ಚಿದಂಬರಂ ಸೆರೆವಾಸಕ್ಕೆ ದ್ವೇಷ, ಪ್ರತೀಕಾರ ಕಾರಣ: ರಾಹುಲ್ ಗಾಂಧಿ ಆರೋಪ
ನವದೆಹಲಿ, ಡಿಸೆಂಬರ್ 4: ಚಿದಂಬರಂ ಅವರನ್ನು ಐಎನ್ಎಕ್ಸ್ ಮೀಡಿಯಾ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ 106 ದಿನಗಳವರೆಗೆ ಜೈಲಿನಲ್ಲಿ ಇರಿಸಿದ್ದು ದ್ವೇಷ ಮತ್ತು ಪ್ರತೀಕಾರದ ಕೃತ್ಯ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಅವರು ಐಎನ್ಎಕ್ಸ್ ಮೀಡಿಯಾ ಹಗರಣದಲ್ಲಿ ವಿಚಾರಣೆಗೆ ಒಳಪಟ್ಟ ಬಳಿಕ 106 ದಿನಗಳ ಸೆರೆವಾಸ ಅನುಭವಿಸಿದ್ದರು. ಅವರಿಗೆ ಸುಪ್ರೀಂಕೋರ್ಟ್ ಬುಧವಾರ ಜಾಮೀನು ನೀಡಿತ್ತು. ಅದರ ಬಳಿಕ ರಾಹುಲ್ ಗಾಂಧಿ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.
ಐಎನ್ಎಕ್ಸ್ ಮೀಡಿಯಾ: ಪಿ ಚಿದಂಬರಂಗೆ ಸುಪ್ರೀಂ ವಿಧಿಸಿರುವ ಷರತ್ತುಗಳೇನು?
'ಪಿ ಚಿದಂಬರಂ ಅವರ 106 ದಿನಗಳ ಕಾರಾಗೃಹವಾಸ ದ್ವೇಷ ಮತ್ತು ಪ್ರತೀಕಾರದ ಫಲ. ಅವರಿಗೆ ಸುಪ್ರೀಂಕೋರ್ಟ್ ಜಾಮೀನು ನೀಡಿರುವುದು ಖುಷಿ ತಂದಿದೆ. ನ್ಯಾಯಸಮ್ಮತ ವಿಚಾರಣೆಯಲ್ಲಿ ಅವರು ತಾವು ನಿರಪರಾಧಿ ಎಂಬುದನ್ನು ಸಾಬೀತುಪಡಿಸಿಕೊಳ್ಳಲು ಸಮರ್ಥರಾಗಲಿದ್ದಾರೆ ಎಂದು ನಾನು ನಂಬಿದ್ದೇನೆ' ಎಂದು ರಾಹುಲ್ ಹೇಳಿದ್ದಾರೆ.
ನ್ಯಾಯಮೂರ್ತಿ ಆರ್ ಭಾನುಮತಿ ಅವರ ನೇತೃತ್ವದ ಮೂವರು ನ್ಯಾಯಮೂರ್ತಿಗಳ ನ್ಯಾಯಪೀಠ ಬುಧವಾರ ಪಿ. ಚಿದಂಬರಂ ಅವರಿಗೆ ಜಾಮೀನು ಮಂಜೂರು ಮಾಡಿತು.
ಆದರೆ ಅವರು ಅನುಮತಿ ಇಲ್ಲದೆ ಪ್ರವಾಸ ಕೈಗೊಳ್ಳುವಂತಿಲ್ಲ ಮತ್ತು ಅಗತ್ಯಬಿದ್ದಾಗ ವಿಚಾರಣೆಗೆ ಹಾಜರಾಗಬೇಕು ಎಂದು ನ್ಯಾಯಾಲಯ ಸೂಚಿಸಿದೆ. ಹಾಗೆಯೇ ಈ ಪ್ರಕರಣದ ಕುರಿತು ಸಾರ್ವಜನಿಕವಾಗಿ ಯಾವುದೇ ಹೇಳಿಕೆ ನೀಡುವಂತಿಲ್ಲ, ಸಂದರ್ಶನ ಕೊಡುವಂತಿಲ್ಲ ಹಾಗೂ ಸಾಕ್ಷಿಗಳನ್ನು ಸಂಪರ್ಕಿಸುವಂತಿಲ್ಲ ಎಂದು ಸಹ ನಿರ್ದೇಶಿಸಲಾಗಿದೆ.
ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಚಿದಂಬರಂಗೆ ಜಾಮೀನು
ರಾಜ್ಯಸಭೆ ಸದಸ್ಯರಾಗಿರುವ ಚಿದಂಬರಂ ಅವರು ಗುರುವಾರ ಬೆಳಿಗ್ಗೆ 11 ಗಂಟೆಗೆ ಸಂಸತ್ ಕಲಾಪದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರ ಮಗ, ಸಂಸದ ಕಾರ್ತಿ ಚಿದಂಬರಂ ತಿಳಿಸಿದ್ದಾರೆ.