"ಭಾರತದ ಒಬ್ಬರೇ ಒಬ್ಬ ಮುಸ್ಲಿಂರನ್ನೂ ಟಚ್ ಮಾಡುವುದಕ್ಕೆ ಆಗೋದಿಲ್ಲ"
ನವದೆಹಲಿ, ಜನವರಿ.30: ಭಾರತದ ಒಬ್ಬರೇ ಒಬ್ಬ ಮುಸ್ಲಿಮರನ್ನೂ ಟಚ್ ಮಾಡುವುದಕ್ಕೆ ಆಗುವುದಿಲ್ಲ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೊಂದಣಿ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ದೆಹಲಿ ವಿಧಾನಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ಪರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಆದರ್ಶ್ ನಗರದಲ್ಲಿ ರೋಡ್ ಶೋ ನಡೆಸಿದರು. ಈ ವೇಳೆ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ದ್ವೇಷದ ಮೂಲಕ ರಾಜಕಾರಣ ಮಾಡುವುದು ಬಿಜೆಪಿಯ ಸಂಸ್ಕೃತಿಯಲ್ಲ ಎಂದರು.
ದೆಹಲಿ ಚುನಾವಣಾ ಅಖಾಡದಲ್ಲಿ ಪ್ರಚಾರ ಮಾಡಂಗಿಲ್ಲ ಈ ಬಿಜೆಪಿಗರು!
ದ್ವೇಷದಿಂದ ದೆಹಲಿಯಲ್ಲಿ ಅಧಿಕಾರ ಹಿಡಿಯುವ ಆಸೆ ಬಿಜೆಪಿಗೆ ಇಲ್ಲ. ದ್ವೇಷದಿಂದಲೂ ಅಧಿಕಾರ ಗಿಟ್ಟಿಸಿಕೊಳ್ಳಬೇಕು ಎಂದರೆ ಬಿಜೆಪಿಗೆ ಅಂಥ ಅಧಿಕಾರವೇ ಬೇಕಾಗಿಲ್ಲ ಎಂದು ರಾಜನಾಥ್ ಸಿಂಗ್ ವಿರೋಧ ಪಕ್ಷಗಳಿಗೆ ತಿರುಗೇಟು ನೀಡಿದರು.
ಮುಸ್ಲಿಮರ ಭದ್ರತೆ ಬಗ್ಗೆ ಅನುಮಾನ ಬೇಡ:
ದೆಹಲಿ ಶಾಹಿನ್ ಬಾಗ್ ನಲ್ಲಿ ನಡೆಯುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿರುದ್ಧದ ಪ್ರತಿಭಟನೆ ಬಗ್ಗೆಯೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರಸ್ತಾಪಿಸಿದರು. ಈ ದೇಶದಲ್ಲಿನ ಒಬ್ಬರೇ ಒಬ್ಬರು ಮುಸ್ಲಿಂರನ್ನು ಮುಟ್ಟುವುದಕ್ಕೆ ಬಿಡುವುದಿಲ್ಲ. ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಭಾರತೀಯ ಮುಸ್ಲಿಂರು ತಮ್ಮ ಪೌರತ್ವವನ್ನು ಕಳೆದುಕೊಳ್ಳುವುದಿಲ್ಲ. ಈ ಬಗ್ಗೆ ಯಾರೂ ಭಯ ಪಡುವ ಅಗತ್ಯವಿಲ್ಲ ಎಂದು ರಾಜನಾಥ್ ಸಿಂಗ್ ಹೇಳಿದರು.