುನಾವಣೆ ಫಲಿತಾಂಶ, ಅಂಕಿ ಸಂಖ್ಯೆಗಳಲ್ಲಿ ಸಚಿತ್ರ ವಿವರ
ಸಚಿನ್ ಪೈಲಟ್ ಅವರನ್ನೇ ಆಯ್ಕೆ ಮಾಡಿ
ಈ ನಡುವೆ ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷದ ಸಂಸ್ಥಾಪಕ ಮತ್ತು ಕಿನ್ವಸಾರ್ ನ ಶಾಸಕ ಹನುಮಾನ್ ಬೇನಿವಾಲ್ ಅವರು ಮತ್ತು ಅವರ ಬೆಂಬಲಿಗರು ರಾಜಸ್ಥಾನದ ಮುಂದಿನ ಮುಖ್ಯಮಂತ್ರಿಯನ್ನಾಗಿ ಸಚಿನ್ ಪೈಲಟ್ ಅವರನ್ನೇ ಆಯ್ಕೆ ಮಾಡಬೇಕೆಂದು ಆಗ್ರಹಿಸುತ್ತಿದ್ದಾರೆ. ಸಚಿನ್ ಪೈಲಟ್ ಅವರ ಅಭಿಮಾನಿಗಳು ಕೂಡ ತಮ್ಮ ಯುವ ನಾಯಕರೇ ಮುಖ್ಯಮಂತ್ರಿಯಾಗಬೇಕು ಎಂದು ಪಟ್ಟು ಹಿಡಿದು ಹೆದ್ದಾರಿಯನ್ನು ಕೂಡ ಬಂದ್ ಮಾಡಿದ್ದಾರೆ. ಈ ಕಾರಣದಿಂದಾಗಿಯೇ, ಅಭಿಮಾನಿಗಳು ಮತ್ತು ಕಾರ್ಯಕರ್ತರು ಅತ್ಯಂತ ಸಂಯಮದಿಂದ ವರ್ತಿಸಬೇಕೆಂದು ವಿನಂತಿಸಿಕೊಂಡಿದ್ದಾರೆ.
ರಾಜಸ್ಥಾನ: ಬಿದ್ದ ಕಾಂಗ್ರೆಸ್ಸಿನ ಪತಾಕೆಯನ್ನು ಹಾರಿಸಿದ 'ಪೈಲಟ್'
ಉಪ ಮುಖ್ಯಮಂತ್ರಿ ಪದವಿ ಬೇಡವೆಂದ ಸಿಂಧಿಯಾ
ಮಧ್ಯ ಪ್ರದೇಶದಲ್ಲಿ ಕೂಡ ಪರಿಸ್ಥಿತಿ ವಿಭಿನ್ನವಾಗೇನೂ ಇಲ್ಲ. ಹಿರಿಯ ನಾಯಕ ಕಮಲ್ ನಾಥ್ ಅವರಿಗೆ ಮುಖ್ಯಮಂತ್ರಿ ಪದವಿ ನೀಡಿ, ಯುವ ನಾಯಕ ಜ್ಯೋತಿರಾಧಿತ್ಯ ಸಿಂಧಿಯಾ ಅವರಿಗೆ ಉಪ ಮುಖ್ಯಮಂತ್ರಿ ಪದವಿ ನೀಡಬೇಕೆಂದು ನಿರ್ಧಾರಕ್ಕೆ ಬರಲಾಗಿತ್ತು. ಆದರೆ, ಮುಖ್ಯಮಂತ್ರಿ ಪದವಿ ನೀಡಿದರೆ ನಿಭಾಯಿಸಲು ಸಿದ್ಧ ಎಂದು ಬಹಿರಂಗವಾಗಿಯೇ ಹೇಳಿರುವ ಜ್ಯೋತಿರಾಧಿತ್ಯ ಸಿಂಧಿಯಾ ಅವರು ಉಪಮುಖ್ಯಮಂತ್ರಿ ಸ್ಥಾನ ಬೇಡವೇ ಬೇಡ ಎಂದು ಖಡಾಖಂಡಿತವಾಗಿ ನುಡಿದಿರುವುದು ರಾಹುಲ್ ಗಾಂಧಿಯವರನ್ನು ಚಿಂತೆಗೀಡು ಮಾಡಿದೆ.