'ಪೌರತ್ವ ಕಾಯ್ದೆ' ವಿರುದ್ಧ ಹೋರಾಟಕ್ಕೂ ಮೊದಲು ಈ ಸುದ್ದಿ ನೋಡಿ
ದೆಹಲಿ, ಡಿಸೆಂಬರ್.18: ಕೇಂದ್ರ ಸರ್ಕಾರ ಜಾರಿಗೊಳಿಸಿದ ಪೌರತ್ವ ಕಾಯ್ದೆ ಮುಸ್ಲಿಂ ಸಮುದಾಯದ ಜನರನ್ನು ಕೆರಳಿಸಿದೆ. ದೆಹಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಬಳಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದುಕೊಂಡಿದೆ.
ದೇಶಾದ್ಯಂತ ಜಾಮಿಯಾ ವಿವಿ ವಿದ್ಯಾರ್ಥಿಗಳ ಮೇಲೆ ಪೊಲೀಸರು ಕೈಗೊಂಡ ಕ್ರಮಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಇದರ ಮಧ್ಯೆ ದೇಶದ ಮುಸ್ಲಿಮರಿಗೆ ಜಾಮಿಯಾ ಮಸೀದಿ ಪಾದ್ರಿ ಇಮಾಮ್ ಅಹ್ಮದ್ ಬುಖಾರಿ ಸಂದೇಶ ರವಾನಿಸಿದ್ದಾರೆ.
ಜಾಮಿಯಾ ವಿವಿ ಎದುರು ಪ್ರತಿಭಟನೆ ಮಾಡಿದ್ದು ವಿದ್ಯಾರ್ಥಿಗಳಷ್ಟೇ ಅಲ್ಲ
ಭಾರತದಲ್ಲಿ ಪ್ರತಿಭಟನೆ ನಡೆಸಲು ಬೀದಿಗಿಳಿದ ಪ್ರತಿಯೊಬ್ಬರಿಗೂ ಮುಸ್ಲಿಂ ಪಾದ್ರಿ ಹೇಳಿರುವ ಮಾತು ಅನ್ವಯವಾಗಲಿದೆ. ದೇಶದ ಬಗ್ಗೆ ಮೆಚ್ಚುಗೆಯ ಮಾತು ಆಡಿರುವ ಪಾದ್ರಿಗಳು, ಪೌರತ್ವ ಕಾಯ್ದೆಯ ನಿಜವಾದ ಅರ್ಥವನ್ನು ಬಿಡಿಸಿ ಹೇಳಿದ್ದಾರೆ.
ಭಾರತೀಯ ಮುಸ್ಲಿಂರಿಗೆ ಯಾವುದೇ ಸಮಸ್ಯೆಯಿಲ್ಲ
ಕೇಂದ್ರ ಸರ್ಕಾರ ಜಾರಿಗೊಳಿಸಿದ ಪೌರತ್ವ ಕಾಯ್ದೆಯಿಂದ ಭಾರತದಲ್ಲಿ ನೆಲೆಸಿರುವ ಮುಸ್ಲಿಂರಿಗೆ ಯಾವುದೇ ರೀತಿಯಲ್ಲೂ ತೊಂದರೆ ಆಗುವುದಿಲ್ಲ ಎಂದು ಜಾಮಾ ಮಸೀದಿಯ ಪಾದ್ರಿ ಇಮಾಮ್ ಅಹ್ಮದ್ ಬುಖಾರಿ ಸ್ಪಷ್ಟ ಪಡಿಸಿದ್ದಾರೆ. ದೇಶದಲ್ಲಿ ಈಗಾಗಲೇ ವಾಸವಿರುವ ಮುಸ್ಲಿಂರಿಗೂ ಪೌರತ್ವ ಕಾಯ್ದೆಗೂ ಯಾವುದೇ ಸಂಬಂಧವಿಲ್ಲ. ಈ ಬಗ್ಗೆ ಮೊದಲು ಅರ್ಥ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
"ಪ್ರತಿಭಟನೆ ಭಾವನಾತ್ಮಕ ವಿಚಾರವಾಗಬಾರದು"
ದೆಹಲಿಯಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗೆ ಪಾದ್ರಿ ಇಮಾಮ್ ಅಹ್ಮದ್ ಬುಖಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಪ್ರತಿಭಟನೆ ನಡೆಸುವ ಪ್ರಜಾಪ್ರಭುತ್ವದ ಹಕ್ಕಾಗಿದೆ. ನಮ್ಮ ಹೋರಾಟವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಆದರೆ, ಪ್ರತಿಭಟನೆಯು ಭಾವನಾತ್ಮಕ ಅಂಶವಾಗಬಾರದು. ಪ್ರತಿಯೊಬ್ಬರೂ ಕೂಡಾ ಮನಸಿನ ಮೇಲೆ ನಿಯಂತ್ರಣ ಇಟ್ಟುಕೊಂಡು ಪ್ರತಿಭಟನೆ ನಡೆಸಬೇಕು ಎಂದು ಪಾದ್ರಿಗಳು ಹೇಳಿದ್ದಾರೆ.
ಪೌರತ್ವ ತಿದ್ದುಪಡಿ ಕಾನೂನಿಗೆ ತಡೆ ನೀಡುವುದಿಲ್ಲ: ಸುಪ್ರೀಂಕೋರ್ಟ್
ಎನ್ಆರ್ ಸಿ ಹಾಗೂ ಸಿಎಎ ಬಗ್ಗೆ ಮೊದಲು ತಿಳಿಯಿರಿ
ಪೌರತ್ವ ಕಾಯ್ದೆ (ಸಿಎಎ) ಹಾಗೂ ರಾಷ್ಟ್ರೀಯ ನಾಗರಿಕ ನೋಂದಣಿ (ಎನ್ಆರ್ ಸಿ) ಎರಡೂ ಒಂದೇ ಅಲ್ಲ. ಇದರ ನಡುವಿನ ವ್ಯತ್ಯಾಸವನ್ನು ಮೊದಲು ತಿಳಿದುಕೊಳ್ಳಬೇಕು. ಪೌರತ್ವ ಕಾಯ್ದೆಯು ಭಾರತದ ಮುಸ್ಲಿಂ ಪ್ರಜೆಗಳಿಗೆ ಅನ್ವಯ ಆಗುವುದಿಲ್ಲ. ಪಾಕಿಸ್ತಾನ್, ಅಫ್ಘಾನಿಸ್ತಾನ್, ಹಾಗೂ ಬಾಂಗ್ಲಾದೇಶದಿಂದ ವಲಸೆ ಬಂದಿರುವ ಮುಸ್ಲಿಂರಿಗೆ ಭಾರತದ ಪೌರತ್ವ ನೀಡದಿರಲು ಕಾಯ್ದೆಯಲ್ಲಿ ಹೇಳಲಾಗಿದೆ. ಇದರಿಂದ ಭಾರತದ ಮುಸ್ಲಿಂ ಪ್ರಜೆಗಳಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದಿದ್ದಾರೆ.
ಇನ್ನು, ಪೌರತ್ವ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕ ನೋಂದಣಿ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಸಿಎಎ ಎಂಬುದು ಒಂದು ಕಾಯ್ದೆಯಾಗಿದೆ. ಆದರೆ, ರಾಷ್ಟ್ರೀಯ ನಾಗರಿಕ ನೋಂದಣಿ ಎಂಬುದು ಕೇವಲ ಘೋಷಣೆಯೇ ಹೊರತೂ ಕಾಯ್ದೆಯಲ್ಲ. ಈ ಬಗ್ಗೆ ಸ್ಪಷ್ಟತೆ ಇರಲಿ ಎಂದು ಪಾದ್ರಿ ಇಮಾಮ್ ಅಹ್ಮದ್ ಬುಖಾರಿ ತಿಳಿಸಿದ್ದಾರೆ.
ಸರ್ಕಾರಕ್ಕೆ ಪದ್ಮಶ್ರೀ ಪ್ರಶಸ್ತಿ ವಾಪಸ್ ಕೊಟ್ಟ ಮಾನವತಾವಾದಿ
ಇನ್ನೊಂದೆಡೆ ಪೌರತ್ವ ಕಾಯ್ದೆ ವಿರೋಧಿಸಿ ಉರ್ದು ಮಾನವತಾವಾದಿ ಹಾಗೂ ಬರಹಗಾರರಾಗಿರುವ ಮುಜ್ತಬ್ ಹುಸೇನ್ ತಮಗೆ ನೀಡಿದ್ದ ಪದ್ಮಶ್ರೀ ಪ್ರಶಸ್ತಿಯನ್ನು ಸರ್ಕಾರಕ್ಕೆ ವಾಪಸ್ ನೀಡಲು ತೀರ್ಮಾನಿಸಿದ್ದಾರೆ. ದೇಶವನ್ನು ಜಾತಿ ಆಧಾರದ ಮೇಲೆ ಒಡೆಯಲಾಗುತ್ತಿದ್ದು, ತಮ್ಮ ಜೀವಮಾನದಲ್ಲೇ ಇಂಥ ಪರಿಸ್ಥಿತಿಯನ್ನು ಎದುರಿಸಿರಲಿಲ್ಲ ಎಂದು ಮುಜ್ತಬ್ ಹುಸೇನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.