ಚಿದು ಅರ್ಜಿ ವಜಾ, ತಿಹಾರ್ ಜೈಲಿನಲ್ಲೇ ಪಿ ಚಿದಂಬರಂ ಹುಟ್ಟುಹಬ್ಬ
Recommended Video
ನವದೆಹಲಿ, ಸೆ.13: ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಸಿಬಿಐ ಕಸ್ಟಡಿಯಲ್ಲಿರುವ ಕೇಂದ್ರದ ಮಾಜಿ ವಿತ್ತ ಸಚಿವ ಪಿ ಚಿದಂಬರಂಗೆ ಶುಕ್ರವಾರ ಶುಭ ಸುದ್ದಿ ಸಿಕ್ಕಿಲ್ಲ. ಚಿದಂಬರಂ ಸಲ್ಲಿಸಿದ್ದ ಶರಣಾಗತಿ ಅರ್ಜಿಯನ್ನು ತಿರಸ್ಕರಿದ ಸುಪ್ರೀಂಕೋರ್ಟ್, ಅವರನ್ನು ಮತ್ತೊಮ್ಮೆ ರೋಸ್ ಅವಿನ್ಯೂ ಕೋರ್ಟ್ ವರನ್ನು ತಿಹಾರ್ ಜೈಲಿಗೆ ಕಳುಹಿಸಿದೆ.
ಕಾರ್ತಿ ಇಂದ್ರಾಣಿ ಭೇಟಿ; ಚಿದು ಕಾರ್ಯತಂತ್ರ ರಹಸ್ಯ ಬಯಲು ಮಾಡಿದ 'ಇಡಿ'
"ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಚಿದಂಬರಂಗೆ ಸೆಪ್ಟೆಂಬರ್ 19ರ ತನಕ ಜೈಲುವಾಸ ಅನುಭವಿಸಬೇಕಿದೆ" ಎಂದು ವಿಶೇಷ ಜಡ್ಜ್ ಅಜಯ್ ಕುಮಾರ್ ಕುಹರ್ ತಮ್ಮ ಆದೇಶದಲ್ಲಿ ಹೇಳಿದ್ದಾರೆ. ಹೀಗಾಗಿ, ಚಿದಂಬರಂ ತಮ್ಮ 74ನೇ ಹುಟ್ಟುಹಬ್ಬ(ಸೆ. 16ರಂದು)ವನ್ನು ತಿಹಾರ್ ಜೈಲಿನಲ್ಲೇ ಆಚರಿಸಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಸೆ.26ರಂದು ಚಿದಂಬರಂ ಅವರ ಜಾಮೀನು ಅರ್ಜಿ ವಿಚಾರಣೆಗೆ ಬರಲಿದೆ.
ಚಿದಂಬರಂ ಬಂಧನದ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿದ ಇಂದ್ರಾಣಿ
ನಿರೀಕ್ಷಣಾ ಜಾಮೀನು ಕೋರಿ ಚಿದಂಬರಂ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿತ್ತು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಚಿದಂಬರಂಗೆ ನಿರಾಶೆಯಾಗಿತ್ತು. ನಂತರ ನಮಗೆ ನ್ಯಾಯಾಂಗ ಬಂಧನ ಬೇಡ, ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಮುಂದೆ ಶರಣಾಗತನಾಗಲು ನನ್ನ ಕಕ್ಷಿದಾರ ಸಿದ್ಧ" ಎಂದು ಕೋರ್ಟ್ ಮುಂದೆ ಚಿದಂಬರಂ ಪರ ವಕೀಲ ಕಪಿಲ್ ಸಿಬಾಲ್ ವಾದಿಸಿದ್ದರು. ಆದರೆ, ಕಪಿಲ್ ವಾದಕ್ಕೆ ಮನ್ನಣೆ ಸಿಕ್ಕಿಲ್ಲ.
"ಆಗಸ್ಟ್ 21ರಂದು ದೆಹಲಿ ನಿವಾಸದಲ್ಲಿದ್ದ ಚಿದಂಬರಂರನ್ನು ಸಿಬಿಐ ಅಧಿಕಾರಿಗಳು ತಮ್ಮ ವಶಕ್ಕೆ ತೆಗೆದುಕೊಂಡಿದ್ದು, 11 ದಿನಗಳ ಕಾಲ ಕಸ್ಟಡಿಯಲ್ಲಿಟ್ಟುಕೊಂಡು ವಿಚಾರಣೆ ನಡೆಸಿದ್ದಾರೆ. ಅವರಿಗೆ ಭದ್ರತೆ ಬೇಕಿದೆ, ತಿಹಾರ್ ಜೈಲಿಗೆ ಕಳಿಸದಿದ್ದರೆ ಗೃಹಬಂಧನ ವಿಧಿಸಿ' ಎಂದು ಕಪಿಲ್ ಸಿಬಾಲ್ ಈ ಮುಂಚೆ ವಾದಿಸಿದ್ದರು. "ಆದರೆ ಗೃಹ ಬಂಧನವನ್ನು ರಾಜಕೀಯ ಕೈದಿಗಳಿಗೆ ಬಳಸುವ ವಿಧಾನವಾಗಿದೆ, ಇದು ಭ್ರಷ್ಟಾಚಾರ ಪ್ರಕರಣವಾಗಿದ್ದು, ಚಿದಂಬರಂ ಜಾಮೀನಿಗಾಗಿ ಅರ್ಜಿ ಸಲ್ಲಿಸಬಹುದು' ಎಂದು ಸುಪ್ರೀಂಕೋರ್ಟ್ ಸೂಚಿಸಿತ್ತು. ಅದರಂತೆ, ಚಿದಂಬರಂ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆದು, ಅರ್ಜಿ ತಿರಸ್ಕಾರಗೊಂಡಿದೆ.