ಕೃಷಿ ಕಾಯ್ದೆ ತಡೆಯುವ ಅವಕಾಶ ಕೈ ಚೆಲ್ಲಿದರಾ ಪಂಜಾಬ್ ಸಿಎಂ ಅಮರೀಂದರ್?
ನವದೆಹಲಿ, ಡಿಸೆಂಬರ್.02: ಕೃಷಿ ಕಾಯ್ದೆಗೆ ಸಂಬಂಧಿಸಿದಂತೆ ಪಂಜಾಬ್ ಸರ್ಕಾರದ ವಿರುದ್ಧ ನವದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕಿಡಿ ಕಾರಿದ್ದಾರೆ. ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಎದುರಿನಲ್ಲಿ ಕೃಷಿ ಕಾಯ್ದೆ ತಡೆಯುವ ಎಲ್ಲ ಅವಕಾಶಗಳಿದ್ದವು. ಅದನ್ನು ಬಿಟ್ಟು ನಮ್ಮ ವಿರುದ್ಧ ಬೊಟ್ಟು ಮಾಡುತ್ತಿದ್ದಾರೆ ಎಂದು ಕೇಜ್ರಿವಾಲ್ ದೂಷಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಕೇಜ್ರಿವಾಲ್, "ಸೂಕ್ಷ್ಮ ಸಂದರ್ಭದಲ್ಲಿ ಕೀಳು ಮಟ್ಟದ ರಾಜಕಾರಣ ಮಾಡುವುದು ಸರಿಯಲ್ಲ ಎಂದಿದ್ದಾರೆ. ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ಅವರು, ದೆಹಲಿಯಲ್ಲಿ "ಕಪ್ಪು ಕಾಯ್ದೆ"ಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದು ಆರೋಪಿಸುವುದರಲ್ಲಿ ಹುರುಳಿಲ್ಲ. ಕಾನೂನುಗಳನ್ನು ಜಾರಿಗೊಳಿಸುವುದು ರಾಜ್ಯ ಸರ್ಕಾರದ ವ್ಯಾಪ್ತಿಗೂ ಬರುವುದಿಲ್ಲ. ಹಾಗಿದ್ದಲ್ಲಿ ರೈತರು ಕೇಂದ್ರದ ಜೊತೆಗೆ ಏಕೆ ಮಾತುಕತೆಗೆ ಮುಂದಾಗುತ್ತಾರೆ" ಎಂದು ಪ್ರಶ್ನೆ ಮಾಡಿದ್ದಾರೆ.
ಸರ್ಕಾರಕ್ಕೆ ಇದು ಕೊನೆ ಅವಕಾಶ: ರೈತ ಸಂಘಟನೆಗಳ ಎಚ್ಚರಿಕೆ
ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ಆರೋಪದ ಹಿಂದಿನ ಕಾರಣದ ಬಗ್ಗೆ ಉಲ್ಲೇಖಿಸಿ ಸಿಎಂ ಅರವಿಂದ್ ಕೇಜ್ರಿವಾಲ್ ಮಾತು ಆರಂಭಿಸಿದರು. ಮೊದಲಿಗೆ ದೆಹಲಿಯ 9 ಕ್ರೀಡಾಂಗಣಗಳನ್ನು ತಾತ್ಕಾಲಿಕ ಕಾರಾಗೃಹಗಳಾಗಿ ಪರಿವರ್ತಿಸಲು ಕೇಂದ್ರ ಸರ್ಕಾರವು ಮುಂದಾಗಿತ್ತು. ಈ ತಾತ್ಕಾಲಿಕ ಜೈಲುಗಳಲ್ಲಿ ರೈತರನ್ನು ಇರಿಸಲು ಪ್ಲ್ಯಾನ್ ಮಾಡಲಾಗಿತ್ತು. ರಾಜ್ಯ ಸರ್ಕಾರವು ಇದಕ್ಕೆ ಅನುಮತಿ ನೀಡಲಿಲ್ಲ. ಈ ಹಿನ್ನೆಲೆ ದೆಹಲಿ ಸರ್ಕಾರದ ವಿರುದ್ಧ ದೂಷಿಸಲಾಗುತ್ತಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಬಿಜೆಪಿ ಜೊತೆಗೆ ನೀವು ಸ್ನೇಹ ಬಯಸಿದ್ದೀರಾ?
"ದೆಹಲಿ ಕ್ರೀಡಾಂಗಣಗಳನ್ನು ರೈತರನ್ನು ಕೂಡಿ ಹಾಕುವ ತಾತ್ಕಾಲಿಕ ಜೈಲುಗಳಾಗಿ ಪರಿವರ್ತಿಸಲು ಬಿಜೆಪಿ ಮುಂದಾಗಿತ್ತು. ಇದನ್ನು ನಿರಾಕರಿಸಿದ ಕಾರಣಕ್ಕಾಗಿ ಬಿಜೆಪಿಗರ ಒತ್ತಡದಿಂದ ನೀವು ನಮ್ಮ ವಿರುದ್ಧ ಬೊಟ್ಟು ತೋರಿಸುತ್ತಿದ್ದಂತೆ ಕಾಣುತ್ತಿದೆ. ನೀವೇನು ಬಿಜೆಪಿಯವರೊಂದಿಗೆ ಗೆಳೆತನ ಬಯಸುತ್ತಿದ್ದೀರಾ ಅಥವಾ ನಿಮ್ಮ ಮೇಲೆ ಮತ್ತು ನಿಮ್ಮ ಕುಟುಂಬ ಸದಸ್ಯರ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸುತ್ತಾರೆ ಎಂಬ ಭಯದಲ್ಲಿದ್ದೀರಾ" ಎಂದು ಸಿಎಂ ಕೇಜ್ರಿವಾಲ್ ಪ್ರಶ್ನೆ ಮಾಡಿದ್ದಾರೆ.
ಕೃಷಿ ಕಾಯ್ದೆ ಜಾರಿಗೂ ಮೊದಲು ಏಕೆ ತಡೆಯಲಿಲ್ಲ?
"ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಅವರಿಗೆ ಕೃಷಿ ಸಂಬಂಧಿತ ಕಾಯ್ದೆಯನ್ನು ತಡೆಯುವುದಕ್ಕೆ ಸಾಕಷ್ಟು ಅವಕಾಶಗಳಿದ್ದವು. 1 ವರ್ಷ 5 ತಿಂಗಳ ಹಿಂದೆ 2019ರಲ್ಲಿ ಕೃಷಿ ಸಂಬಂಧಿತ ಕಾಯ್ದೆಗಳನ್ನು ರೂಪಿಸುವ ಕುರಿತು ಒಂದು ಸಮಿತಿಯನ್ನು ರಚಿಸಲಾಗಿತ್ತು. ಸ್ವತಃ ಅಮರೀಂದರ್ ಸಿಂಗ್ ಸಹ ಈ ಸಮಿತಿ ಸದಸ್ಯರಾಗಿದ್ದರು. ಅಂದೇ ಈ ಕಪ್ಪು ಕಾಯ್ದೆಗಳು ಜಾರಿಗೊಳ್ಳದಂತೆ ತಡೆಯಲು ಏಕೆ ಸಾಧ್ಯವಾಗಲಿಲ್ಲ. ಅಮರೀಂದರ್ ಸಿಂಗ್ ಅಂದೇ ಆ ಕೆಲಸವನ್ನು ಮಾಡಿದ್ದರೆ, ಇಂದು ಪಂಜಾಬ್ ರೈತರು ಸರ್ಕಾರವನ್ನು ಪ್ರಶ್ನೆ ಮಾಡುವ ಅಗತ್ಯವೇ ಇರುತ್ತಿರಲಿಲ್ಲ" ಎಂದು ಕೇಜ್ರಿವಾಲ್ ಕಿಡಿ ಕಾರಿದ್ದಾರೆ.
ಏಳನೇ ದಿನಕ್ಕೆ ಕಾಲಿಟ್ಟಿರುವ ರೈತರ ಹೋರಾಟ
ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಕೃಷಿ ಕಾಯ್ದೆ ವಿರುದ್ಧ ರೈತರು ನಡೆಸುತ್ತಿರುವ ಹೋರಾಟವು 7ನೇ ದಿನಕ್ಕೆ ಕಾಲಿಟ್ಟಿದೆ. ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆಯೂ ಸಪ್ಟೆಂಬರ್ ನಲ್ಲಿ ನಡೆದ ಸಂಸತ್ ಅಧಿವೇಶನದಲ್ಲಿ ವಿವಾದಾತ್ಮಕ ಮಸೂದೆಯನ್ನು ಅಂಗೀಕರಿಸಲಾಗಿತ್ತು. ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ನವೆಂಬರ್.26ರಂದು ರೈತರು ದಿಲ್ಲಿ ಚಲೋ ಪ್ರತಿಭಟನೆ ಕೈಗೊಂಡರು. ಕಳೆದ ಶುಕ್ರವಾರ ದೆಹಲಿ ಗಡಿ ಪ್ರದೇಶವನ್ನು ಪ್ರವೇಶಿಸಿದ ರೈತರು ಕೇಂದ್ರ ಸರ್ಕಾರಕ್ಕೆ ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.
ಗುರುವಾರವೇ ಕೇಂದ್ರ ಸರ್ಕಾರಕ್ಕೆ ಕೊನೆ ಅವಕಾಶ
ಕೃಷಿ ಕಾಯ್ದೆ ವಿರುದ್ಧ ನಡೆಯುತ್ತಿರುವ ಹೋರಾಟವನ್ನು ಪಂಜಾಬ್ ರೈತರ ಹೋರಾಟ ಎನ್ನುವಂತೆ ಬಿಂಬಿಸಲು ಕೇಂದ್ರ ಸರ್ಕಾರವು ಪ್ರಯತ್ನಿಸುತ್ತಿದೆ. ನಮ್ಮಲ್ಲಿಯೇ ಒಡುಕು ಮೂಡಿಸುವ ಕಾರ್ಯ ಮಾಡಲಾಗುತ್ತಿದೆ. ಡಿಸೆಂಬರ್.03ರಂದು ನಡೆಯುವ ಸಂಧಾನ ಸಭೆಯೇ ಸರ್ಕಾರಕ್ಕೆ ಕೊನೆಯ ಅವಕಾಶವಾಗಿದೆ. ತುರ್ತು ಅಧಿವೇಶನವನ್ನು ಕರೆದು ವಿವಾದಿತ ಕಾಯ್ದೆಗಳನ್ನು ವಾಪಸ್ ಪಡೆದುಕೊಳ್ಳಬೇಕು. ಅದರ ಜೊತೆಗೆ ರೈತರ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ರೈತ ಮುಖಂಡರು ಆಗ್ರಹಿಸಿದ್ದಾರೆ.