ಚಂದ್ರಯಾನ-2 ಸಂವಹನ ಕಳೆದುಕೊಂಡಿಲ್ಲ! ಆನಂದ್ ಮಹೀಂದ್ರಾ ಟ್ವೀಟ್
ನವದೆಹಲಿ, ಸೆಪ್ಟೆಂಬರ್ 07: "ಚಂದ್ರಯಾನ-2 ಸಂವಹನ ಕಳೆದುಕೊಂಡಿಲ್ಲ. ಭಾರತ ಪ್ರತಿಯೊಬ್ಬ ವ್ಯಕ್ತಿಯೂ ಚಂದ್ರಯಾನ 2 ರ ಹೃದಯಬಡಿತವನ್ನು ಕೇಳಿಸಿಕೊಳ್ಳುತ್ತಿದ್ದಾನೆ, ಅದರ ನಾಡಿಮಿಡಿತ ಅನುಭವಕ್ಕೆ ಬರುತ್ತಿದೆ. ನೀವು ಮೊದಲ ಬಾರಿ ಗೆಲ್ಲದಿದ್ದರೆ ಮತ್ತೆ ಮತ್ತೆ ಪ್ರಯತ್ನಿಸಿ ಎಂದು ಅದು ಮೆಲುಧ್ವನಿಯಲ್ಲಿ ಹೇಳುತ್ತಿರುವುದು ಕೇಳಿಸುತ್ತಿದೆ" ಎಂದು ಉದ್ಯಮಿ ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ.
ಈ ಮೂಲಕ ಚಂದ್ರಯಾನ 2 ಕೊನೆಯ ಕ್ಷಣದಲ್ಲಿ ಅನಿರೀಕ್ಷಿತ ತಿರುವು ಪಡೆದ ಬಗ್ಗೆ ಭರವಸೆ ಕಳೆದುಕೊಳ್ಳುವ ಅಗತ್ಯವಿಲ್ಲ ಎಂದಿದ್ದಾರೆ. 'ಸೆಪ್ಟೆಂಬರ್ 7 ರ ಬೆಳಗ್ಗಿನ ಜಾವ 1:37 ರ ವೇಳೆಗೆ ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವ ಪ್ರಕ್ರಿಯೆಯನ್ನು ನಿರೀಕ್ಷೆಯಂತೆಯೇ ಆರಂಭಿಸಿತ್ತು. 1:49 ರ ವೇಳೆಗೆ ರಫ್ ಬ್ರೇಕಿಂಗ್ ಫೇಸ್ ಅನ್ನು ಯಶಸ್ವಿಯಾಗಿ ಪೂರೈಸಿದ ನಂತರ 2.05 ರ ಹೊತ್ತಿಗೆ ಆರ್ಬಿಟರ್ ನಿಂದ ಬೇರ್ಪಟ್ಟಿದ್ದ ವಿಕ್ರಂ ಲ್ಯಾಂಡರ್ ನಿಂದ ಡೇಟಾಗಳನ್ನುಸ್ವೀಕರಿಸುವುದನ್ನು ಆರಂಭಿಸಿದ ನೌಕೆ, ಇದ್ದಕ್ಕಿದ್ದಂತೆ ಸಂವಹನ ಕಳೆದುಕೊಂಡಿತ್ತು.
'ಕಳೆದುಕೊಂಡಿದ್ದು ಸಂವಹನವನ್ನ, ಭರವಸೆಯನ್ನಲ್ಲ!' ಇಸ್ರೋ ಬೆನ್ನಿಗೆ ನಿಂತ ಭಾರತ
"ಡೇಟಾಗಳನ್ನು ನಾವು ವಿಶ್ಲೇಷಿಸಉತ್ತಿದ್ದು, ಹೆಚ್ಚಿನ ಮಾಹಿತಿ ಲಭ್ಯವಾಗುವವರೆಗೂ ನೌಕೆ ಗುರಿ ತಲುಪಿದೆಯೋ ಇಲ್ಲವೋ ಎಂದು ಖಚಿತ ಮಾಹಿತಿ ನೀಡಲು ಸಾಧ್ಯವಿಲ್ಲ" ಎಂದು ಇಸ್ರೋ ಹೇಳಿದೆ.
ಆದರೆ ಜಗತ್ತಿನಲ್ಲಿ ಯಾವ ದೇಶವೂ ಹೋಗಿರದ ಚಂದ್ರನ ಮೇಲ್ಮೈಗೆ ತೆರಳುವಲ್ಲಿ ಬಹುಪಾಲು ಯಶಸ್ವಿಯಾದ ಇಸ್ರೋದ ಸಾಧನೆಯನ್ನು ಇಡೀ ದೇಶವೂ ಕೊಂಡಾಡಿದೆ.