ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ: ಗಾಂಧಿ ಕುಟುಂಬಕ್ಕೆ ನೀಡಿದ್ದ ಎಸ್ಪಿಜಿ ಭದ್ರತೆ ವಾಪಸ್
ನವದೆಹಲಿ, ನವೆಂಬರ್ 8: ಗಾಂಧಿ ಕುಟುಂಬಕ್ಕೆ ನೀಡಲಾಗಿರುವ ವಿಶೇಷ ಭದ್ರತಾ ಸೌಲಭ್ಯವನ್ನು (ಎಸ್ಪಿಜಿ) ಹಿಂದಕ್ಕೆ ಪಡೆಯಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ ಎನ್ನಲಾಗಿದೆ.
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರಿಗೆ ನೀಡಲಾಗಿದ್ದ ಎಸ್ಪಿಜಿ ಭದ್ರತೆಯನ್ನು ಇತ್ತೀಚೆಗಷ್ಟೇ ವಾಪಸ್ ಪಡೆದುಕೊಳ್ಳಲಾಗಿತ್ತು. ಈಗ ಗಾಂಧಿ ಕುಟುಂಬದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾಧ್ರಾ ಅವರಿಗೆ ನೀಡಲಾಗಿದ್ದ ಎಸ್ಪಿಜಿ ಭದ್ರತೆಯನ್ನು ಕೂಡ ಹಿಂದಕ್ಕೆ ಪಡೆಯಲಾಗಿದೆ.
ಪ್ರಧಾನಮಂತ್ರಿ ಮೋದಿ ರಕ್ಷಣಾ ಕೋಟೆ ಎಸ್ ಪಿಜಿ ಬಗ್ಗೆ ನಿಮಗೆಷ್ಟು ಗೊತ್ತು?
Recommended Video
ಗಾಂಧಿ ಕುಟುಂಬದ ಮೂವರಿಗೂ ಎಸ್ಪಿಜಿ ಬದಲಾಗಿ ಕೇಂದ್ರ ಮೀಸಲು ಪೊಲೀಸ್ ಪಡೆಯಿಂದ ತರಬೇತಿ ಹೊಂದಿರುವ ಕಮಾಂಡೋಗಳಿಂದ ಝೆಡ್ ಪ್ಲಸ್ ಭದ್ರತೆ ನೀಡಲಾಗುತ್ತದೆ. ಎಸ್ಪಿಜಿ ಭದ್ರತೆಯನ್ನು ಪ್ರಧಾನಿ ಮತ್ತು ಅವರ ಕುಟುಂಬದ ಗಣ್ಯಾತಿಗಣ್ಯರಿಗೆ ಮಾತ್ರ ನೀಡಲಾಗುತ್ತದೆ. ಈ ಭದ್ರತೆಯ ಅವಶ್ಯಕತೆಯ ಕುರಿತು ಪ್ರತಿವರ್ಷ ಮೌಲ್ಯಮಾಪನ ಮಾಡಲಾಗುತ್ತದೆ. ಈ ವ್ಯಕ್ತಿಗಳಿಗೆ ಬೆದರಿಕೆ ಇದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಗುಪ್ತಚರ ಸಂಸ್ಥೆಗಳು, ಪೊಲೀಸ್ ಇಲಾಖೆ ಸೇರಿದಂತೆ ಎಲ್ಲ ಸಂಸ್ಥೆಗಳಿಂದಲೂ ಮಾಹಿತಿ ಪಡೆದುಕೊಳ್ಳಲಾಗುತ್ತದೆ.
ಗಾಂಧಿ ಕುಟುಂಬಕ್ಕೆ ಬೆದರಿಕೆ ಇಲ್ಲ
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪತ್ನಿ ಸೋನಿಯಾ ಗಾಂಧಿ ಮತ್ತು ಅವರ ಇಬ್ಬರು ಮಕ್ಕಳಿಗೆ ನೀಡಲಾಗಿದ್ದ ಎಸ್ಪಿಜಿ ಭದ್ರತೆಯನ್ನು ಪದ್ಧತಿಯಂತೆ ಪರಾಮರ್ಶೆಗೆ ಒಳಪಡಿಸಲಾಗಿದೆ. ಎಲ್ಲ ಸಂಸ್ಥೆಗಳಿಂದ ಪಡೆದ ಮಾಹಿತಿಗಳ ಅನ್ವಯ ಗಾಂಧಿ ಕುಟುಂಬಕ್ಕೆ ಯಾವುದೇ ನೇರ ಬೆದರಿಕೆ ಇಲ್ಲ ಎಂದು ತಿಳಿದುಬಂದಿದೆ. ಈ ಆಧಾರದಲ್ಲಿ ಅವರಿಗೆ ನೀಡಲಾಗಿದ್ದ ಎಸ್ಪಿಜಿ ಭದ್ರತೆಯನ್ನು ಹಿಂಪಡೆಯಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಅವರಿಗೆ ಭಾರತದೆಲ್ಲಡೆ ಸಿಆರ್ಪಿಎಫ್ನ ಝೆಡ್ ಪ್ಲಸ್ ಭದ್ರತೆ ಸಿಗಲಿದೆ.
ಮನಮೋಹನ್ ಸಿಂಗ್ ಭದ್ರತೆ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರಿಗೆ ಕೂಡ ಎಸ್ಪಿಜಿ ಭದ್ರತೆ ನೀಡಲಾಗಿತ್ತು. ಅವರು ಅಧಿಕಾರದಿಂದ ಇಳಿದ ಐದು ವರ್ಷದವರೆಗೂ ಅವರು ಹಾಗೂ ಅವರ ಕುಟುಂಬದವರಿಗೆ ಎಸ್ಪಿಜಿ ಭದ್ರತೆ ಒದಗಿಸಲಾಗಿತ್ತು. ಈ ಭದ್ರತೆಯನ್ನು ಆಗಸ್ಟ್ನಲ್ಲಿ ವಾಪಸ್ ಪಡೆದುಕೊಳ್ಳಲಾಗಿತ್ತು. ಅವರಿಗೆ ಸಿಆರ್ಪಿಎಫ್ನ ಝೆನ್ ಪ್ಲಸ್ ಭದ್ರತೆ ನೀಡಲಾಗಿದೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ಗೆ ನೀಡಿದ Z+ ಭದ್ರತೆ ವಾಪಸ್?
ಎಸ್ಪಿಜಿ ಭದ್ರತೆ ಪರಾಮರ್ಶೆ
ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್ (ಎಸ್ಪಿಜಿ) ಪ್ರಧಾನಿ ಮತ್ತು ಅವರ ಕುಟುಂಬಕ್ಕೆ ವಿಶೇಷವಾಗಿ ಭದ್ರತೆ ಒದಗಿಸುವ ಸುಸಜ್ಜಿತ ಶಸ್ತ್ರಸಜ್ಜಿತ ಪಡೆ. ಕೆಲವು ಅವಧಿಯವರೆಗೆ ಮಾಜಿ ಪ್ರಧಾನಿಗಳಿಗೂ ಎಸ್ಪಿಜಿ ರಕ್ಷಣೆ ನೀಡಲಾಗುತ್ತದೆ. ಕಾಲಕ್ಕನುಗುಣವಾಗಿ ಈ ಭದ್ರತೆಯನ್ನು ಪರಾಮರ್ಶೆಗೆ ಒಳಪಡಿಸಲಾಗುತ್ತದೆ. ಅವರಿಗೆ ಗಂಭೀರ ಬೆದರಿಕೆ ಇದೆ ಎಂಬ ಮಾಹಿತಿ ಇದ್ದರೆ ಅವರಿಗೆ ನೀಡಲಾಗುವ ಎಸ್ಪಿಜಿ ಭದ್ರತೆಯನ್ನು ವಿಸ್ತರಿಸಲಾಗುತ್ತದೆ. ಬೆದರಿಕೆಗಳು ಇಲ್ಲ ಎಂದಾದಲ್ಲಿ ಭದ್ರತೆಯ ವ್ಯವಸ್ಥೆಯನ್ನು ಬದಲಿಸಲಾಗುತ್ತದೆ.
SPG ಭದ್ರತೆ ಇರುವ ದೇಶದ ನಾಲ್ಕೇ 'ನಾಲ್ಕು' ರಾಜಕಾರಣಿಗಳು
ನಾಲ್ವರಿಗೆ ಮಾತ್ರ ಎಸ್ಪಿಜಿ ಇತ್ತು
ಎಸ್ಪಿಜಿ ಸುಮಾರು 3,000 ಸಿಬ್ಬಂದಿಯನ್ನು ಒಳಗೊಂಡ ಪಡೆ. 1984ರಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರನ್ನು ಅಂಗರಕ್ಷಕರೇ ಹತ್ಯೆ ಮಾಡಿದ ಘಟನೆ ಬಳಿಕ ಪ್ರಧಾನಿಗೆ ಅಧಿಕ ಭದ್ರತೆ ಒದಗಿಸಲು 1985ರಲ್ಲಿ ಎಸ್ಪಿಜಿ ಸ್ಥಾಪಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಮತ್ತು ಗಾಂಧಿ ಕುಟುಂಬದ ಮೂವರಿಗೆ ಎಸ್ಪಿಜಿ ಭದ್ರತೆ ಒದಗಿಸಲಾಗುತ್ತಿತ್ತು. ಅತ್ಯುನ್ನತ ತರಬೇತಿ ಪಡೆದ ಸಿಬ್ಬಂದು ಬಳಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಉಪಕರಣಗಳು ಮತ್ತು ವಾಹನಗಳು ಇರುತ್ತವೆ. ಈ ಭದ್ರತೆ ಹೊಂದಿರುವ ಗಣ್ಯರು ತೆರಳುವ ಪ್ರದೇಶಗಳಿಗೆ ಮೊದಲೇ ಭೇಟಿ ನೀಡಿ ಭದ್ರತೆಯ ತಪಾಸಣೆ ಮಾಡಲಾಗಿರುತ್ತದೆ. ಒಂದು ಸಣ್ಣ ಭದ್ರತಾ ವೈಫಲ್ಯವಾಗದಂತೆ ನೋಡಿಕೊಳ್ಳುವುದು ಎಸ್ಪಿಜಿ ಕರ್ತವ್ಯವಾಗಿದೆ.