ಶ್ರಮಿಕ್ ವಿಶೇಷ ರೈಲುಗಳಲ್ಲಿ ಪ್ರಯಾಣ ವೇಳೆ 97 ಮಂದಿ ಸಾವು: ಕೇಂದ್ರ
ನವದೆಹಲಿ, ಸೆಪ್ಟೆಂಬರ್ 19: ದೇಶದಲ್ಲಿ ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸಂಚರಿಸಲು ಅನುವಾಗಲೆಂದು ಕೇಂದ್ರ ಸರ್ಕಾರ ಆರಂಭಿಸಿದ್ದ ಶ್ರಮಿಕ್ ರೈಲಿನಲ್ಲಿ ಪ್ರಯಾಣಿಸುವ ವೇಳೆ 97 ಮಂದಿ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಮಾಹಿತಿ ನೀಡಿದೆ.
ಸಂಸತ್ ನಲ್ಲಿ ಟಿಎಂಸಿ ಸಂಸದ ಡೇರೆಕ್ ಒಬ್ರಿಯಾನ್ ಈ ಕುರಿತಂತೆ ಪ್ರಶ್ನೆ ಎತ್ತಿದ್ದರು. ಇದಕ್ಕೆ ರೈಲ್ವೆ ಸಚಿವ ಪ್ರಿಯೂಶ್ ಗೋಯಲ್ ಲಿಖಿತ ಉತ್ತರ ನೀಡಿದ್ದಾರೆ.
ಅಸ್ವಾಭಾವಿಕ ಸಾವು ಪ್ರಕರಣಗಳಲ್ಲಿ ರಾಜ್ಯ ಪೊಲೀಸರು ಸಿ.ಆರ್.ಪಿ.ಸಿಯ ಸೆಕ್ಷನ್ 174ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸುತ್ತಾರೆ. ಮುಂದಿನ ಕಾನೂನು ಪ್ರಕ್ರಿಯೆಯನ್ನು ಅನುಸರಿಸುತ್ತಾರೆ ಎಂದು ಸಚಿವರು ಹೇಳಿದರು.
9-9-2020ರವರೆಗೂ ಸುಮಾರು 97 ಮಂದಿ ಶ್ರಮಿಕ್ ರೈಲಿನಲ್ಲಿ ಪ್ರಮಾಣಿಸಿದ್ದರು ಮೃತಪಟ್ಟಿದ್ದಾರೆ ರಾಜ್ಯ ಪೊಲೀಸರು ಮಾಹಿತಿ ನೀಡಿದ್ದಾರೆ ಎಂದರು.
ಈವರೆಗೆ ಒಟ್ಟು 51 ಮರಣೋತ್ತರ ವರದಿಗಳನ್ನು ಆಯಾ ರಾಜ್ಯ ಪೊಲೀಸ್ ಅಧಿಕಾರಿಗಳಿಂದ ಪಡೆಯಲಾಗಿದ್ದು, ಅದರಲ್ಲಿ ಹೆಚ್ಚಾಗಿ ಸಾವಿನ ಕಾರಣಗಳನ್ನು ಹೃದಯ ಸ್ತಂಭನ, ಹೃದಯ ಕಾಯಿಲೆ, ಮೆದುಳಿನ ರಕ್ತಸ್ರಾವ, ಮೊದಲೇ ಅಸ್ತಿತ್ವದಲ್ಲಿರುವ ದೀರ್ಘಕಾಲದ ಕಾಯಿಲೆ, ದೀರ್ಘಕಾಲದ ಶ್ವಾಸಕೋಶದ ಕಾಯಿಲೆ, ದೀರ್ಘಕಾಲದ ಯಕೃತ್ತಿನ ಕಾಯಿಲೆಯಿಂದ ಎಂದು ಹೇಳಿದ್ದಾರೆ.
ಸಾವಿನ 97 ಪ್ರಕರಣಗಳಲ್ಲಿ 87 ಪ್ರಕರಣಗಳಲ್ಲಿ ರಾಜ್ಯ ಪೊಲೀಸರು ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.