ಕಾಂಗ್ರೆಸ್ನಲ್ಲಿ ಮೊದಲೇ ಮುಖ್ಯಮಂತ್ರಿ ಘೋಷಿಸುವುದಿಲ್ಲ: ರಾಹುಲ್ಗಾಂಧಿ ಖಡಕ್ ಹೇಳಿಕೆ
ಬೆಂಗಳೂರು, ಜೂ.29: ಚುನಾವಣೆಗೆ ಆರು ತಿಂಗಳ ಮುಂಚಿತವಾಗಿಯೇ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡಬೇಕು ಎಂಬ ಸಿದ್ದರಾಮಯ್ಯ ಬೆಂಬಲಿಗರ ಒತ್ತಾಯಕ್ಕೆ ಕಾಂಗ್ರೆಸ್ ಹೈಕಮಾಂಡ್ ಸಹಮತ ವ್ಯಕ್ತಪಡಿಸಿಲ್ಲ. ಬದಲಿಗೆ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಿ ಪಕ್ಷ ಅಧಿಕಾರಕ್ಕೆ ಬರಲಿ. ಆ ಬಳಿಕ ಮುಖ್ಯಮಂತ್ರಿ ಯಾರೆಂದು ನಿರ್ಧಾರ ಆಗುತ್ತದೆ ಎಂಬ ಸ್ಪಷ್ಟ ಸಂದೇಶವೊಂದನ್ನು ನೀಡಿ ರಾಜ್ಯ ನಾಯಕರನ್ನು ವಾಪಸ್ ಕಳುಹಿಸಲಾಗಿದೆ.
ಕರ್ನಾಟಕ ವಿಧಾನಸಭೆ ಚುನಾವಣೆಗೆ ಸಿದ್ಧತೆ, ತಂತ್ರಗಾರಿಕೆ ಮತ್ತು ಪ್ರಚಾರ ಕುರಿತು ದೆಹಲಿಯಲ್ಲಿ ಮಂಗಳವಾರ ನಡೆದ ಸಮಾಲೋಚನಾ ಸಭೆಯಲ್ಲಿ ಪಕ್ಷದ ವರಿಷ್ಠರಾದ ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭಾಗವಹಿಸಿದ್ದರು.
ಬಿಜೆಪಿಯನ್ನು ಎದುರಿಸುವ ಶಕ್ತಿ ಸಿದ್ದರಾಮಯ್ಯ ಅವರಿಗೆ ಮಾತ್ರ ಇದೆ. ಅವರ ಸಾರಥ್ಯದಲ್ಲಿ ಚುನಾವಣೆ ನಡೆದರೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಅಲ್ಲದೆ ಅಹಿಂದ ಸಹಿತ ಎಲ್ಲಾ ಜಾತಿಗಳೂ ಸಿದ್ದರಾಮಯ್ಯ ಬೆಂಬಲಕ್ಕೆ ನಿಲ್ಲುತ್ತವೆ. ಆದ್ದರಿಂದ ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿ ಎಂಬ ಘೋಷಣೆ ಮಾಡುವಂತೆ ಸಿದ್ದರಾಮಯ್ಯ ಬೆಂಬಲಿಗರು ಹೈಕಮಾಂಡ್ ಮೇಲೆ ಈಗಾಗಲೇ ಒತ್ತಡ ತಂದಿದ್ದರು. ಇದಕ್ಕೆ ಪ್ರತಿಯಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸಿಎಂ ಅಭ್ಯರ್ಥಿಯನ್ನು ಮೊದಲೇ ಘೋಷಿಸಿದದಲ್ಲಿ ಪ್ರಭಲ ಸಮುದಾಯಗಳ ಮತಗಳು ಕೈತಪ್ಪುವ ಸಂಭವ ಇದೆ. ಹೀಗಾಗಿ ಸಾಮೂಹಿಕ ನಾಯಕತ್ವದಲ್ಲಿಯೆ ಚುನಾವಣೆ ಎದುರಿಸುವುದು ಸೂಕ್ತ ಎಂಬ ಅಭಿಪ್ರಾಯವನ್ನು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ನಾಯಕರನ್ನು ದೆಹಲಿಗೆ ಅಹ್ವಾನಿಸಿ ಮಾತುಕತೆ ನಡೆಸಲಾಯಿತು.
ಹೈಕಮಾಂಡ್ ಖಡಕ್ ಸಂದೇಶ
ಕರ್ನಾಟಕದಲ್ಲ ಕಾಂಗ್ರೆಸ್ ಚುನಾವಣಾ ನಾಯಕತ್ವ ಯಾರಿಗೆ? ಪಕ್ಷ ಅಧಿಕಾರಕ್ಕೆ ಬಂದಲ್ಲಿ ಯಾರನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ರಾಜ್ಯ ನಾಯಕರ ವಿವಿಧ ಬಣಗಳ ಬೇಡಿಕೆಗಳನ್ನು ಹೈಕಮಾಂಡ್ ಸ್ಪಷ್ಟವಾಗಿ ನಿರಾಕರಿಸಿದೆ. ಕಾಂಗ್ರೆಸ್ನಲ್ಲಿ ಮೊದಲೇ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡುವ ಪದ್ಧತಿ ಇಲ್ಲ. ಒಂದು ವೇಳೆ ಮೊದಲೇ ಘೋಷಣೆ ಮಾಡಿದರೆ ಅದು ಬೇರೆ ತರಹದ ಕಲಹಕ್ಕೆ ದಾರಿಯಾಗುತ್ತದೆ. ಮೊದಲು ನಾಯಕರುಗಳ ಮಧ್ಯೆ ಯಾವುದೇ ಭಿನ್ನಮತ ತೋರಿಸಿಕೊಳ್ಳದೆ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಿ ಕರ್ನಾಟಕವನ್ನು ಗೆದ್ದುಕೊಂಡು ಬನ್ನಿ. ಬಳಿಕ ಸಿಎಂ ಯಾರೆಂದು ನಿರ್ಧಾರವಾಗುತ್ತದೆ ಎಂದು ರಾಹುಲ್ ಗಾಂಧಿ ಖಡಕ್ ಸಂದೇಶ ನೀಡಿದ್ದಾರೆ ಎಂದು ಹೇಳಲಾಗಿದೆ.
ಇಬ್ಬರ ನಡುವೆ ಪೈಪೋಟಿ
ಮೇಲ್ನೋಟಕ್ಕೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಒಟ್ಟಾಗಿ ಕಾಣಿಸಿಕೊಂಡರೂ ಸಹ ಪಕ್ಷದೊಳಗೆ ಎರಡು ಬಣಗಳ ರಾಜಕೀಯ ಸ್ಪಷ್ಟವಾಗಿ ಕಾಣಿಸುತ್ತಿದೆ. ಕಾಂಗ್ರೆಸ್ ನಾಯಕರು ಇಬ್ಬರಲ್ಲಿ ಒಬ್ಬರ ಜೊತೆ ಗುರುತಿಸಿಕೊಳ್ಳುವುದು ಅನಿವಾರ್ಯ ಎಂಬ ವಾತಾವರಣ ನಿರ್ಮಾಣವಾಗಿದೆ. ಒಬ್ಬರ ಜೊತೆ ಗುರುತಿಸಿಕೊಂಡವರು ಮತ್ತೊಬ್ಬರ ಕೆಂಗಣ್ಣಿಗೆ ಗುರಿಯಾಗಿರುವ ಘಟನೆಗಳೂ ಇತ್ತೀಚೆಗೆ ನಡೆದು ಅದು ಬಹಿರಂಗವಾಗಿಯೂ ಸ್ಫೋಟಗೊಂಡಿದೆ. ಎರಡೂ ಬಣಗಳ ಬೆಂಬಲಿಗರು ತಮ್ಮ ನಾಯಕನ ನೇತೃತ್ವದಲ್ಲಿಯೇ ಚುನಾವಣೆ ನಡೆಯಬೇಕು ಎಂಬ ಪಟ್ಟು ಹಿಡಿದಿದ್ದಾರೆ. ಈ ಮಧ್ಯೆ ಚುನಾವಣೆಗೆ ಹಲವು ತಿಂಗಳು ಬಾಕಿ ಇರುವಾಗಲೇ ಕಾಂಗ್ರೆಸ್ ಹೈಕಮಾಂಡ್ ರಾಜ್ಯ ನಾಯಕರನ್ನು ದೆಹಲಿಗೆ ಆಹ್ವಾನಿಸಿ ಒಟ್ಟಾಗಿ ಹೋದರೆ ಮಾತ್ರ ಅಧಿಕಾರ ಸಿಗಲು ಸಾಧ್ಯ ಎಂಬ ಸಂದೇಶ ರವಾನಿಸಿ ಕಳುಹಿಸಿದ್ದಾರೆ.
ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗಿ
ಕರ್ನಾಟಕ ಕಾಂಗ್ರೆಸ್ನ ಭರವಸೆಯ ರಾಜ್ಯ. ಸಂಘಟನಾತ್ಮಕವಾಗಿ ಕೆಲಸ ಮಾಡಿದಲ್ಲಿ ಖಂಡಿತವಾಗಿಯೂ ಇಲ್ಲಿ ಅಧಿಕಾರಕ್ಕೆ ಬರಬಹುದು. ಆದ್ದರಿಂದ ಎಲ್ಲಾ ಜಾತಿಗಳ ಮತಗಳನ್ನೂ ಕ್ರೋಢೀಕರಣ ಮಾಡುವ ಮೂಲಕ ಪಕ್ಷ ಸಂಘಟನೆ ಮಾಡಬೇಕು. ಯಾರನ್ನೂ ಸಹ ವಿರೋಧ ಕಟ್ಟಿಕೊಳ್ಳದೆ, ಒಬ್ಬರ ಪರವಾಗಿ ಪಕ್ಷವನ್ನೂ ಜವಾಬ್ದಾರಿಗೆ ವಹಿಸಿದೆ ಸಂಘಟನಾತ್ಮಕವಾಗಿ ಹೋಗುವಂತೆ ಸಲಹೆ ನೀಡಿದ್ದಾರೆ. ಬಿಜೆಪಿ ಪ್ರಯತ್ನಗಳನ್ನು ವಿಫಲಗೊಳಿಸುವ ಮೂಲಕ ಜಾತಿ ಸಮೀಕರಣಕ್ಕೆ ಆದ್ಯತೆ ನೀಡಬೇಕು ಎಂಬ ಬಗ್ಗೆ ಚರ್ಚಿಸಲಾಗಿದೆ ಎಂದು ಹೇಳಲಾಗಿದೆ.
ಕಾಂಗ್ರೆಸ್ಗೆ ಸುಲಭ ಬಹುಮತ
ಕಾಂಗ್ರೆಸ್ ನಡೆಸಿದ ಆಂತರಿಕ ಸಮೀಕ್ಷೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ಗೆ 102ರಿಂದ 122 ಸ್ಥಾನಗಳು ಬರುವ ಸಾಧ್ಯತೆ ಇದೆ. ಇಂತಹ ಸಂದರ್ಭದಲ್ಲಿ ಪಕ್ಷದ ವರ್ಚಸ್ಸನ್ನು ಹೀಗೆಯೇ ಕಾಪಾಡಿಕೊಂಡು ಹೋಗಬೇಕು. ಕಾಂಗ್ರೆಸ್ಗೆ ಪ್ರಮುಖವಾಗಿ ಆಡ್ಡಾಗಲು ಆಗುವಂತಹ ಎಸ್ಡಿಪಿಐ, ಪಿಎಫ್ಐ ಅಂತಹವುಗಳನ್ನು ಹೇಗೆ ನಿಯಂತ್ರಣ ಮಾಡಬೇಕು ಎಂಬುದರ ಬಗ್ಗೆಯೂ ಚರ್ಚಿಸಲಾಯಿತು.
Recommended Video