ರಾಹುಲ್ ಗಾಂಧಿ ವಿರುದ್ಧ ಕ್ರಮಕ್ಕೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸೂಚನೆ
ನವದೆಹಲಿ, ಆಗಸ್ಟ್ 04: ದೆಹಲಿಯಲ್ಲಿ ಅತ್ಯಾಚಾರಕ್ಕೊಳಗಾಗಿದ್ದ ಬಾಲಕಿಯ ಕುಟುಂಬದ ಫೋಟೊವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದ ಪರಿಣಾಮ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಕ್ರಮಕ್ಕೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಒತ್ತಾಯಿಸಿದೆ.
ರಾಹುಲ್ ಗಾಂಧಿ ಬುಧವಾರ 9 ವರ್ಷದ ಬಾಲಕಿಯ ಕುಟುಂಬಸ್ಥರನ್ನು ಭೇಟಿ ಮಾಡಿದ್ದರು. ನ್ಯಾಯ ದೊರಕಿಸುವಲ್ಲಿ ನಿಮ್ಮೊಂದಿಗೆ ಇರುತ್ತೇನೆ. ಒಂದು ಇಂಚು ಹೆಜ್ಜೆ ಕೂಡಾ ಹಿಂದೆ ಸರಿಯಲ್ಲ ಎಂದು ಹೇಳಿದ್ದರು. ತದನಂತರ ಬಾಲಕಿಯ ಪೋಷಕರ ಭೇಟಿಯ ಫೋಟೋವೊಂದನ್ನು ಟ್ವೀಟರ್ ನಲ್ಲಿ ಹಂಚಿಕೊಂಡಿದ್ದರು.
'ನಾವು ಅವರೊಂದಿಗಿದ್ದೇವೆ': ಅತ್ಯಾಚಾರ, ಕೊಲೆ ಸಂತ್ರಸ್ತೆಯ ಕುಟುಂಬವನ್ನು ಭೇಟಿಯಾದ ರಾಹುಲ್, ಕೇಜ್ರಿವಾಲ್
ಹೆತ್ತವರ ಕಣ್ಣೀರು ಒಂದೇ ಒಂದು ವಿಷಯವನ್ನು ಹೇಳುತ್ತಿದೆ, ಅವರ ಮಗಳು, ಈ ದೇಶದ ಮಗಳು, ನ್ಯಾಯಕ್ಕೆ ಅರ್ಹಳು ಮತ್ತು ನ್ಯಾಯದ ಹಾದಿಯಲ್ಲಿ ನಾನು ಅವರೊಂದಿಗೆ ಇದ್ದೇನೆ ಎಂದು ಹಿಂದಿಯಲ್ಲಿ ಬರೆದುಕೊಂಡಿದ್ದರು.
ಈ ಫೋಟೋದಲ್ಲಿ ಸಂತ್ರಸ್ತೆಯ ತಂದೆ ಮತ್ತು ತಾಯಿಯ ಮುಖಗಳನ್ನು ನೋಡಬಹುದು, ಇದು ಹುಡುಗಿಯ ಗುರುತನ್ನು ಬಹಿರಂಗಪಡಿಸುತ್ತದೆ ಆದ್ದರಿಂದ ಟ್ವಿಟರ್ ನಲ್ಲಿ ಅಪ್ತಾಪ್ತ ಬಾಲಕಿಯ ಕುಟುಂಬಸ್ಥರ ಫೋಟೋ ಹಂಚಿಕೆ, ಪೋಕ್ಸೊ ಕಾಯ್ದೆಯ ಸೆಕ್ಷನ್ 23, ಬಾಲ ನ್ಯಾಯ ಕಾಯ್ದೆಯ ಸೆಕ್ಷನ್ 74, ಐಪಿಸಿ ಸೆಕ್ಷನ್ 228 ಎ ಉಲ್ಲಂಘನೆಯಾಗಿದೆ ಎಂದು ಮಕ್ಕಳ ಹಕ್ಕುಗಳ ಸಂಸ್ಥೆ ಹೇಳಿದೆ.
ಟ್ವಿಟರ್ ಖಾತೆ ನಿರ್ವಹಿಸುತ್ತಿರುವವರ ವಿರುದ್ಧ ಕ್ರಮಕ್ಕಾಗಿ ದೂರನ್ನು ವರ್ಗಾಯಿಸಲಾಗಿದ್ದು, ಟ್ವಿಟರ್ ಫ್ಲಾಟ್ ಫಾರಂನಿಂದ ಟ್ವೀಟ್ ಗಳನ್ನು ತೆಗೆಯಬೇಕು ಎಂದು ಸೂಚಿಸಿರುವ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಮೂರು ದಿನಗಳೊಳಗೆ ಕ್ರಮ ಈ ವಿಚಾರಕ್ಕೆ ತೆಗೆದುಕೊಂಡ ವರದಿ ಕಳುಹಿಸಬೇಕು ಎಂದು ಆಯೋಗ ಹೇಳಿದೆ.
ಈ ಸಂಬಂಧ ಟ್ವೀಟರ್ ಸ್ಥಾನಿಕ ಆಡಳಿತಾಧಿಕಾರಿಗೆ ಪತ್ರವೊಂದನ್ನು ಕಳುಹಿಸಿರುವ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ರಾಹುಲ್ ಗಾಂಧಿ ಟ್ವಿಟರ್ ನಲ್ಲಿ ಸಂತ್ರಸ್ತೆಯ ಕುಟುಂಬಸ್ಥರ ಫೋಟೋವೊಂದನ್ನು ಹಂಚಿಕೊಂಡಿದ್ದು, ಅವರು ಬಾಲಕಿಯ ತಂದೆ ತಾಯಿ ಎಂದು ಹೇಳಿಕೊಂಡಿರುವ ಬಗ್ಗೆ ದೂರು ಸ್ವೀಕರಿಸಿರುವುದಾಗಿ ಹೇಳಿದೆ.
ಇನ್ನು ರಾಹುಲ್ ನಡೆ ಖಂಡಿಸಿ ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಮಾತನಾಡಿ, ''ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯ ಗುರುತನ್ನು ಬಹಿರಂಗಪಡಿಸುವುದು ಕಾನೂನು ರೀತ್ಯ ಅಪರಾಧವಾಗಿದೆ. ಆದರೆ, ರಾಹುಲ್ ಗಾಂಧಿ ಸಂತ್ರಸ್ತೆಯ ಕುಟುಂಬದವರ ಫೋಟೊಗಳನ್ನು ಟ್ವೀಟ್ ಮಾಡುವ ಮೂಲಕ ಲೈಂಗಿಕ ದೌರ್ಜನ್ಯದಿಂದ ಮಕ್ಕಳನ್ನು ರಕ್ಷಿಸುವ ಪೋಕ್ಸೊ ಕಾಯ್ದೆಯನ್ನು ಉಲ್ಲಂಘಿಸಿದಂತಾಗಿದೆ'' ಎಂದು ಹೇಳಿದ್ದಾರೆ.
ದೆಹಲಿ ಕಂಟೋನ್ಮೆಂಟ್ನಲ್ಲಿ 9 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ, ಕೊಲೆ ಪ್ರಕರಣವನ್ನು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಬುಧವಾರ ಮ್ಯಾಜಿಸ್ಟ್ರೀಯಲ್ ತನಿಖೆಗೆ ಆದೇಶಿಸಿದ್ದಾರೆ.
ಬಾಲಕಿಯ ಕುಟುಂಬಸ್ಥರನ್ನು ಇಂದು ಭೇಟಿ ಮಾಡಿದ ಕೇಜ್ರಿವಾಲ್ ಅವರು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇದೇ ವೇಳೆ ರೂ.10 ಲಕ್ಷ ಪರಿಹಾರವನ್ನು ಘೋಷಣೆ ಮಾಡಿದ ಅವರು, ಪ್ರಕರಣವನ್ನು ಮ್ಯಾಜಿಸ್ಟ್ರೀಯಲ್ ತನಿಖೆಗೆ ಆದೇಶಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಲಕಿ ಹಿಂತಿರುಗಿ ಬರಲು ಸಾಧ್ಯವಿಲ್ಲ. ಕುಟುಂಬಸ್ಥರಿಗೆ ಆಗಿರುವ ಅನ್ಯಾಯ ನಿಜಕ್ಕೂ ದುರಾದೃಷ್ಟಕರವಾದದ್ದು. ಇದನ್ನು ಸರಿಪಡಿಸಲು ಸಾಧ್ಯವಿಲ್ಲ ಆದರೆ, ಕುಟುಂಬಸ್ಥರಿಗೆ ಸರ್ಕಾರ ರೂ.10 ಲಕ್ಷ ಪರಿಹಾರ ನೀಡಲಿದೆ ಹಾಗೂ ಪ್ರಕರಣವನ್ನು ಮ್ಯಾಜಿಸ್ಟ್ರೀಯಲ್ ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಭದ್ರಪಡಿಸಬೇಕಿದೆ. ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ಮನವಿ ಮಾಡಿಕೊಲ್ಳುತ್ತೇನೆಂದು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ತಪ್ಪಿತಸ್ಥರಿಗೆ ಶಿಕ್ಷೆಯಾಗಲು ಸರ್ಕಾರದ ವತಿಯಿಂದ ಉನ್ನತ ಮಟ್ಟದ ವಕೀಲರನ್ನು ನಿಯೋಜನೆಗೊಳಿಸಲಾಗುತ್ತದೆ ಎಂದು ಹೇಳಿದ್ದಾರೆ.
ಇನ್ನು ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಡಿಸಿಪಿ ಇಂಗಿತ್ ಪ್ರತಾಪ ಸಿಂಹ ಅವರು, ದೆಹಲಿ ಕಂಟೋನ್ಮೆಂಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಹಾಗೂ ಶವವನ್ನು ಸುಡುತ್ತಿರುವ ಕುರಿತು ಭಾನುವಾರ ರಾತ್ರಿ 10.30ಕ್ಕೆ ದೂರವಾಣಿ ಕರೆ ಬಂದಿತ್ತು.
ಅಲ್ಲದೆ, ಹಳೆಯ ನಂಗಲ್ನ ಸ್ಮಶಾನದಲ್ಲಿ ಸುಮಾರು 200 ಗ್ರಾಮಸ್ಥರು ಜಮಾಯಿಸಿರುವ ಕುರಿತಂತೆಯೂ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದರು.
ಪ್ರಕರಣ ಸಂಬಂಧ ಬಾಲಕಿಯ ತಾಯಿ ಹೇಳಿಕೆಯನ್ನು ನೀಡಿದ್ದು, ಸಂಬಂಧಿತ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದೀಗ ಅರ್ಚಕನನ್ನು ಬಂಧನಕ್ಕೊಳಪಡಿಸಲಾಗಿದ್ದು, ಸಾಕ್ಷ್ಯಾಧಾರಗಳ ಸಂಗ್ರಹಕ್ಕೆ ಘಟನಾ ಸ್ಥಳಕ್ಕೆ ಎಫ್ಎಸ್ಎಲ್ ತಂಡ ಮತ್ತು ಅಪರಾಧ ತಂಡವನ್ನು ರವಾನಿಸಲಾಗಿದೆ ಎಂದು ಹೇಳಿದ್ದಾರೆ.
9 ವರ್ಷದ ಬಾಲಕಿಯ ಮೇಲೆ ದಾರುಣವಾಗಿ ಅತ್ಯಾಚಾರವೆಸಗಿ, ಆಕೆಯ ದೇಹವನ್ನು ಸುಟ್ಟುಹಾಕಿರುವ ಘಟನೆ ಭಾನುವಾರ ನಡೆದಿತ್ತು. ಸ್ಮಶಾನ ಮೈದಾನದಿಂದ ನೀರು ತರಲು ಹೋಗಿದ್ದ 9 ವರ್ಷದ ಬಾಲಕಿಯನ್ನು ಅರ್ಚಕ ಸೇರಿದಂತೆ ಹಲವು ಅತ್ಯಾಚಾರವೆಸಗಿ, ಕೊಲೆ ಮಾಡಿದ್ದರು.