ಚೀನಾ ರಾಯಭಾರಿ, ಮಾಜಿ ರಕ್ಷಣಾ ಸಚಿವ ಜಾರ್ಜ್ ರನ್ನು ಸ್ಮರಿಸಿದ್ದೇಕೆ?
ಬೀಜಿಂಗ್, ಫೆಬ್ರವರಿ 19: ಕೊರಾನಾ ವೈರಸ್ ದಾಳಿಯಿಂದಾಗಿ ಚೀನಾದ ಆರ್ಥಿಕ ಪರಿಸ್ಥಿತಿ ಕೂಡಾ ಕುಸಿಯುತ್ತಿದೆ. ಭಾರತ ಕೂಡಾ ಚೀನಾ ನಡುವಿನ ವ್ಯವಹಾರಕ್ಕೆ ನಿರ್ಬಂಧ ವಿಧಿಸಿದೆ. ಈ ಸಂದರ್ಭದಲ್ಲಿ ಚೀನಾ ರಾಯಭಾರಿ ಸನ್ ವೇಡೊಂಗ್ ಅವರು ಈ ಹಿಂದಿನ ಭಾರತದ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡೀಸ್ ನೆರವನ್ನು ಸ್ಮರಿಸಿಕೊಂಡಿದ್ದಾರೆ.
ಸಾರ್ಸ್(severe acute respiratory syndrome) ಸಾಂಕ್ರಾಮಿಕ ರೋಗ ತಗುಲಿ ಚೀನಾ ಬಳಲುತ್ತಿದ್ದಾಗ 2003ರಲ್ಲಿ ಅಂದಿನ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡೀಸ್ ಅವರು ಚೀನಾಕ್ಕೆ ಭೇಟಿ ನೀಡಿದ್ದರು. ನಾನು ಆಗ ಚೀನಾದ ವಿದೇಶಾಂಗ ಖಾತೆಯ ಏಷ್ಯಾ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದೆ. ಚೀನಾ ದೊಡ್ಡ ಪ್ರಮಾಣದಲ್ಲಿ ಆರೋಗ್ಯ ಪಿಡುಗು ಎದುರಿಸುತ್ತಿದ್ದಾಗ , ಉಭಯ ದೇಶಗಳ ನಡುವಿನ ವ್ಯಾಪಾರ-ವಹಿವಾಟು ವ್ಯತ್ಯಯವಾಗದಂತೆ ನೋಡಿಕೊಂಡರು.
ಸಾಂಕ್ರಾಮಿಕ ರೋಗಕ್ಕೆ ತುತ್ತಾದ ದೇಶವನ್ನು ಆರ್ಥಿಕವಾಗಿ ಇನ್ನಷ್ಟು ದುರ್ಬಲಗೊಳಿಸುವ ಬದಲು ಎಲ್ಲಾ ದೇಶಗಳು ಅಗತ್ಯ ನೆರವು ನೀಡಿದರೆ ಸಮಸ್ಯೆ ಬಗೆಹರಿಯುತ್ತದೆ ಎಂಬುದನ್ನು ತೋರಿಸಿಕೊಟ್ಟರು ಎಂದು ಸನ್ ಹೇಳಿದರು.
ಅಂದು ಭಾರತೀಯ ಸೇನೆ ಕೂಡಾ ಅಗತ್ಯ ಔಷಧಿಗಳನ್ನು ನೀಡಿ, ಚೀನಾಕ್ಕೆ ಬೆಂಬಲ ನೀಡಿತ್ತು. ಇಂಥ ಸೌಜನ್ಯವನ್ನು ಚೀನಿಯರು ಮರೆತಿಲ್ಲ ಎಂದು ಸನ್ ಹೇಳಿದರು.
2003ರಲ್ಲಿ ಸಾರ್ಸ್ ವೈರಾಣು ದಾಳಿಗೆ ಸುಮಾರು 800ಕ್ಕೂ ಅಧಿಕ ಮಂದಿ ಮೃತ ಪಟ್ಟಿದ್ದರು. ಚೀನಾ ಹಾಗೂ ಭಾರತದಲ್ಲಿ ಜನಸಂಖ್ಯೆ ಹೆಚ್ಚಾಗಿದ್ದು ಇಂಥ ಸಂದರ್ಭದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಒಂದೇ ರೀತಿ ಸಮಸ್ಯೆ ಎದುರಿಸುತ್ತಿದ್ದೇವೆ. ಸಾರ್ವಜನಿಕ ಆರೋಗ್ಯ, ವಿಜ್ಞಾನ ಮತ್ತು ಸಂಶೋಧನೆ ವಿಷಯದಲ್ಲಿ ಹೆಚ್ಚಿನ ಬೆಂಬಲವನ್ನು ನಿರೀಕ್ಷಿಸಿದ್ದೇವೆ. ಭಾರತ ಎಂದಿನಂತೆ ಚೀನಾದೊಡನೆ ತನ್ನ ವ್ಯಾಪಾರ-ವಹಿವಾಟು ಮುಂದುವರೆಸುವ ನಿರೀಕ್ಷೆಯಿದೆ ಎಂದು ಸನ್ ಹೇಳಿದರು.