ಜನರು ಮತ್ತು ಸರಕುಗಳ ಚಲನೆಗೆ ಯಾವುದೇ ನಿರ್ಬಂಧವಿಲ್ಲವೇ ಎಂಬುದನ್ನು ಖಚಿತ ಪಡಿಸಿಕೊಳ್ಳಿ: ರಾಜ್ಯಗಳಿಗೆ ಕೇಂದ್ರದ ಪತ್ರ
ನವದೆಹಲಿ, ಆಗಸ್ಟ್ 22: ಲಾಕ್ಡೌನ್ ಬಳಿಕ ಹಂತ ಹಂತವಾಗಿ ನಡೆಯುತ್ತಿರುವ ಅನ್ಲಾಕ್ ಪ್ರಕ್ರಿಯೆಯಲ್ಲಿ ವ್ಯಕ್ತಿಗಳು ಮತ್ತು ಸರಕುಗಳ ಅಂತರ್-ರಾಜ್ಯ ಚಲನೆಗೆ ಯಾವುದೇ ನಿರ್ಬಂಧಗಳಿಲ್ಲ ಎಂದು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳನ್ನು ಕೇಳಿದೆ.
Recommended Video
ಈ ಕುರಿತು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ನೀಡಿದ ಪತ್ರದಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರು ವಿವಿಧ ಜಿಲ್ಲೆಗಳು ಮತ್ತು ರಾಜ್ಯಗಳಿಂದ ಸ್ಥಳೀಯ ಮಟ್ಟದಲ್ಲಿ ನಿರ್ಬಂಧಗಳನ್ನು ವಿಧಿಸಲಾಗುತ್ತಿದೆ ಎಂಬ ವರದಿಗಳಿವೆ ಎಂದು ಹೇಳಿದರು.
ಸೆಪ್ಟೆಂಬರ್ನಿಂದ ಮೆಟ್ರೋ ರೈಲು ಸಂಚಾರ ಆರಂಭ?
ಅನ್ಲಾಕ್ 3 ಮಾರ್ಗಸೂಚಿಗಳತ್ತ ತಿಳಿಸಿರುವ ಭಲ್ಲಾ, ಇಂತಹ ನಿರ್ಬಂಧಗಳು ಸರಕು ಮತ್ತು ಸೇವೆಗಳ ಅಂತರ-ರಾಜ್ಯ ಚಲನೆಯಲ್ಲಿ ಸಮಸ್ಯೆಗಳನ್ನು ಸೃಷ್ಟಿಸುತ್ತಿವೆ ಮತ್ತು ಪೂರೈಕೆ ಸರಪಳಿಗಳ ಮೇಲೆ ಪರಿಣಾಮ ಬೀರುತ್ತಿವೆ. ಇದರಿಂದಾಗಿ ಆರ್ಥಿಕ ಚಟುವಟಿಕೆ ಮತ್ತು ಉದ್ಯೋಗದಲ್ಲಿ ಅಡ್ಡಿ ಉಂಟಾಗುತ್ತದೆ. ಅನ್ಲಾಕ್ ಮಾರ್ಗಸೂಚಿಗಳು ವ್ಯಕ್ತಿಗಳು ಮತ್ತು ಸರಕುಗಳ ರಾಜ್ಯದೊಳಗಿನ ಮತ್ತು ಅಂತರ್-ರಾಜ್ಯ ಚಲನೆಗೆ ಯಾವುದೇ ನಿರ್ಬಂಧಗಳಿಲ್ಲ ಎಂದು ಸ್ಪಷ್ಟವಾಗಿ ತಿಳಿಸುತ್ತದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ನೆರೆಯ ರಾಷ್ಟ್ರಗಳೊಂದಿಗಿನ ಒಪ್ಪಂದಗಳ ಅಡಿಯಲ್ಲಿ ಭೂ ಗಡಿ ವ್ಯಾಪಾರಕ್ಕಾಗಿ ವ್ಯಕ್ತಿಗಳು ಮತ್ತು ಸರಕುಗಳ ಚಲನೆಗೆ ಪ್ರತ್ಯೇಕ ಅನುಮತಿ, ಅನುಮೋದನೆ ಅಥವಾ ಇ-ಪರ್ಮಿಟ್ ಅಗತ್ಯವಿಲ್ಲ ಎಂದು ಮಾರ್ಗಸೂಚಿಗಳು ತಿಳಿಸಿವೆ. ಅಂತಹ ನಿರ್ಬಂಧಗಳು ವಿಪತ್ತು ನಿರ್ವಹಣಾ ಕಾಯ್ದೆ 2005 ರ ನಿಬಂಧನೆಗಳ ಅಡಿಯಲ್ಲಿ ಗೃಹ ಸಚಿವಾಲಯ ಹೊರಡಿಸಿದ ಮಾರ್ಗಸೂಚಿಗಳ ಉಲ್ಲಂಘನೆಯಾಗಿದೆ ಎಂದು ಭಲ್ಲಾ ಹೇಳಿದ್ದಾರೆ.
ಯಾವುದೇ ನಿರ್ಬಂಧಗಳನ್ನು ವಿಧಿಸಬಾರದು ಮತ್ತು ಅನ್ಲಾಕ್ ಮಾರ್ಗಸೂಚಿಗಳನ್ನು ಅನುಸರಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಪತ್ರದಲ್ಲಿ ರಾಜ್ಯಗಳನ್ನು ಕೇಳಿದೆ.