ಚೌಕಿದಾರ್ ಚೋರ್ ಹೈ : ವಿಷಾದ ವ್ಯಕ್ತಪಡಿಸಿದ ರಾಹುಲ್, ಕ್ಷಮೆಗೆ ನಕಾರ
ನವದೆಹಲಿ, ಏಪ್ರಿಲ್ 29 : ರಫೇಲ್ ಡೀಲ್ ಹಗರಣದಲ್ಲಿ ಸರ್ವೋಚ್ಚ ನ್ಯಾಯಾಲಯವೇ 'ಚೌಕಿದಾರ್ ಚೋರ್ ಹೈ' ಎಂದಿದೆ ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು, ತಮ್ಮ ಹೇಳಿಕೆಗಾಗಿ ಮತ್ತೆ ವಿಷಾದ ವ್ಯಕ್ತಪಡಿಸಿದ್ದು, ನ್ಯಾಯಾಲಯದ ಕ್ಷಮೆ ಕೇಳಲು ನಿರಾಕರಿಸಿದ್ದಾರೆ.
ನ್ಯಾಯಾಂಗ ನಿಂದನೆಯ ಆರೋಪ ಎದುರಿಸುವ ಸಾಧ್ಯತೆ ಇದ್ದಿದ್ದರಿಂದ ರಾಹುಲ್ ಗಾಂಧಿ ಅವರು ಸರ್ವೋಚ್ಚ ನ್ಯಾಯಾಲಯಕ್ಕೆ ವಿವರಣೆ ನೀಡಿ ಅಫಿಡವಿಟ್ ಸಲ್ಲಿಸಿದ್ದು, ಅದರಲ್ಲಿ ನ್ಯಾಯಾಲಯದ ಆಶಯವನ್ನು ತಪ್ಪಾಗಿ ಹೇಳಿದ್ದಕ್ಕಾಗಿ ಕೇವಲ ವಿಷಾದ ವ್ಯಕ್ತಪಡಿಸಿದ್ದಾರೆ, ಆದರೆ ಕ್ಷಮೆ ಕೇಳಿಲ್ಲ.
ರಾಹುಲ್ ಗಾಂಧಿ ಮತ್ತೆ ಮುಖಭಂಗ: ನೋಟಿಸ್ ನೀಡಿದ ಸುಪ್ರೀಂ ಕೋರ್ಟ್
ತಮ್ಮ ಅಫಿಡವಿಟ್ ನಲ್ಲಿ, ಕೋರ್ಟನ್ನು ರಾಜಕೀಯ ಅಂಗಳಕ್ಕೆ ಎಳೆದುತರುವ ಯಾವುದು ಉದ್ದೇಶ ತಮಗಿರಲಿಲ್ಲ. ಆದರೆ, ನ್ಯಾಯಾಂಗ ನಿಂದನೆಯ ನೆಪ ಮಾಡಿಕೊಂಡು ಬಿಜೆಪಿಯ ಸಂಸದೆ ಮೀನಾಕ್ಷಿ ಲೇಖಿ ಅವರೇ ರಾಜಕೀಯ ಮಾಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.
ನ್ಯಾಯಾಂಗ ನಿಂದನೆಯ ಅರ್ಜಿಯನ್ನು ವಜಾ ಮಾಡಲು ನಿರಾಕರಿಸಿದ್ದ ಸರ್ವೋಚ್ಚ ನ್ಯಾಯಾಲಯ, ರಫೇಲ್ ಯುದ್ಧ ಹಗರಣಕ್ಕೆ ಸಂಬಂಧಿಸಿದಂತೆ ಹೂಡಲಾಗಿರುವ ಮರುಪರಿಶೀಲನಾ ಅರ್ಜಿಯ ಜೊತೆಗೇ ನ್ಯಾಯಾಂಗ ನಿಂದನೆಯ ಅರ್ಜಿಯನ್ನೂ ವಿಚಾರಣೆಗೆ ತೆಗೆದುಕೊಳ್ಳಲಾಗುವುದು ಎಂದು ಹೇಳಿತ್ತು. ಈ ಹಿನ್ನೆಲೆಯಲ್ಲಿ ರಾಹುಲ್ ಅವರು ಅಫಿಡವಿಟ್ ಸಲ್ಲಿಸಿದ್ದಾರೆ.
ಚೌಕಿದಾರ್ ಚೋರ್ ಹೈ ಹೇಳಿಕೆ: ಸುಪ್ರೀಂಕೋರ್ಟ್ನಲ್ಲಿ ರಾಹುಲ್ ಗಾಂಧಿ ವಿಷಾದ
ರಫೇಲ್ ಹಗರಣದ ಮರುಅರ್ಜಿಯನ್ನು ವಿಚಾರಣೆಗೆ ತೆಗೆದುಕೊಂಡ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ 'ಚೌಕಿದಾರ್ ಚೋರ್' ಎಂದು ಹೇಳಿ ರಾಹುಲ್ ಗಾಂಧಿ ಅವರು ನ್ಯಾಯಾಂಗ ನಿಂದನೆ ಮಾಡಿದ್ದಾರೆ ಎಂದು ಮೀನಾಕ್ಷಿ ಲೇಖಿ ಅವರು ಅರ್ಜಿ ಸಲ್ಲಿಸಿದ್ದರು. ಮೀನಾಕ್ಷಿ ಲೇಖಿ ಅವರ ಪರವಾಗಿ ಹಿರಿಯ ನ್ಯಾಯವಾದಿ ಮುಕುಲ್ ರೋಹಟ್ಗಿ ಅವರು ವಾದ ಮಂಡಿಸುತ್ತಿದ್ದಾರೆ. ನ್ಯಾಯಾಂಗ ನಿಂದನೆ ವಿಚಾರಣೆ ಸಂದರ್ಭದಲ್ಲಿ ಖುದ್ದಾಗಿ ಹಾಜರಾಗುವುದರಿಂದ ರಾಹುಲ್ ಅವರಿಗೆ ವಿನಾಯತಿಯನ್ನು ಸರ್ವೋಚ್ಚ ನ್ಯಾಯಾಲಯ ನೀಡಿದೆ.
ಏ. 15 ರಂದು ರಾಹುಲ್ ಗಾಂಧಿ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ
ಕೇವಲ ವಿಷಾದ ವ್ಯಕ್ತಪಡಿಸುವುದು ಕ್ಷಮೆ ಕೇಳಿದಂತಲ್ಲ ಎಂದು ಮುಕುಲ್ ರೋಹಟ್ಗಿ ಅವರು ವಾದಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ರಾಹುಲ್ ಗಾಂಧಿ ಪರ ವಾದಿಸುತ್ತಿರುವ ಹಿರಿಯ ನ್ಯಾಯವಾದಿ ಎಎಂ ಸಿಂಘ್ವಿ ಅವರು, ರಫೇಲ್ ಹಗರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡುತ್ತಿದ್ದಾಗ ಅಜಾಗರೂಕತೆಯಿಂದ ಚೌಕಿದಾರ್ ಚೌರ್ ಹೈ ಎಂದು ನ್ಯಾಯಾಲಯವೇ ಹೇಳಿದೆ ಎಂದು ರಾಹುಲ್ ಹೇಳಿದ್ದರು. ಪ್ರಚಾರ ಮಾಡುವ ಭರದಲ್ಲಿ ಚೌಕಿದಾರ್ ಚೌರ್ ಹೈ ಎಂಬ ಹೇಳಿಕೆಯನ್ನು ನ್ಯಾಯಾಲಯವೇ ಹೇಳಿದಂತಾಗಿದೆ ಎಂದಿದ್ದರು ಎಂದು ಪ್ರತ್ಯುತ್ತರ ನೀಡಿದ್ದಾರೆ.
ಕಳೆದ ಡಿಸೆಂಬರ್ ನಲ್ಲಿ ರಫೇಲ್ ಡೀಲ್ ಗೆ ಸಂಬಂಧಿಸಿದ ತೀರ್ಪು ಪ್ರಕಟವಾದಾಗ, ಸರ್ವೋಚ್ಚ ನ್ಯಾಯಾಲಯ ಕೇಂದ್ರ ಸರಕಾರಕ್ಕೆ ಕ್ಲೀನ್ ಚಿಟ್ ನೀಡಿದೆ ಎಂದು ಸುಳ್ಳು ಹೇಳಿದ್ದರು ಎಂದು ಸಿಂಘ್ವಿ ವಾದ ಮುಂದಿಟ್ಟಿದ್ದಾರೆ.