ರೈತರ ಜತೆ ಮಾತುಕತೆಗೆ ಕೇಂದ್ರ ಸಿದ್ಧವಿದೆ, ಆದರೆ ಒಂದೇ ಒಂದು ಷರತ್ತು: ಅಮಿತ್ ಶಾ
ನವದೆಹಲಿ, ನವೆಂಬರ್ 28: ಕೇಂದ್ರ ಸರ್ಕಾರವು ರೈತರ ಜತೆ ಮಾತುಕತೆಗೆ ಸಿದ್ಧವಿದೆ, ಹೆದ್ದಾರಿಯನ್ನು ತಡೆದು ಪ್ರತಿಭಟನೆ ಮಾಡಬೇಡಿ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ನೀವು ಈಗಲೇ ಪ್ರತಿಭಟನೆಯನ್ನು ನಿಲ್ಲಿಸಿ, ನಿಮ್ಮ ಬೇಡಿಕೆಗಳನ್ನು ಕೇಳಲು ಸರ್ಕಾರ ಸಿದ್ಧವಿದೆ ಎಂದರು. ಕೃಷಿ ಸಚಿವ ಡಿಸೆಂಬರ್ 3 ರಂದು ಸಭೆ ಕರೆದಿದ್ದಾರೆ. ಕೇಂದ್ರ ಸರ್ಕಾರವು ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಸಿದ್ಧವಿದೆ ಎಂದು ಹೇಳಿದರು.
ರೈತ ಸಂಘಟನೆಗಳು ಡಿಸೆಂಬರ್ 3ಕ್ಕೂ ಮುನ್ನವೇ ಮಾತುಕತೆ ನಡೆಸಬೇಕು ಎಂದು ಹೇಳುತ್ತಿದ್ದಾರೆ. ನೀವು ಪ್ರತಿಭಟನೆಯನ್ನು ಒಂದು ಸ್ಥಳಕ್ಕೆ ಸ್ಥಳಾಂತರಿಸಿದರೆ ಕೇಂದ್ರ ಸರ್ಕಾರ ಖಂಡಿತವಾಗಿಯೂ ನಿಮ್ಮ ಬೇಡಿಕೆಗಳನ್ನು ಆಲಿಸುತ್ತದೆ ಎಂದು ಹೇಳಿದರು.
ದೆಹಲಿಯ ಸಂಘು, ಟಿಕ್ರಿಯಲ್ಲಿ ಸಾವಿರಾರು ರೈತರು ಜಮಾವಣೆಯಾಗಿದ್ದು, ಉತ್ತರ ದೆಹಲಿಯತ್ತ ತೆರಳಲು ನಿರಾಕರಿಸಿದ್ದಾರೆ.
ರೈತರ ಪ್ರತಿಭಟನೆ, ಅಶ್ರುವಾಯು ಪ್ರಯೋಗ, ದೆಹಲಿ ಗಡಿಯಲ್ಲಿ ಸ್ಥಿತಿ ಉದ್ವಿಗ್ನ
ದೆಹಲಿ ಚಲೋ ಪ್ರತಿಭಟನೆ ನಡೆಸುತ್ತಿರುವ ಸಾವಿರಾರು ಮಂದಿ ರೈತರು ನೆರೆದಿದ್ದಾರೆ.ಪೊಲೀಸರು ಉತ್ತರ ದೆಹಲಿಯ ಸ್ಥಳವೊಂದರಲ್ಲಿ ಪ್ರತಿಭಟನೆ ನಡೆಸಲು ಅವಕಾಶ ನೀಡಿದರೂ ಕೂಡ ಇಂದು ಬೆಳಗ್ಗೆ ಸೇರಿರುವ ಟಿಕ್ರಿ ಗಡಿಭಾಗದ ಮೈದಾನದಲ್ಲಿಯೇ ಮುಂದುವರಿಸಿದ್ದಾರೆ.ಅಲ್ಲಿಂದ ಪ್ರತಿಭಟನಾಕಾರರು ಮುಂದುವರಿಯುತ್ತಾರೆಯೇ, ಇಲ್ಲವೇ ಎಂಬುದು ಇನ್ನು ಕೆಲ ಹೊತ್ತುಗಳಲ್ಲಿ ನಿರ್ಧಾರವಾಗಲಿದೆ.
ಇಂದು ಬೆಳಗ್ಗೆ ಸದ್ಯ ರೈತರು ಟಿಕ್ರಿ ಭಾಗದಲ್ಲಿ ಪ್ರತಿಭಟನೆ ನಡೆಸಲು ಸೇರಿದ್ದು ಅಲ್ಲಿನ ಬುರಾರಿ ಪ್ರದೇಶದ ನಿರಂಕಾರಿ ಸಮಾಗಮ ಮೈದಾನದಲ್ಲಿ ಪ್ರದರ್ಶನ ನಡೆಸಲು ರೈತರಿಗೆ ಅನುಮತಿ ನೀಡಲಾಗಿದೆ. ಅಲ್ಲಿ ತೀವ್ರ ಭದ್ರತೆ ಕಲ್ಪಿಸಲಾಗಿದೆ.