ಚಂದ್ರಬಾಬು ನಾಯ್ಡು ಕಿಂಗ್ ಆಗ್ತಾರಾ, ಕಿಂಗ್ ಮೇಕರ್ ಆಗ್ತಾರಾ?
Recommended Video
ನವದೆಹಲಿ, ಮೇ 19 : ಲೋಕಸಭೆ ಚುನಾವಣೆ 2019 ಕಡೆಯ ಹಂತಕ್ಕೆ ಬಂದಿದ್ದು, ಆಡಳಿತಾರೂಢ ಭಾರತೀಯ ಜನತಾ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸಲು ಸರ್ವಪ್ರಯತ್ನ ನಡೆಸಿರುವ ತೆಲುಗು ದೇಶಂ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಅವರು ಭಾನುವಾರ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಬಿಜೆಪಿಯನ್ನು ಬುಡಮೇಲು ಮಾಡಲು ಎಡೆಬಿಡದ ಪ್ರಯತ್ನ ನಡೆಸಿರುವ ಆಂಧ್ರ ಪ್ರದೇಶದ ಮುಖ್ಯಮಂತ್ರಿ, ಇದಕ್ಕೂ ಮೊದಲು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಎರಡನೇ ಬಾರಿ ಭೇಟಿ ಮಾಡಿ ಮಾತುಕತೆ ನಡೆಸಿದರು. ಶನಿವಾರವೂ ಅವರು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಮುಂದಿನ ರೂಪುರೇಷೆಗಳ ಬಗ್ಗೆ ಚರ್ಚಿಸಿದ್ದರು.
ಕೆಸಿಆರ್ ಗೂ ಸ್ವಾಗತ: ಬಿಜೆಪಿ ನಿದ್ದೆ ಕೆಡಿಸಿದ ನಾಯ್ಡು ಶಾಕಿಂಗ್ ಹೇಳಿಕೆ
ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ನಾಯಕ ಶರದ್ ಪವಾರ್ ಅವರನ್ನು ಕೂಡ ನಾಯ್ಡು ಅವರು ಎರಡನೇ ಬಾರಿ ಭೇಟಿ ಆಗಿದ್ದು ಕುತೂಹಲ ಹುಟ್ಟಿಸಿದೆ. ಶನಿವಾರವೇ ಅವರು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ಬಹುಜನ ಸಮಾಜ ಪಕ್ಷದ ಧುರೀಣೆ ಕುಮಾರಿ ಮಾಯಾವತಿ, ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಅವರ ಜೊತೆ ಮಾತುಕತೆ ನಡೆಸಿದ್ದರು.
ಮೇ 21ರಂದು ಸೋನಿಯಾ ಗಾಂಧಿ ಸಭೆ
ಈ ನಡುವೆ, ಕಡೆಯ ಏಳನೇ ಹಂತದ ಮತದಾನ ಮೇ 19ರಂದು ಭಾನುವಾರ ಮುಗಿಯುತ್ತಿದ್ದಂತೆ, ಮೇ 21ರಂದು ಮಂಗಳವಾರ ಯುಪಿಎ ಚೇರ್ ಪರ್ಸನ್ ಸೋನಿಯಾ ಗಾಂಧಿ ಅವರು ಎಲ್ಲ ವಿರೋಧ ಪಕ್ಷಗಳ ನಾಯಕ ಸಭೆಯನ್ನು ಕೂಡ ಕರೆದಿದ್ದಾರೆ. ಫಲಿತಾಂಶ ಪ್ರಕಟವಾಗುವ ಎರಡು ದಿನ ಮೊದಲೇ ಈ ಸಭೆಯನ್ನು ಆಯೋಜಿಸಲಾಗಿರುವುದು ಭಾರೀ ಕುತೂಹಲ ಕೆರಳಿಸಿದೆ. ಈ ಸಭೆಗೆ ಕೆಲ ಪಕ್ಷಗಳು ಗೈರಾಗುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.
ಬಾಬು ಕಿಂಗ್ ಮೇಕರ್ ಆಗ್ತಾರಾ ಅಥವಾ ಕಿಂಗ್?
ಬಿಜೆಪಿ ಮತ್ತೆ ಅಧಿಕಾರಕ್ಕೆ ಬರದಂತೆ ಇಚ್ಛಿಸುತ್ತಿರುವ ಎಲ್ಲ ಪಕ್ಷಗಳ ನಾಯಕರೊಂದಿಗೆ ಅವರು ಮಾತುಕತೆ ನಡೆಸಿದ್ದು, ಬಿಜೆಪಿ ವಿರೋಧಿ ಪಕ್ಷಗಳು ಒಗ್ಗಟ್ಟಾಗಿರಲು ಮತ್ತು ಒಮ್ಮತದ ಪ್ರಧಾನಿ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ. ಅಚ್ಚರಿಯೆಂದರೆ, ಅವರು ಕೂಡ ಪ್ರಧಾನಿ ಹುದ್ದೆಯ ಆಕಾಂಕ್ಷಿಯಾಗಿದ್ದಾರೆ. 1999ರಲ್ಲಿ ಎಚ್ ಡಿ ದೇವೇಗೌಡ ಅವರು ಪ್ರಧಾನಿಯಾಗಿದ್ದಾಗ ಇದೇ ಚಂದ್ರಬಾಬು ನಾಯ್ಡು ಅವರು ಮಹತ್ವದ ಪಾತ್ರ ವಹಿಸಿದ್ದರು. ಆಗ ಅವರನ್ನು ಕಿಂಗ್ ಮೇಕರ್ ಎಂಬ ಬಿರುದಿನಿಂದ ಕರೆಯಲಾಗಿತ್ತು. ಈಗಲೂ ಅವರು ಅದೇ ನಿಟ್ಟಿನಲ್ಲಿ ಕಿಂಗ್ ಮೇಕರ್ ಆಗುವ ಪ್ರಯತ್ನದಲ್ಲಿದ್ದಾರೆ. ಅವರು ಕಿಂಗ್ ಮೇಕರ್ ಆಗ್ತಾರಾ ಅಥವಾ ಅವರೇ ಕಿಂಗ್ ಆಗ್ತಾರಾ ಎಂಬುದು ಮೇ 23ರ ನಂತರ ತಿಳಿದುಬರಲಿದೆ.
ಅಖಾಡಕ್ಕಿಳಿದ ನಾಯ್ಡು, ದೇಶದ ರಾಜಕೀಯದಲ್ಲಿನ್ನು ಮಿಂಚಿನ ಸಂಚಾರ!
ಹೀಗೆಂದು ರಾಹುಲ್ ಸುಳಿವು ನೀಡಿದ್ದಾರೆ
ಒಂದು ವೇಳೆ ಭಾರತೀಯ ಜನತಾ ಪಕ್ಷ ಬಹುಮತ ಪಡೆಯಲು ವಿಫಲವಾದರೆ, ಯಾವ ರೀತಿಯ ಕಾರ್ಯಾಚರಣೆ ನಡೆಸಬೇಕು, ಬಿಜೆಪಿ ವಿರೋಧಿ ಪಕ್ಷಗಳಿಂದ ಯಾವ ರೀತಿ ಸರಕಾರ ರಚನೆಯಾಗಬೇಕು, ಯಾರು ಸರ್ವಸಮ್ಮತ ಪ್ರಧಾನಿ ಅಭ್ಯರ್ಥಿಯಾಗಬೇಕು ಎಂಬುದು ಆ ಮಾತುಕತೆಯ ತಿರುಳಾಗಿದೆ. ವಿರೋಧ ಪಕ್ಷಗಳಲ್ಲಿ ಯಾವ ಪಕ್ಷಕ್ಕೆ ಅತ್ಯಧಿಕ ಸೀಟುಗಳು ಲಭ್ಯವಾಗುತ್ತವೋ ಅವರು ಪ್ರಧಾನಿ ಅಭ್ಯರ್ಥಿಯಾಗಲಿದ್ದಾರೆ ಎಂದು ರಾಹುಲ್ ಗಾಂಧಿ ಅವರು ಈಗಾಗಲೆ ಸುಳಿವು ನೀಡಿದ್ದಾರೆ. ಈ ನಿಟ್ಟಿನಲ್ಲಿ ಅವರೇ ಪ್ರಧಾನಿ ಅಭ್ಯರ್ಥಿಯಾಗುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ. ಆದರೆ, ಮಾಯಾವತಿ, ಮಮತಾ ಬ್ಯಾನರ್ಜಿ ಅಂಥವರು ಕಡೆಯ ಅವಕಾಶವನ್ನು ಬಿಟ್ಟುಕೊಡುತ್ತಾರಾ?
ಇಂಥದೇ ಪ್ರಯತ್ನ ಕೆಸಿಆರ್ ನಡೆಸಿದ್ದರು
ಇಂಥದೇ ಪ್ರಯತ್ನವನ್ನು ತೆಲಂಗಾಣ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಮತ್ತು ತೆಲಂಗಾಣದ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರು ಕೂಡ ಕೆಲ ದಿನಗಳ ಹಿಂದೆ ನಡೆಸಿದ್ದರು. ಆದರೆ, ಪ್ರಾದೇಶಿಕ ಪಕ್ಷಗಳನ್ನು ಒಲಿಸಿಕೊಳ್ಳಲು ಅವರು ಸಂಪೂರ್ಣವಾಗಿ ವಿಫಲರಾದರು. ಕಾಂಗ್ರೆಸ್ಸನ್ನು ಹೊರಗಿಟ್ಟು ತೃತೀಯ ರಂಗ ನಿರ್ಮಿಸಬೇಕೆಂಬ ಅವರ ಪ್ರಯತ್ನಕ್ಕೆ ಯಾವುದೇ ಯಶಸ್ಸು ಸಿಗಲಿಲ್ಲ. ನೀವು ಬಂದು ಕಾಂಗ್ರೆಸ್ ಇರುವ ಮಹಾಘಟಬಂಧನ್ ಸೇರಿಕೊಳ್ಳಿ ಎಂದು ಡಿಎಂಕೆ ಪಕ್ಷದ ಸ್ಟಾಲಿನ್ ಅವರು ಕೆಸಿಆರ್ ಅವರಿಗೆ ಕಿವಿಮಾತು ಹೇಳಿದ್ದರು.
ಈ ಬಾರಿ ಅಚ್ಚರಿಯ ಫಲಿತಾಂಶ: ಕೆ. ಚಂದ್ರಶೇಖರ ರಾವ್ ಭವಿಷ್ಯ
ಪ್ರಧಾನಿ ಹುದ್ದೆಯ ಮೇಲೆ ಎಲ್ಲರ ಕಣ್ಣು
ಬಿಜೆಪಿ ನೇತೃತ್ವದ ಎನ್ಡಿಎ ಬಹುಮತ ಗಳಿಸಲು ವಿಫಲವಾದರೆ ಮಹಾಘಟಬಂಧನ್ ಖಂಡಿತವಾಗಿಯೂ ಸರಕಾರ ರಚಿಸಲು ಪ್ರಯತ್ನಿಸಲಿದೆ. ಅದರಲ್ಲಿ ಈಗಾಗಲೆ ರಾಹುಲ್ ಗಾಂಧಿ ಸೇರಿದಂತೆ ಚಂದ್ರಬಾಬು ನಾಯ್ಡು, ಮಾಯಾವತಿ, ಮಮತಾ ಬ್ಯಾನರ್ಜಿ, ಶರದ್ ಪವಾರ್ ಮುಂತಾದವರು ಪ್ರಧಾನಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ. ಮೇ 23ರಂದು ಪ್ರಕಟವಾಗಲಿರುವ ಲೋಕಸಭೆ ಚುನಾವಣೆಯ ಫಲಿತಾಂಶದ ನಂತರವೇ ಸ್ಪಷ್ಟ ಚಿತ್ರಣ ಸಿಗಲಿದೆ.