ದೆಹಲಿಯ ಜಾಮಿಯಾ ವಿಶ್ವವಿದ್ಯಾಲಯದ ಎದುರಿನಲ್ಲೇ ನಮಾಜ್
ದೆಹಲಿ, ಡಿಸೆಂಬರ್.19: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಒಂದೆಡೆ ದೆಹಲಿಗೆ ದೆಹಲಿಯೇ ಧಗಧಗಿಸುತ್ತಿದೆ. ಇದರ ನಡುವೆ ಅದೇ ರಾಷ್ಟ್ರ ರಾಜಧಾನಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಿದ್ಯಾರ್ಥಿಗಳು ಹಾಗೂ ಮುಸ್ಲಿಂ ಸಮುದಾಯದ ಕೆಲವು ಕಾರ್ಯಕರ್ತರು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಉಗ್ರ ಸ್ವರೂಪದ ಹೋರಾಟಕ್ಕೆ ಸುದ್ದಿಯಾಗಿದ್ದ ದೆಹಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಎದುರಿನಲ್ಲೇ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಲಾಯಿತು. ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಆರಂಭಿಸುವ ಮುನ್ನ ಪ್ರತಿಭಟನಾಕಾರರು ನಮಾಜ್ ಮಾಡುವ ಮೂಲಕ ಗಮನ ಸೆಳೆದರು.
ರಾಜ್ಯಾದ್ಯಂತ 3 ದಿನ ನಿಷೇಧಾಜ್ಞೆ: ಡಿಜಿಪಿಗೆ ಸಿಎಂ ಕೊಟ್ಟ ಸಂದೇಶವೇನು?
ಜಾಮಿಯಾ ವಿಶ್ವವಿದ್ಯಾಲಯದ ಮುಂದೆ ನೆರೆದ ನೂರಾರು ಪ್ರತಿಭಟನಾಕಾರರು ವಿವಿ ಗೇಟ್ ಮುಂಭಾಗವೇ ನಮಾಜ್ ಮಾಡಿದರು. ಮುಸ್ಲಿಂ ಸಮುದಾಯದ ಕೆಲವು ಪ್ರತಿಭಟನಾಕಾರರು ಪ್ರಾರ್ಥನೆ ಮಾಡುತ್ತಿದ್ದರೆ, ಉಳಿದ ಕೆಲವು ವಿದ್ಯಾರ್ಥಿಗಳು ಮಾನವ ಸರಪಳಿ ರಚಿಸಿ ರಕ್ಷಣೆ ನೀಡಿದರು.
ಕೇಂದ್ರ ಸರ್ಕಾರದ ವಿರುದ್ಧ 'ಪ್ರಾರ್ಥನೆ'ಯ ಹೋರಾಟ:
ಒಂದು ಕಡೆ ದೆಹಲಿಯ ಕೆಂಪು ಕೋಟೆ ಬಳಿ ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ತೀವ್ರ ಪ್ರತಿಭಟನೆ ನಡೆಸಲಾಗುತ್ತಿದೆ. ಕೇಂದ್ರ ಸರ್ಕಾರದ ವಿರುದ್ಧ ನೆರೆದ ನೂರಾರು ಕಾರ್ಯಕರ್ತರು ಧಿಕ್ಕಾರ ಕೂಗುತ್ತಿದ್ದರೆ, ಇನ್ನೊಂದೆಡೆ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಗೇಟ್ ಎದುರಿನಲ್ಲಿ ಕೆಲವು ಪ್ರತಿಭಟನಾಕಾರರು ಪ್ರಾರ್ಥನೆ ಮಾಡುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ: ಬೆಂಗಳೂರಲ್ಲಿ ಯಾರೂ ಕೆಮ್ಮುವ ಹಾಗಿಲ್ಲ!
ಇನ್ನು, ದೆಹಲಿಯಲ್ಲಿ ಪ್ರತಿಭಟನೆ ಕಾವನ್ನು ತಗ್ಗಿಸಲು ಪೊಲೀಸರು ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ. ಇದರ ಭಾಗವಾಗಿ ದೆಹಲಿ ಹಾಗೂ ಗುರುಗ್ರಾಮ್ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಬ್ಯಾರಿಕೇಡ್ ಹಾಕಲಾಗಿದ್ದು, ಎಲ್ಲ ವಾಹನಗಳನ್ನು ತಪಾಸಣೆ ಮಾಡಿ ಬಿಡಲಾಗುತ್ತಿದೆ. ಇದರಿಂದ ಬೆಳಗ್ಗೆಯಿಂದಲೂ ಈ ಭಾಗದಲ್ಲಿ ವಾಹನ ಸಂಚಾರ ತೀವ್ರಗೊಂಡಿದ್ದು, ಪ್ರಯಾಣಿಕರು ಪರದಾಡುವಂತಾ ಸ್ಥಿತಿ ನಿರ್ಮಾಣವಾಗಿದೆ.