ಪೌರತ್ವ ತಿದ್ದುಪಡಿ ಮಸೂದೆ: ಕಳವಳಗಳಿಗೆ ಸರ್ಕಾರ ನೀಡಿದ 8 ಅಂಶಗಳ ಸ್ಪಷ್ಟನೆ
ನವದೆಹಲಿ, ಡಿಸೆಂಬರ್ 11: ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿರುವ ವಿವಾದಾತ್ಮಕ ಪೌರತ್ವ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರ್ಕಾರ ಬುಧವಾರ ಮಧ್ಯಾಹ್ನ ರಾಜ್ಯಸಭೆಯಲ್ಲಿ ಮಂಡಿಸಲಿದೆ. ಸೋಮವಾರ ಈ ಮಸೂದೆಯು ಲೋಕಸಭೆಯಲ್ಲಿ ಅನುಮೋದನೆ ಪಡೆದುಕೊಂಡಿತ್ತು.
ಈ ಮಸೂದೆ ದೊಡ್ಡ ವಿವಾದ ಸೃಷ್ಟಿಸಿರುವುದಕ್ಕೆ ಹಲವು ಕಾರಣಗಳಿವೆ. ಧಾರ್ಮಿಕತೆಯ ಮಾನದಂಡದಲ್ಲಿ ಪೌರತ್ವ ನಿರ್ಧರಿಸಲಾಗುತ್ತಿದೆ. ಈಶಾನ್ಯ ರಾಜ್ಯಗಳ ಜನರು ಇದರಿಂದ ಸಂಕಷ್ಟಕ್ಕೆ ತುತ್ತಾಗಲಿದ್ದಾರೆ ಮತ್ತು ಅಲ್ಪಸಂಖ್ಯಾತರಿಗೆ ಅಭದ್ರತೆ ಎದುರಾಗಲಿದೆ ಎಂಬ ಕಳವಳ ಸೇರಿದಂತೆ ಮಸೂದೆಯ ವಿರುದ್ಧ ಅಭಿಪ್ರಾಯ ವ್ಯಕ್ತವಾಗಿದೆ.
ಅಮೆರಿಕದಲ್ಲಿ ಅಮಿತ್ ಶಾಗೆ ನಿರ್ಬಂಧ ವಿಧಿಸುವ ಒತ್ತಾಯ: ಭಾರತದ ತಿರುಗೇಟು
ನೆರೆಯ ಮೂರು ಇಸ್ಲಾಮಿಕ್ ದೇಶಗಳಿಂದ ಭಾರತಕ್ಕೆ ವಲಸೆ ಬಂದ ಧಾರ್ಮಿಕ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವ ನೀಡುವ ಮಸೂದೆ ಇದಾಗಿದೆ. ಮುಸ್ಲಿಮರನ್ನು ಈ ಮಸೂದೆಯಲ್ಲಿ ಒಳಪಡಿಸದೆ ಇರುವುದಕ್ಕೆ ವಿರೋಧಪಕ್ಷಗಳು ಸರ್ಕಾರವನ್ನು ಟೀಕಿಸಿವೆ. ಮಸೂದೆ ಕುರಿತಾಗಿ ಜನರಲ್ಲಿ ಆತಂಕ ಉಂಟಾಗಿದೆ. ಅವರಲ್ಲಿನ ಕೆಲವು ಕಲ್ಪನೆಗಳಿಗೆ ಸರ್ಕಾರ ಎಂಟು ಅಂಶಗಳ ವಿವರಣೆ ನೀಡಿದೆ.
ಬಂಗಾಳಿ ಹಿಂದೂಗಳಿಗೆ ಪ್ರಯೋಜನ
ಕಲ್ಪನೆ: ಪೌರತ್ವ ತಿದ್ದುಪಡಿ ಮಸೂದೆಯು ಬೆಂಗಾಳಿ ಹಿಂದೂಗಳಿಗೆ ಪೌರತ್ವ ಒದಗಿಸಲಿದೆ.
ವಾಸ್ತವ: ಪೌರತ್ವ ತಿದ್ದುಪಡಿ ಮಸೂದೆಯು ಬೆಂಗಾಳಿ ಹಿಂದೂಗಳಿಗೆ ಸ್ವಯಂಚಾಲಿತವಾಗಿ ಭಾರತೀಯ ಪೌರತ್ವ ನೀಡುವುದಿಲ್ಲ. ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಗಳಿಂದ ಬಂದ ಆರು ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ವ್ಯಕ್ತಿಗಳಿಗೆ ಶಾಸನಬದ್ಧ ಹಕ್ಕು ಒದಗಿಸಲಿದೆಯಷ್ಟೇ. ತಮ್ಮ ಧರ್ಮದ ಆಧಾರದಲ್ಲಿ ಶೋಷಣೆಗೊಳಗಾಗಿ ಈ ಮೂರು ದೇಶಗಳಿಂದ ತಪ್ಪಿಸಿಕೊಂಡು ಬಂದ ಅಲ್ಪಸಂಖ್ಯಾತರಿಗೆ ಮಾನವೀಯತೆಯ ಆಧಾರದಲ್ಲಿ ನೀಡುವ ಮಸೂದೆ ಇದು.
ಕಲ್ಪನೆ: ಪೌರತ್ವ ತಿದ್ದುಪಡಿ ಮಸೂದೆಯು 'ಅಸ್ಸಾಂ ದಾಖಲೆ'ಗಳನ್ನು ತಿರುಚುತ್ತದೆ.
ವಾಸ್ತವ: ಅಕ್ರಮ ವಲಸಿಗರ ಬಂಧನ/ಗಡಿಪಾರಿಗೆ ಸಂಬಂಧಿಸಿದಂತೆ ನಿಗದಿಯಾಗಿರುವ 1971ರ ಮಾರ್ಚ್ 24ರ ಅಸ್ಸಾಂ ದಾಖಲೆಗಳ ಪಾವಿತ್ರ್ಯಕ್ಕೆ ಪೌರತ್ವ ತಿದ್ದುಪಡಿ ಮಸೂದೆ ಧಕ್ಕೆ ತರುವುದಿಲ್ಲ.
ಮೂಲನಿವಾಸಿಗಳಿಗೆ ಸಂಕಷ್ಟದ ಆತಂಕ
ಕಲ್ಪನೆ: ಪೌರತ್ವ ತಿದ್ದುಪಡಿ ಮಸೂದೆಯು ಅಸ್ಸಾಂನ ಮೂಲ ನಿವಾಸಿಗಳ ಹಿತಾಸಕ್ತಿಗೆ ವಿರುದ್ಧವಾಗಿದೆ.
ವಾಸ್ತವ: ಪೌರತ್ವ ತಿದ್ದುಪಡಿ ಮಸೂದೆಯು ಅಸ್ಸಾಂ ಕೇಂದ್ರಿತವಲ್ಲ. ಇದು ಇಡೀ ದೇಶಕ್ಕೆ ಅನ್ವಯವಾಗುತ್ತದೆ. ಅಕ್ರಮ ವಲಸಿಗರನ್ನು ಮೂಲ ನಿವಾಸಿಗಳಿಂದ ರಕ್ಷಿಸುವ ಸಲುವಾಗಿ ಉನ್ನತೀಕರಿಸಲಾಗಿರುವ ಎನ್ಆರ್ಸಿಗೆ ಈ ಮಸೂದೆ ಖಂಡಿತವಾಗಿಯೂ ವಿರುದ್ಧವಾಗಿಲ್ಲ.
ಕಲ್ಪನೆ: ಪೌರತ್ವ ತಿದ್ದುಪಡಿ ಮಸೂದೆಯು ಬಂಗಾಲಿ ಭಾಷಿಕ ಜನರ ಪಾರುಪತ್ಯಕ್ಕೆ ಕಾರಣವಾಗಲಿದೆ.
ವಾಸ್ತವ: ಅಸ್ಸಾಂನ ಬಾರಕ್ ಕಣಿವೆಯಲ್ಲಿ ಬಹುತೇಕ ಹಿಂದೂ ಬಂಗಾಳಿ ಜನಸಂಖ್ಯೆ ನೆಲೆಸಿದೆ. ಅಲ್ಲಿ ಬಂಗಾಲಿಯನ್ನು ಎರಡನೆಯ ರಾಜ್ಯ ಭಾಷೆ ಎಂದು ಘೋಷಿಸಲಾಗಿದೆ. ಬ್ರಹ್ಮಪುತ್ರ ಕಣಿವೆಯಲ್ಲಿ ಹಿಂದೂ ಬಂಗಾಳಿಗಳು ಪ್ರತ್ಯೇಕ ಸ್ಥಳಗಳಲ್ಲಿ ವಾಸಿಸುತ್ತಿದ್ದು, ಅವರು ಅಸ್ಸಾಮಿ ಭಾಷೆಯನ್ನೇ ಅಳವಡಿಸಿಕೊಂಡಿದ್ದಾರೆ.
ರಾಜ್ಯಸಭೆಯ ಪೌರತ್ವ ಪರೀಕ್ಷೆಯಲ್ಲಿ ಬಿಜೆಪಿಯ ಸಂಖ್ಯಾಬಲವೇನು?
ಬಾಂಗ್ಲಾದೇಶದಿಂದ ಹೆಚ್ಚಿನ ವಲಸೆ ಭಯ
ಕಲ್ಪನೆ: ಬಂಗಾಳಿ ಹಿಂದೂಗಳು ಅಸ್ಸಾಂಗೆ ಹೊರೆಯಾಗಲಿದ್ದಾರೆ.
ವಾಸ್ತವ: ಪೌರತ್ವ ತಿದ್ದುಪಡಿ ಮಸೂದೆಯು ಇಡೀ ದೇಶಕ್ಕೆ ಅನ್ವಯವಾಗಲಿದೆ. ಧಾರ್ಮಿಕ ಶೋಷಣೆಗೆ ಒಳಗಾದ ಜನರು ಅಸ್ಸಾಂನಲ್ಲಿ ಮಾತ್ರ ವಾಸಿಸುತ್ತಿಲ್ಲ. ಅವರು ದೇಶದ ಇತರೆ ಭಾಗಗಳಲ್ಲಿಯೂ ನೆಲೆಸಿದ್ದಾರೆ.
ಕಲ್ಪನೆ: ಈ ಮಸೂದೆಯಿಂದಾಗಿ ಬಾಂಗ್ಲಾದೇಶದಿಂದ ಮತ್ತಷ್ಟು ಹಿಂದೂಗಳು ವಲಸೆ ಬರಲು ಕಾರಣವಾಗಲಿದೆ.
ವಾಸ್ತವ: ಬಾಂಗ್ಲಾದೇಶದಿಂದ ಬಹುತೇಕ ಅಲ್ಪಸಂಖ್ಯಾತರು ಈಗಾಗಲೇ ವಲಸೆ ಬಂದಿದ್ದಾರೆ. ಬಾಂಗ್ಲಾದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಅವರ ಮೇಲಿನ ಶೋಷಣೆಗಳು ಕಡಿಮೆಯಾಗಿವೆ. ಬದಲಾದ ಸನ್ನಿವೇಶದಲ್ಲಿ ಧಾರ್ಮಿಕ ಶೋಷಣೆಯಿಂದಾಗಿ ಉಂಟಾಗಬಹುದಾದ ದೊಡ್ಡ ಪ್ರಮಾಣದ ವಲಸೆ ದೂರದ ಮಾತು. ಅಲ್ಲದೆ, ಈ ಮಸೂದೆ ಅಡಿ ಪೌರತ್ವ ಪಡೆದುಕೊಳ್ಳುವ ಅವಕಾಶವನ್ನು 2014ರ ಡಿ. 31ಕ್ಕೆ ಸೀಮಿತಗೊಳಿಸಲಾಗಿದೆ. ಈ ದಿನಾಂಕದ ಬಳಿಕ ಭಾರತಕ್ಕೆ ವಲಸೆ ಬಂದ ಧಾರ್ಮಿಕ ಅಲ್ಪಸಂಖ್ಯಾತರಿಗೆ ಪೌರತ್ವ ಸಿಗುವುದಿಲ್ಲ.
ಮಸೂದೆ ಮುಸ್ಲಿಂ ವಿರೋಧಿಯೇ?
ಕಲ್ಪನೆ: ಹಿಂದೂ ಬಂಗಾಳಿಗಳಿಗೆ ವಾಸಸ್ಥಳ ಕಲ್ಪಿಸಲು ಬುಡಕಟ್ಟು ಭೂಮಿಗಳನ್ನು ಕಿತ್ತುಕೊಳ್ಳಲು ಈ ಮಸೂದೆ ಅವಕಾಶ ನೀಡಲಿದೆ.
ವಾಸ್ತವ: ಹಿಂದೂ ಬಂಗಾಳಿಗಳು ಬಾರಕ್ ಕಣಿವೆಯಲ್ಲಿ ಹೆಚ್ಚಾಗಿ ನೆಲೆಯೂರಿದ್ದಾರೆ. ಇದು ಬುಡಕಟ್ಟು ಪ್ರದೇಶ ಮತ್ತು ವಸತಿಗಳಿಂದ ಬಹಳ ದೂರದಲ್ಲಿದೆ. ಅಲ್ಲದೆ, ಪೌರತ್ವ ತಿದ್ದುಪಡಿ ಮಸೂದೆಯು ಬುಡಕಟ್ಟು ಭೂಮಿಯ ರಕ್ಷಣೆ ಕುರಿತಾದ ಕಾನೂನು ಮತ್ತು ನಿಯಮಾವಳಿಗಳನ್ನು ನಿಯಂತ್ರಿಸುವುದಿಲ್ಲ. ಸಂವಿಧಾನ ಆರನೇ ಕಲಂ ಹಾಗೂ ಐಎಲ್ಪಿ ನಿಯಮಾವಳಿಗಳ ವ್ಯಾಪ್ತಿಯ ಪ್ರದೇಶಗಳಿಗೆ ಅನ್ವಯವಾಗುವುದಿಲ್ಲ.
ಕಲ್ಪನೆ: ಪೌರತ್ವ ತಿದ್ದುಪಡಿ ಮಸೂದೆಯು ಮುಸ್ಲಿಮರ ವಿರುದ್ಧವಾಗಿದೆ.
ವಾಸ್ತವ: ಹಾಲಿ ಇರುವ ಪೌರತ್ವ ಕಾಯ್ದೆ, 1955ರ ಅಡಿ ಅರ್ಹರಾಗಿರುವ ಯಾವುದೇ ದೇಶದ, ಯಾವುದೇ ಧರ್ಮದ ಯಾವುದೇ ವಿದೇಶಿಗ ಭಾರತದ ಪೌರತ್ವ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ. ಈ ಸೌಲಭ್ಯಗಳನ್ನು ಪೌರತ್ವ ತಿದ್ದುಪಡಿ ಮಸೂದೆ ಯಾವುದೇ ರೀತಿ ಬದಲಾವಣೆ ಮಾಡುವುದಿಲ್ಲ. ಈ ಮೂರು ದೇಶಗಳಿಂದ ಧಾರ್ಮಿಕ ಶೋಷಣೆಯ ಕಾರಣಕ್ಕಾಗಿ ಭಾರತಕ್ಕೆ ಬಂದ ಅಲ್ಪಸಂಖ್ಯಾತ ಸಮುದಾಯದ ವಲಸಿಗರು ನೀಡಲಾಗಿರುವ ಮಾನದಂಡಗಳನ್ನು ಹೊಂದಿದ್ದರೆ ಭಾರತದ ಪೌರತ್ವಕ್ಕೆ ಅರ್ಜಿ ಸಲ್ಲಿಸಬಹುದು.