ಕೆಸಿಆರ್ ಗೂ ಸ್ವಾಗತ: ಬಿಜೆಪಿ ನಿದ್ದೆ ಕೆಡಿಸಿದ ನಾಯ್ಡು ಶಾಕಿಂಗ್ ಹೇಳಿಕೆ
ನವದೆಹಲಿ, ಮೇ 18: ಆಂಧ್ರಪ್ರದೇಶದ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ತೆಲುಗು ದೇಶಂ ಪಕ್ಷದ ಸಾಧನೆ ಕಳಪೆಯಾಗಿದ್ದರೂ ಸರಿಯೇ, ಕೇಂದ್ರದಲ್ಲಿ ನರೇಂದ್ರ ಮೊದಿ ನೇತೃತ್ವದ ಸರ್ಕಾರವನ್ನಂತೂ ಉಳಿಯಬಿಡಬಾರದು ಎಂಬುದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಲೆಕ್ಕಾಚಾರವಾಗಿರುವಂತಿದೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಆದ್ದರಿಂದ ಅವರು ತಮ್ಮೆಲ್ಲ ಹಮ್ಮು-ಬಿಮ್ಮುಗಳನ್ನು ಮರೆತು ಬದ್ಧ ವೈರಿ ಟಿಆರ್ ಎಸ್ ನ ಕೆ ಚಂದ್ರಶೇಖರ್ ರಾವ್ ಅವರ ಓಲೈಕೆಗೂ ಸಿದ್ಧರಾಗಿದ್ದಾರೆ. ಬಿಜೆಪಿ ವಿರೋಧಿ ಮೈತ್ರಿಕೂಟಕ್ಕೆ ನಾನು ಎಲ್ಲ ಸಮಾನ ಮನಸ್ಕ ಪಕ್ಷಗಳನ್ನೂ ಸ್ವಾಗತಿಸುತ್ತೇನೆ, ತೆಲಂಗಾಣ ರಾಷ್ಟ್ರ ಸಮಿತಿಯನ್ನೂ ಎಂದು ನಾಯ್ಡು ಹೇಳಿಕೆ ನೀಡಿರುವುದು ಬಿಜೆಪಿಯ ನಿದ್ದೆ ಕೆಡಿಸಿದೆ.
ಮಹಾಘಟಬಂಧನ ಪರ್ವಕ್ಕೆ ನಾಯ್ಡು ಮುಂದಾಳತ್ವ! ಇಂದು ಮಹತ್ವದ ಸಭೆ
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಚಂದ್ರಬಾಬು ನಾಯ್ಡು, "ಚುನಾವಣಾ ಫಲಿತಾಂಶ ಘೋಷಣೆಯಾಗುತ್ತಿದ್ದಂತೆಯೇ ಬಿಜೆಪಿ ಹೊರತಾಗಿ ಯಾವೆಲ್ಲ ಪಕ್ಷಗಳು ನಮ್ಮೊಂದಿಗೆ ಬರುತ್ತವೋ ಅವನ್ನೆಲ್ಲ ನಾನು ಸ್ವಾಗತಿಸುತ್ತೇನೆ. ತೆಲಂಗಾಣ ರಾಷ್ಟ್ರ ಸಮಿತಿಯನ್ನೂ ಈ ಮೈತ್ರಿಕೂಟಕ್ಕೆ ಆಹ್ವಾನಿಸಲು ನಾನು ರೆಡಿ" ಎಂದಿದ್ದರು.
ನಾಯ್ಡು ಕರೆಗೆ ಕೆಸಿಆರ್ ಒಪ್ಪುತ್ತಾರಾ?
ವಿಧಾನಸಭೆ ಚುನಾವಣೆಯಲ್ಲಿ ಪರಸ್ಪರ ವಿರೋಧಿಗಳಾಗಿ ಕಾದಾಡಿ, ಈಗ ಕೇಂದ್ರದಲ್ಲಿ ಮಿತ್ರರಾಗುವುದು ಎಂದರೆ ಅದಕ್ಕೆ ಕೆ ಚಂದ್ರಶೇಖರ್ ರಾವ್ ಒಪ್ಪುತ್ತಾರೆಯೇ. ಕಾಂಗ್ರೆಸ್-ಬಿಜೆಪಿ ಎರಡೂ ಪಕ್ಷವನ್ನೂ ಹೊರಗಿಟ್ಟು ಮೈತ್ರಿಕೂಟ ರಚಿಸಲು ಮುಂದಾಗಿದ್ದ ಕೆಸಿಆರ್, ಎಂಕೆ ಸ್ಟಾಲಿನ್ ಅವರು ಬೆಂಬಲ ನೀಡದ ಕಾರಣ ಆ ಯೋಚನೆಯನ್ನು ಪಕ್ಕಕ್ಕೆ ಸರಿಸಿದ್ದಾರೆ. ಹಾಗಂತ ಅವರು ನಾಯ್ಡು ಅವರ ಕರೆಗೆ ಓಗೊಟ್ಟು ಮಹಾಘಟಬಂಧನಕ್ಕೆ ಬಂದುಬಿಡುತ್ತಾರೆ ಎಂಬುದು ಅನುಮಾನವೇ!
ಅಖಾಡಕ್ಕಿಳಿದ ನಾಯ್ಡು, ದೇಶದ ರಾಜಕೀಯದಲ್ಲಿನ್ನು ಮಿಂಚಿನ ಸಂಚಾರ!
ವೈಎಸ್ ಆರ್ ಕಾಂಗ್ರೆಸ್ ಕತೆ ಏನು?
ಬಿಜೆಪಿ ಹೊರತಾಗಿಸಿ ಯಾರನ್ನು ಬೇಕಾದರೂ ಆಮಂತ್ರಿಸಲು ಸಿದ್ಧ ಎಂದು ನಾಯ್ಡು ಹೇಳಿದ್ದಾರೆ. ಅಂದರೆ ಆಂಧ್ರಪ್ರದೇಶದಲ್ಲಿ ತಮ್ಮ ವಿಕ್ಷವಾದ ವೈ ಎಸ್ ಆರ್ ಕಾಂಗ್ರೆಸ್ ಅನ್ನೂ ನಾಯ್ಡು ಸ್ವಾಗತಿಸುತ್ತಾರಾ ಎಂಬುದು ಕುತೂಹಲದ ಪ್ರಶ್ನೆಯಾಗಿದೆ.
ದೆಹಲಿಯಲ್ಲಿ ಇಂದು ಸಭೆ
ದೆಹಲಿಯಲ್ಲಿ ಇಂದು ಚಂದ್ರಬಾಬು ನಾಯ್ಡು ಅವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಮೇ 23 ರಂದು ಚುನಾವಣೆ ಫಲಿತಾಂಶ ಪ್ರಕರಣವಾಗಲಿದ್ದು, ಅದಕ್ಕೂ ಮುನ್ನವೇ ಮಹಾಘಟಬಂಧನಕ್ಕೆ ಒಂದು ಅತಿಮರೂಪ ನೀಡಲು ನಾಯ್ಡು ಪಟ್ಟುಹಿಡಿದಿದ್ದು, ಅದಕ್ಕಾಗಿ ಎಲ್ಲಾ ಪ್ರಯತ್ನವನ್ನೂ ಮಾಡುತ್ತಿದ್ದಾರೆ.
ಮಾಯಾವತಿ-ಅಖಿಲೇಶ್ ಭೇಟಿ
ರಾಹುಲ್ ಗಾಂಧಿ ಅವರನ್ನು ದೆಹಲಿಯಲ್ಲಿ ಭೇಟಿಯಾದ ನಂತರ ಲಕ್ನೋಕ್ಕೆ ತೆರಳಿ ಅಲ್ಲಿ, ಬಿ ಎಸ್ಪಿ ನಾಯಕಿ ಮಾಯಾವತಿ ಮತ್ತು ಎಸ್ಪಿ ನಾಯಕ ಅಖಿಲೇಶ್ ಯಾದವ್ ಅವರನ್ನೂ ನಾಯ್ಡು ಬೇಟಿಯಾಗಲಿದ್ದಾರೆ. ಆದರೆ ಪ್ರಧಾನಿ ಪಟ್ಟದ ಆಕಾಂಮಕ್ಷಿಯಾಗಿರುವ ಮಾಯಾವತಿ ಮಹಾಘಟಬಂಧನಕ್ಕೆ ಬೆಂಬಲ ಬೇಕೆಂದರೆ "ಷರತ್ತುಗಳು ಅನ್ವಯ" ಎನ್ನಬಹುದು. ಅದಕ್ಕೆ ನಾಯ್ಡು ಏನೆನ್ನಬಹುದು ಎಂಬುದು ಕುತೂಹಲದ ವಿಷಯ.