ಪ್ರೇಮಿ ಮರೆತು ತಂದೆ, ತಾಯಿ ಪೂಜಿಸಿ : ಛತ್ತೀಸ್ಗಢ
ಛತ್ತೀಸ್ಗಢ, ಫೆ. 7: ಬಿಜೆಪಿ ಅಧಿಕಾರದಲ್ಲಿರಲಿ ಇಲ್ಲದಿರಲಿ, ಹಿಂದೂ ಸಂಘಟನೆಗಳು ಪ್ರೇಮಿಗಳ ದಿನಾಚರಣೆಯಂದು ತಮ್ಮ ಪ್ರತಾಪ ತೋರಿಸುತ್ತಲೇ ಬಂದಿವೆ. ಈ ವರ್ಷ ಉತ್ತರ ಪ್ರದೇಶದಲ್ಲಿ ಪ್ರೇಮಿಗಳು ಸಿಕ್ಕರೆ ಮದುವೆ ಮಾಡಿಬಿಡ್ತೇವೆ ಎಂದು ಹಿಂದೂ ಮಹಾಸಭಾ ಎಚ್ಚರಿಕೆ ನೀಡಿದೆ.
ಬಿಜೆಪಿ ಅಧಿಕಾರದಲ್ಲಿರುವ ಛತ್ತೀಸ್ಗಢದಲ್ಲಿ ವಿರೋಧ ವ್ಯಕ್ತವಾಗುವುದಕ್ಕೂ ಮೊದಲು ಸರ್ಕಾರವೇ ಮುಂದಾಗಿ ಫೆ. 14ನ್ನು 'ಮಾತಾ, ಪಿತೃ ದಿನ'ವಾಗಿ ಘೋಷಿಸಿದೆ. ಎಲ್ಲ ಸರ್ಕಾರಿ ಶಾಲೆಗಳಲ್ಲಿ ಪ್ರತಿ ವರ್ಷ ಪಾಲಕರ ಪೂಜಾ ದಿನ ಆಚರಿಸಬೇಕು ಎಂದು ಸ್ಪಷ್ಟವಾಗಿ ಸೂಚಿಸಿದೆ.
ಈ ಕುರಿತು ಪ್ರತಿ ವರ್ಷ ವಿಶೇಷ ಆದೇಶ ನೀಡುವುದಿಲ್ಲ. ಫೆ. 14ರಂದು ಪಾಲಕರನ್ನು ಶಾಲೆಗೆ ಕರೆಸಿ ಆರತಿ ಬೆಳಗಿ, ಸಿಹಿ ನೀಡಿ ಗೌರವ ಸಲ್ಲಿಸಬೇಕು ಎಂದು ರಮಣಸಿಂಗ್ ನೇತೃತ್ವದ ರಾಜ್ಯ ಸರ್ಕಾರ ತಿಳಿಸಿದೆ. [ಪ್ರೇಮಿಗಳು ಸಿಕ್ಕರೆ ಮದುವೆ ಗ್ಯಾರಂಟಿ]
ಕರ್ನಾಟಕದಲ್ಲಿ ಕಳೆದ ವರ್ಷದವರೆಗೂ ಪ್ರೇಮಿಗಳ ದಿನಾಚರಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಶ್ರೀರಾಮ ಸೇನೆ ಈ ವರ್ಷ ಸುಮ್ಮನುಳಿದಿದೆ. ಭಜರಂಗದಳ ಕೂಡ ಯಾವುದೇ ಪ್ರತಿರೋಧ ತೋರಲು ಪ್ರಯತ್ನಿಸಿಲ್ಲ.
ಉತ್ತರ ಪ್ರದೇಶದಲ್ಲಿ ಪ್ರೇಮಿಗಳು ಸಿಕ್ಕರೆ ಆರ್ಯ ಸಮಾಜ ಪದ್ಧತಿಯಂತೆ ಮದುವೆ ಮಾಡಲಾಗುವುದು. ಪ್ರೇಮಿಗಳು ಅಂತರ್ ಧರ್ಮೀಯರಾಗಿದ್ದರೆ ಅವರನ್ನು ಶುದ್ಧೀಕರಣಗೊಳಿಸಿ ಮದುವೆ ಮಾಡಲಾಗುವುದು. ಸಾಮಾಜಿಕ ಜಾಲತಾಣಗಳ ಮೇಲೂ ಕಣ್ಣಿಡಲಾಗುವುದು ಎಂದು ಹಿಂದೂ ಮಹಾಸಭಾ ಎಚ್ಚರಿಕೆ ನೀಡಿದೆ.