ಗಲ್ಲುಶಿಕ್ಷೆ ಜಾರಿಯಲ್ಲಿ ವಿಳಂಬ: ಕೇಂದ್ರ ಸರ್ಕಾರದಿಂದ ಮಹತ್ವದ ಹೆಜ್ಜೆ
ನವದೆಹಲಿ, ಜನವರಿ 23: ಮರಣದಂಡನೆ ಶಿಕ್ಷೆಯ ಪ್ರಕರಣಗಳು 'ಸಂತ್ರಸ್ತರ ಕೇಂದ್ರಿತ'ವಾಗಬೇಕು ಮತ್ತು ಅಪರಾಧಿಗಳು ತಮ್ಮ ಕೊನೆಯ ಕಾನೂನು ಆಯ್ಕೆಗೆ ಸಮಯ ಮಿತಿ ಹೇರಬೇಕು ಎಂದು ಸುಪ್ರೀಂಕೋರ್ಟ್ಗೆ ಕೇಂದ್ರ ಸರ್ಕಾರ ಮನವಿ ಮಾಡಿದೆ.
ಈಗಿರುವ ನಿಯಮಾವಳಿಗಳು ಅಪರಾಧಿಗಳಿಗೆ ಅನುಕೂಲಕರವಾಗಿವೆ. ಈ ನಿಯಮಗಳಿಂದ ಅವರು ಕಾನೂನಿನ ಜತೆ ಆಟವಾಡಲು ಮತ್ತು ಗಲ್ಲುಶಿಕ್ಷೆ ಜಾರಿಯನ್ನು ವಿಳಂಬಗೊಳಿಸಲು ಅವಕಾಶ ಸಿಗುತ್ತಿದೆ ಎಂದು ಕೇಂದ್ರ ಸರ್ಕಾರ ಬುಧವಾರ ಸಲ್ಲಿಸಿರುವ ಅರ್ಜಿಯಲ್ಲಿ ಹೇಳಿದೆ.
ಅತ್ಯಾಚಾರಿಗಳನ್ನು ಸೋನಿಯಾ ರೀತಿ ಕ್ಷಮಿಸಿ: ನಿರ್ಭಯಾ ತಾಯಿಗೆ ವಕೀಲೆ ಸಲಹೆ
ದೆಹಲಿಯಲ್ಲಿ 2012ರಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸಿ ವರ್ಷ ಕಳೆದರೂ ಮರಣದಂಡನೆ ಜಾರಿಯಾಗದಿರವುದರ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಅಪರಾಧಿಗಳು ಈಗ ಒಬ್ಬೊಬ್ಬರಾಗಿ ಕಾನೂನಿನ ಕೊನೆಯ ಆಯ್ಕೆಗಳನ್ನು ಬಳಸಿಕೊಳ್ಳುತ್ತಿದ್ದಾರೆ ಮತ್ತು ಕ್ಷಮಾದಾನದ ಅರ್ಜಿ ಸಲ್ಲಿಸುವ ಮೂಲಕ ಗಲ್ಲುಜಾರಿಯನ್ನು ವಿಳಂಬವಾಗುವಂತೆ ಮಾಡುತ್ತಿದ್ದಾರೆ. ಕಾನೂನಿನಲ್ಲಿರುವ ಲೋಪಗಳು ಅಪರಾಧಿಗಳಿಗೆ ಅನುಕೂಲ ಮಾಡಿಕೊಡುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಕಾಲಮಿತಿ ನಿಗದಿ ಮಾಡಿ
ಗಲ್ಲುಶಿಕ್ಷೆಗೆ ಗುರಿಯಾಗಿರುವ ಅಪರಾಧಿಗಳಿಗೆ ನೀಡಲಾಗಿರುವ ಹಕ್ಕಿನ ಕುರಿತಾದ ಸುಪ್ರೀಂಕೋರ್ಟ್ನ ಹಿಂದಿನ ತೀರ್ಪಿನಲ್ಲಿ ಮಾರ್ಪಾಡು ಮಾಡಬೇಕು ಮತ್ತು ಸುಪ್ರೀಂಕೋರ್ಟ್ ಹಿಂದಿನ ಎಲ್ಲ ಅರ್ಜಿಗಳನ್ನು ತಿರಸ್ಕರಿಸಿದ ಬಳಿಕವೂ ಕೊನೆಯದಾಗಿ ಸಲ್ಲಿಸಲು ಇರುವ ಕ್ಯುರೇಟಿವ್ ಅರ್ಜಿಗೆ ಕಾಲಮಿತಿಯನ್ನು ನಿಗದಿಗೊಳಿಸಬೇಕು ಎಂದು ಕೇಂದ್ರ ಸರ್ಕಾರ ಅರ್ಜಿಯಲ್ಲಿ ಕೋರಿದೆ.
ಅರ್ಜಿ ಸಲ್ಲಿಸಲು ಒಂದು ವಾರ ಮಾತ್ರ ಸಾಕು
ಡೆತ್ ವಾರಂಟ್ ಹೊರಡಿಸಿದ ಏಳು ದಿನಗಳ ಒಳಗಾಗಿ ಮಾತ್ರವೇ ಗಲ್ಲುಶಿಕ್ಷೆಗೆ ಒಳಗಾದ ಅಪರಾಧಿ ಕ್ಷಮಾದಾನದ ಅರ್ಜಿ ಸಲ್ಲಿಸುವಂತೆ ನಿಯಮ ಬದಲಾವಣೆಗೆ ನಿರ್ದೇಶಿಸುವಂತೆ ಕೋರಲಾಗಿದೆ. ಹಾಗೆಯೇ ಕ್ಷಮಾದಾನದ ಅರ್ಜಿ ತಿರಸ್ಕೃತವಾದ ಏಳು ದಿನಗಳ ಒಳಗೆ ರಾಜ್ಯ ಸರ್ಕಾರ ಮತ್ತು ಜೈಲು ಅಧಿಕಾರಿಗಳು ಡೆತ್ ವಾರಂಟ್ಗಳನ್ನು ಹೊರಡಿಸಬೇಕು ಎಂದು ಹೇಳಲಾಗಿದೆ.
ನಿರ್ಭಯಾ ಪ್ರಕರಣ: ಅಪರಾಧಿಗಳ ಗಲ್ಲು ಶಿಕ್ಷೆ ಜಾರಿ ವಿಳಂಬ ಏಕೆ?
ಏಳು ದಿನಗಳಲ್ಲಿ ಜಾರಿಯಾಗಲಿ
ಕ್ಷಮಾದಾನ ಅರ್ಜಿ ತಿರಸ್ಕಾರವಾದ ಏಳು ದಿನಗಳಲ್ಲಿ ಅವರ ಗಲ್ಲುಶಿಕ್ಷೆ ಜಾರಿಯಾಗಬೇಕು ಎಂದು ಕೇಂದ್ರ ಒತ್ತಾಯಿಸಿದೆ. ಪ್ರಸ್ತುತ ಕ್ಷಮಾದಾನದ ಅರ್ಜಿ ತಿರಸ್ಕಾರ ಮತ್ತು ಅಪರಾಧಿಯ ಮರಣದಂಡನೆಯ ಜಾರಿಗೆ ಕನಿಷ್ಠ 14 ದಿನಗಳ ಕಾಲಾವಕಾಶ ನೀಡಲಾಗುತ್ತಿದೆ. ನಿರ್ಭಯಾ ಪ್ರಕರಣದಲ್ಲಿ ಅಪರಾಧಿಗಳಿಗೆ ಗಲ್ಲುಶಿಕ್ಷೆ ಜಾರಿ ಮಾಡಲು ವಿಳಂಬ ಮಾಡಲಾಗಿದೆ. ಈಗ ಅಪರಾಧಿಗಳು ಕಾನೂನಿನ ನಿಯಮ ಬಳಸಿಕೊಂಡು ಪ್ರಕ್ರಿಯೆಯನ್ನು ಮತ್ತಷ್ಟು ತಡ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಗಲ್ಲುಶಿಕ್ಷೆ ವಿಳಂಬವಾಗಲು ಕಾನೂನು ಕಾರಣ
ಒಮ್ಮೆ ಪರಾಮರ್ಶನ ಅರ್ಜಿ ವಜಾಗೊಂಡ ನಂತರ ಕ್ಯುರೇಟಿವ್ ಅರ್ಜಿ ಸಲ್ಲಿಸಲು ಸಮಯದ ಮಿತಿ ಹೇರಬೇಕು. ಅಪರಾಧಿಗಳ ಪೈಕಿ ಒಬ್ಬನ ಕ್ಷಮಾದಾನದ ಅರ್ಜಿ ತಿರಸ್ಕಾರವಾದರೆ ಆತನ ಹಣೆಬರಹ ಏನೆಂದು ಖಚಿತವಾಗುತ್ತದೆ. ಆದರೆ ಸಹ ಅಪರಾಧಿಗಳು ನಂತರ ಸಲ್ಲಿಸುವ ಕ್ಷಮಾದಾನದ ಅರ್ಜಿಗಳು ಇತ್ಯರ್ಥವಾಗುವವರೆಗೂ ಆತ ಕಾಯಬೇಕಾಗುತ್ತದೆ. ಹೀಗೆ ಸಹ ಅಪರಾಧಿಗಳು ಪರಾಮರ್ಶೆಯ ಅರ್ಜಿ, ಕ್ಯುರೇಟಿವ್ ಅಥವಾ ಕ್ಷಮಾದಾನದ ಅರ್ಜಿಗಳನ್ನು ಒಬ್ಬರ ನಂತರ ಒಬ್ಬರು ಸಲ್ಲಿಸಿ, ಅದು ಇತ್ಯರ್ಥ ಆಗುವವರೆಗೂ ಮೊದಲು ಅರ್ಜಿ ತಿರಸ್ಕೃತಗೊಂಡ ಅಪರಾಧಿಗೆ ಗಲ್ಲು ಕಾಯಂ ಆದರೂ ಅದು ಜಾರಿಯಾಗುವಂತಿಲ್ಲ. ಇದರಿಂದಾಗಿ ಶಿಕ್ಷೆ ಜಾರಿ ತಡವಾಗುತ್ತದೆ ಎಂದು ಕೇಂದ್ರ ವಿವರಿಸಿದೆ.
ನಿರ್ಭಯಾ ಅತ್ಯಾಚಾರ: ಕ್ಷಮಾದಾನದ ಅರ್ಜಿ ತಿರಸ್ಕರಿಸಿದ ರಾಷ್ಟ್ರಪತಿ
ಅಪರಾಧಿ ಕೇಂದ್ರಿತವಾಗಿದೆ
2014ರಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪಿನಲ್ಲಿ ಬದಲಾವಣೆಗಳನ್ನು ಮಾಡುವಂತೆ ಮತ್ತು ಸ್ಪಷ್ಟೀಕರಣಗಳನ್ನು ನೀಡುವಂತೆ ಕೇಂದ್ರ ಮನವಿ ಮಾಡಿದೆ. ಗಲ್ಲುಶಿಕ್ಷೆಗೆ ಒಳಗಾದ ಅಪರಾಧಿಗಳಿಗೂ ಕೆಲವು ನಿರ್ದಿಷ್ಟ ಹಕ್ಕುಗಳು ಇರುತ್ತವೆ ಎಂದು ಸುಪ್ರೀಂಕೋರ್ಟ್ ಹೇಳಿತ್ತು. ಈ ತೀರ್ಪು ಅಪರಾಧಿ ಕೇಂದ್ರಿತವಾಗಿದೆ. ಹೀಗಾಗಿ ಸಂತ್ರಸ್ತರು, ಅವರ ಕುಟುಂಬ ಮತ್ತು ಸಮಾಜದ ದೃಷ್ಟಿಯಿಂದ ಕಾನೂನು ಬದಲಾಗಬೇಕಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.