ನವದೆಹಲಿಯಲ್ಲಿ ಮೃತ ವೈದ್ಯರ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ
ನವದೆಹಲಿ, ಜುಲೈ.03: ಕೊರೊನಾವೈರಸ್ ಸೋಂಕಿನಿಂದ ಪ್ರಾಣ ಬಿಟ್ಟ ನವದೆಹಲಿಯ ಹಿರಿಯ ವೈದ್ಯ ಅಸೀಮ್ ಗುಪ್ತಾ ಅವರ ಕುಟುಂಬಕ್ಕೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಒಂದು ಕೋಟಿ ರೂಪಾಯಿ ಪರಿಹಾರದ ಚೆಕ್ ನೀಡಿದ್ದಾರೆ.
Recommended Video
ಶುಕ್ರವಾರ ಮೃತ ಹಿರಿಯ ವೈದ್ಯ ಡಾ.ಅಸೀಮ್ ಗುಪ್ತಾ ನಿವಾಸಕ್ಕೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭೇಟಿ ನೀಡಿದರು. ಈ ವೇಳೆ ವೈದ್ಯರ ಪುತ್ರಿಗೆ ಸಾಂತ್ವನ ಹೇಳಿದ ಸಿಎಂ, ಸರ್ಕಾರದ ಘೋಷಿಸಿದ 1 ಕೋಟಿ ರೂಪಾಯಿ ಮೌಲ್ಯದ ಚೆಕ್ ನ್ನು ನೀಡಿದರು.
ಕೊರೊನಾವೈರಸ್ ನಿಂದ ಬಲಿಯಾದ ಹಿರಿಯ ವೈದ್ಯರಿಗೆ ಸಿಎಂ ಸಂತಾಪ!
ನವದೆಹಲಿಯ ಲೋಕನಾಯಕ್ ಜಯಪ್ರಕಾಶ್ ನಾರಾಯಣ ಆಸ್ಪತ್ರೆಯಲ್ಲಿ ಅರಿವಳಿಕೆ ತಜ್ಞರಾಗಿದ್ದ ಡಾ.ಅಸೀಮ್ ಗುಪ್ತಾರಿಗೆ ಕಳೆದ ಜೂನ್.06ರಂದು ಕೊರೊನಾವೈರಸ್ ಸೋಂಕು ತಗಲಿರುವುದು ದೃಢಪಟ್ಟಿತ್ತು.
ಜೂನ್.28ರಂದು
ಮೃತಪಟ್ಟಿದ್ದ
ಡಾ.ಅಸೀಮ್
ಗುಪ್ತಾ:
ಹಿರಿಯ ವೈದ್ಯರಾಗಿದ್ದ ಅಸೀಮ್ ಗುಪ್ತಾ ಮನವಿ ಮೇರೆಗೆ ಅವರನ್ನು ದಕ್ಷಿಣ ದೆಹಲಿಯಲ್ಲಿರುವ ಮ್ಯಾಕ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಕೊರೊನಾವೈರಸ್ ಸೋಂಕಿನಿಂದ ಬಳಲುತ್ತಿದ್ದ ಅವರು ಜೂನ್.28ರ ಭಾನುವಾರ ಚಿಕಿತ್ಸೆ ಫಲಕಾರಿಯಾಗದೇ ಪ್ರಾಣ ಬಿಟ್ಟಿದ್ದಾರೆ. ಲೋಕನಾಯಕ್ ಜಯಪ್ರಕಾಶ್ ನಾರಾಯಣ ಆಸ್ಪತ್ರೆಯಲ್ಲಿ ಎ ಗ್ರೇಡ್ ಅಧಿಕಾರಿಯಾಗಿದ್ದ ಡಾ.ಅಸೀಮ್ ಗುಪ್ತಾ ಅರಿವಳಿಕೆ ತಜ್ಞರು ಎನಿಸಿದ್ದರು.
ನವದೆಹಲಿಯಲ್ಲಿ ದಿನದಿಂದ ದಿನಕ್ಕೆ ಕೊರೊನಾವೈರಸ್ ಸೋಂಕಿತರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. 92175 ಜನ ಕೊರೊನಾವೈರಸ್ ಸೋಂಕಿತರಿದ್ದು, ಈ ಪೈಕಿ 63007 ಜನ ಗುಣಮುಖರಾಗಿದ್ದಾರೆ. ಬಾಕಿ ಉಳಿದ 26304 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ನವದೆಹಲಿಯಲ್ಲಿ ಇದುವರೆಗೂ ಮಹಾಮಾರಿಗೆ 2864 ಜನರು ಪ್ರಾಣ ಬಿಟ್ಟಿದ್ದಾರೆ.