ನಾಗಾಲ್ಯಾಂಡ್ 14 ನಾಗರಿಕರ ಹತ್ಯೆ ಬಗ್ಗೆ ಅಮಿತ್ ಶಾ ಹೇಳಿಕೆಗೆ ಸಂಸತ್ ಸದಸ್ಯರ ಧಿಕ್ಕಾರ
ನವದೆಹಲಿ, ಡಿಸೆಂಬರ್ 6: ಸಂಸತ್ ಅಧಿವೇಶನದ ಉಭಯ ಸದನಗಳಲ್ಲಿ ನಾಗಾಲ್ಯಾಂಡ್ನ ನಾಗರಿಕರ ಹತ್ಯೆ ವಿಷಯ ಸದ್ದು-ಗದ್ದಲ ಸೃಷ್ಟಿಸಿತು. ಸೋಮವಾರ ಲೋಕಸಭೆ ಉದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಘಟನೆ ಕುರಿತು ವಿಷಾದ ವ್ಯಕ್ತಪಡಿಸಿದರು.
ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಅಮಿತ್ ಶಾ ತಮ್ಮ ಹೇಳಿಕೆಯನ್ನು ನೀಡುತ್ತಿದ್ದರೆ, ಸದಸ್ಯರು ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಿದ್ದರು. ನಾಗಾಲ್ಯಾಂಡ್ ಗಡಿ ಪ್ರದೇಶದಲ್ಲಿ AFSPA ಅನ್ನು ರದ್ದುಗೊಳಿಸುವಂತೆ ಸದಸ್ಯರು ಆಗ್ರಹಿಸಿದರು.
ನಾಗಾಲ್ಯಾಂಡ್ ಗುಂಡಿನ ದಾಳಿ; ಸಂಸತ್ನಲ್ಲಿ ಅಮಿತ್ ಶಾ ಹೇಳಿಕೆ
ಮಯನ್ಮಾರ್ ಗಡಿಗೆ ಹೊಂದಿಕೊಂಡಿರುವ ನಾಗಾಲ್ಯಾಂಡ್ ಮೋನ್ ಜಿಲ್ಲೆಯ ಓಟಿಂಗ್ ಗ್ರಾಮದಲ್ಲಿ ಸೇನೆ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಅಚಾತುರ್ಯ ನಡೆಯಿತು. ನಾಗರಿಕರನ್ನೇ ಉಗ್ರರು ಎಂದು ತಪ್ಪಾಗಿ ಭಾವಿಸಿದ ಯೋಧರು ಗುಂಡಿನ ದಾಳಿ ನಡೆಸಿದ್ದರು. ಈ ಘಟನೆಯಲ್ಲಿ 14 ನಾಗರಿಕರು ಮೃತಪಟ್ಟಿದ್ದರು. ನಾಗಾಲ್ಯಾಂಡ್ ಘಟನೆಗೆ ಸಂಬಂಧಿಸಿದಂತೆ ಅಮಿತ್ ಶಾ ನೀಡಿರುವ ಹೇಳಿಕೆ ಹಾಗೂ ಘಟನೆ ಕುರಿತು ಪ್ರಮುಖ ಅಂಶಗಳನ್ನು ಮುಂದೆ ಓದಿ.
ನಾಗಾಲ್ಯಾಂಡ್ ನಾಗರಿಕರ ಹತ್ಯೆ ಮತ್ತು ಅಮಿತ್ ಶಾ ಹೇಳಿಕೆ:
* "ನಾಗಾಲ್ಯಾಂಡ್ನಲ್ಲಿ ನಾಗರಿಕರ ಹತ್ಯೆಗೆ ಕೇಂದ್ರ ಸರ್ಕಾರ ವಿಷಾದ ವ್ಯಕ್ತಪಡಿಸುತ್ತದೆ. ಈ ಸಂಬಂಧ ವಿಶೇಷ ತನಿಖಾ ತಂಡವನ್ನು ರಚಿಸಿದ್ದು, ಮುಂದಿನ ಒಂದು ತಿಂಗಳಿನಲ್ಲಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಸ್ಥಳದಲ್ಲಿ ಆತಂಕದ ವಾತಾವರಣವಿದೆ, ಆದರೆ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಭವಿಷ್ಯದಲ್ಲಿ ಇಂಥ ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಲು ಎಲ್ಲಾ ಸೇನಾ ಪಡೆಗಳು ಭರವಸೆ ನೀಡಿವೆ", ಎಂದು ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
* ಒಂದು ಗಂಟೆಯ ನಂತರ ಸಚಿವ ಅಮಿತ್ ಶಾ ರಾಜ್ಯಸಭೆಯಲ್ಲೂ ಇದೇ ರೀತಿಯ ಹೇಳಿಕೆಯನ್ನು ಓದಿದರು, ವಿರೋಧ ಪಕ್ಷದ ಸಂಸದರು "ನಹೀ ಚಲೇಗಿ, ನಹೀ ಚಲೇಗಿ" (ಇದು ಆಗುವುದಿಲ್ಲ, ಇದು ಆಗುವುದಿಲ್ಲ) ಎಂದು ಕಿರುಚಿದರು. "ಕೇಂದ್ರವು ಪರಿಸ್ಥಿತಿಯನ್ನು ಪರಿಶೀಲಿಸಿದೆ. ಮುಗ್ಧ ಗ್ರಾಮಸ್ಥರ ಹತ್ಯೆ ರೀತಿ ಘಟನೆಗಳು ಪುನರಾವರ್ತನೆ ಆಗಬಾರದು," ಎಂದು ಶಾ ಹೇಳಿದರು.
* ಕೇಂದ್ರ ಸಚಿವ ಅಮಿತ್ ಶಾ ಮಾತನಾಡಿದ ವೇಳೆ ಲೋಕಸಭೆಯ ಸದಸ್ಯರ ರೀತಿಯಲ್ಲೇ ರಾಜ್ಯಸಭೆ ವಿರೋಧ ಪಕ್ಷದ ಸಂಸದರು ಕೂಡಾ AFSPA ಮತ್ತು ನಾಗಾಲ್ಯಾಂಡ್ ಹಿಂಸಾಚಾರದ ಬಗ್ಗೆ ಚರ್ಚೆಗೆ ಒತ್ತಾಯಿಸಿದರು. ರಾಜ್ಯಸಭೆಯ 12 ಸಂಸದರನ್ನು ಅಮಾನತುಗೊಳಿಸಿರುವುದನ್ನು ಖಂಡಿಸಿ ಸದಸ್ಯರು ಪ್ರತಿಭಟನೆ ನಡೆಸಿದರು.
* ಲೋಕಸಭೆಯಲ್ಲಿ, ಅಮಿತ್ ಶಾ ಹೇಳಿಕೆ ನೀಡಿದ ನಂತರ, ಕುಪಿತಗೊಂಡ ವಿರೋಧ ಪಕ್ಷದ ಸಂಸದರು ಗೃಹ ಸಚಿವರ ಭಾಷಣದ ಅಸಮರ್ಪಕ ಸ್ವರೂಪ ಖಂಡಿಸಿ ಪ್ರತಿಭಟನೆ ನಡೆಸಿದರು. ನಾಗಾಲ್ಯಾಂಡ್ ಹಿಂಸಾಚಾರದ ಬಗ್ಗೆ ಚರ್ಚೆ ಮತ್ತು ವಿವಾದಾತ್ಮಕ AFSPA ಅನ್ನು ರದ್ದುಗೊಳಿಸುವಂತೆ ಒತ್ತಾಯಿಸಿದರು.
* ವಿಶೇಷವಾಗಿ ಎಎಫ್ಎಸ್ಪಿಎ ವಿರೋಧಿಸಿ ಕಾಂಗ್ರೆಸ್, ಡಿಎಂಕೆ, ಸಮಾಜವಾದಿ ಪಕ್ಷ, ಬಿಎಸ್ಪಿ ಮತ್ತು ಎನ್ಸಿಪಿಯ ಲೋಕಸಭಾ ಸಂಸದರು ಸಭಾತ್ಯಾಗ ಮಾಡಿದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಜರಿರಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿತ್ತು, ಆದರೆ ಪ್ರಧಾನಿ ಮೋದಿ ಈ ಅಧಿವೇಶನದಿಂದ ದೂರ ಉಳಿದಿದ್ದರು.
* ಸೋಮವಾರ ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಸಂಪುಟದ ಹಿರಿಯ ಸದಸ್ಯರನ್ನು ಭೇಟಿಯಾಗಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಸೇರಿದಂತೆ ಹಲವರೊಂದಿಗೆ ಪರಿಸ್ಥಿತಿ ಬಗ್ಗೆ ಚರ್ಚಿಸಿದರು. ನಾಗಾಲ್ಯಾಂಡ್ ಮತ್ತು ಮೇಘಾಲಯ ಮುಖ್ಯಮಂತ್ರಿಗಳು ಎಎಫ್ಎಸ್ಪಿಎ ರದ್ದುಗೊಳಿಸುವುದು ಸೇರಿದಂತೆ ಹಲವು ಬೇಡಿಕೆಗಳ ಮಧ್ಯೆ ನಾಗರಿಕರ ಸಾವಿನ ಘಟನೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
* ನಾಗಾಲ್ಯಾಂಡ್ ಮುಖ್ಯಮಂತ್ರಿ ನೆಫಿಯು ರಿಯೊ AFSPA ಅಧಿಕಾರ ವ್ಯಾಪ್ತಿ ವಿಸ್ತರಣೆಗೆ ವಿರೋಧ ವ್ಯಕ್ತಪಡಿಸಿದ್ದರು. "ಪ್ರತಿ ವರ್ಷ ಕೇಂದ್ರ ಸರ್ಕಾರವು ನಾಗಾಲ್ಯಾಂಡ್ನಲ್ಲಿ ಎಎಫ್ಎಸ್ಪಿಎ ಅನ್ನು ವಿಸ್ತರಿಸುತ್ತದೆ, ಅದು 'ಗೊಂದಲಕಾರಿ ಪ್ರದೇಶ' ಎಂದು ಹೇಳುತ್ತದೆ, ಆದರೆ ಎಲ್ಲಾ ಸಶಸ್ತ್ರ ಗುಂಪುಗಳು ಕದನ ವಿರಾಮ ನಡೆಸುತ್ತಿದ್ದು, ಇದನ್ನು ಶಾಂತಿ ಮಾತುಕತೆ ಭಾಗ ಎಂದು ಹೇಳಲಾಗುತ್ತಿದೆ. ಹಾಗಿದ್ದಲ್ಲಿ ಅದನ್ನು ಏಕೆ ವಿಸ್ತರಿಸಬೇಕು?," ಎಂದು ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
* ಅಸ್ಸಾಂನಲ್ಲೂ ಈ ಕಾನೂನು ಜಾರಿಯಲ್ಲಿದ್ದು, ರಾಜಕೀಯ ಪಕ್ಷಗಳಿಂದ AFSPAಗೆ ವಿರೋಧ ವ್ಯಕ್ತವಾಗಿತ್ತು. ಹಿರಿಯ ಸಿಪಿಐ(ಎಂ) ನಾಯಕ ಹೇಮೆನ್ ದಾಸ್ ಇದನ್ನು "ರಾಜ್ಯ ಭಯೋತ್ಪಾದನೆ" ಎಂದು ಕರೆದಿದ್ದಾರೆ. "ಭಾರತೀಯ ಸರ್ಕಾರವು AFSPA ಅನ್ನು ರದ್ದುಗೊಳಿಸಬೇಕು ಹಾಗೂ ಈಶಾನ್ಯ ರಾಜ್ಯಗಳ ಜನರು ದೇಶದ ಗೌರವಾನ್ವಿತ ನಾಗರಿಕರಾಗಿ ಬದುಕಲು ಅವಕಾಶ ನೀಡಬೇಕು," ಎಂದು ಅಸ್ಸಾಂ ರಾಷ್ಟ್ರೀಯ ಪರಿಷತ್ ಪ್ರಧಾನ ಕಾರ್ಯದರ್ಶಿ ಜಗದೀಶ್ ಭುಯಾನ್ ಹೇಳಿದರು.
* ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆ, ಅಥವಾ AFSPA, ಹಲವಾರು ದಶಕಗಳಿಂದ ನಾಗಾಲ್ಯಾಂಡ್ ಮತ್ತು ಈಶಾನ್ಯದ ಭಾಗಗಳಲ್ಲಿ ಜಾರಿಯಲ್ಲಿದೆ. ಈ ಕಾಯ್ದೆಗಳು ಜಾರಿಯಲ್ಲಿರುವ ಪ್ರದೇಶಗಳಲ್ಲಿ ಭದ್ರತಾ ಪಡೆ ಸಿಬ್ಬಂದಿಯು ಯಾವುದೇ ಸ್ಥಳದಲ್ಲಿ ಕಾರ್ಯಾಚರಣೆಗಳನ್ನು ನಡೆಸಬಹುದು ಹಾಗೂ ಪೂರ್ವ ವಾರಂಟ್ಗಳಿಲ್ಲದೆ ಬಂಧಿಸಬಹುದು.
* ನಾಗಾಲ್ಯಾಂಡ್ನ ಮೋನ್ ಜಿಲ್ಲೆಯಲ್ಲಿ ವಾರಾಂತ್ಯದಲ್ಲಿ ಸೇನೆಯ ನಡೆಸಿದ ಕಾರ್ಯಾಚರಣೆಯಲ್ಲಿ 14 ನಾಗರಿಕರು ಮೃತಪಟ್ಟಿದ್ದು, ಒಬ್ಬ ಯೋಧ ಹುತಾತ್ಮರಾಗಿದ್ದರು.
Recommended Video