ಕೇಂದ್ರ ಸರ್ಕಾರ ಲಸಿಕೆಯ ಕೃತಕ ಅಭಾವ ಉಂಟು ಮಾಡುತ್ತಿದೆ: ಆಪ್ ಗಂಭೀರ ಆರೋಪ
ನವದೆಹಲಿ, ಮೇ, 28: ದೇಶದಲ್ಲಿ ಲಸಿಕೆ ಕೊರತೆ ಉಂಟಾಗಲು ಕೇಂದ್ರ ಸರ್ಕಾರ ಕಾರಣ. ಕೇಂದ್ರ ಸರ್ಕಾರ ಲಸಿಕೆಯ ಕೃತಕ ಅಭಾವ ಸೃಷ್ಟಿಸುತ್ತಿದೆ. ಈ ಮೂಲಕ ಭಾರತ್ ಬಯೋಟೆಕ್ ಹಾಗೂ ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಕಂಪನಿಗಳಿಗೆ ಲಾಭ ಮಾಡಿಕೊಡುತ್ತಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ. ಇದಕ್ಕೆ ದೆಹಲಿ ಬಿಜೆಪಿ ಪ್ರತಿಕ್ರಿಯಿಸಿದ್ದು ಆಧಾರ ರಹಿತ ಆರೋಪ ಎಂದು ತಳ್ಳಿ ಹಾಕಿದೆ.
ಎಎಪಿ ಪಕ್ಷದ ವಕ್ತಾರೆ ಅತಿಶಿ ಮಾಧ್ಯಮಗೋಷ್ಟಿ ನಡೆಸಿ ಈ ಆರೋಪಗಳನ್ನು ಮಾಡಿದ್ದಾರೆ. ಸರ್ಕಾರ ತನ್ನ ಲಸಿಕಾ ಕಾರ್ಯಕ್ರಮಗಳನ್ನು ಶಾಲೆಗಳಲ್ಲಿ ನಿಲ್ಲಿಸಿದೆ. ಆದರೆ ಇಂತಾ ಸಂದರ್ಭದಲ್ಲಿ ದೇಶದ ಎಲ್ಲಾ ಭಾಗಗಳಲ್ಲಿಯೂ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕಾ ಅಭಿಯಾನ ಹೆಚ್ಚಿನ ದರದೊಂದಿಗೆ ಮುಂದುವರಿದಿದೆ ಎಂದು ಹೇಳಿದ್ದಾರೆ. "ಸರ್ಕಾರಿ ಕೇಂದ್ರಗಳಲ್ಲಿ ಲಸಿಕೆಗಳನ್ನು ಉಚಿ ತವಾಗಿ ನೀಡಲಾಗುತ್ತಿದೆ. ಆದರೆ ಅಲ್ಲಿ ಲಸಿಕೆಗಳು ಖಾಲಿಯಾಗಿದೆ. ಆದರೆ ಇದೇ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಿನ ದರಕ್ಕೆ ಲಸಿಕೆಯನ್ನು ಈಗಲೂ ನೀಡಲಾಗುತ್ತಿದೆ. ಇದೊಂದು ದೊಡ್ಡ ಹಗರಣ" ಎಂದು ಅತಿಶಿ ಆರೋಪಿಸಿದ್ದಾರೆ.
ಕೇಂದ್ರಕ್ಕೆ ಕೋವಿಡ್ 19 ಅರ್ಥವೇ ಆಗಿಲ್ಲ, ಈ ಪರಿಸ್ಥಿತಿಗೆ ಸರ್ಕಾರವೇ ಹೊಣೆ: ರಾಹುಲ್ ಗಾಂಧಿ
ಭಾರತದಲ್ಲಿ ಸದ್ಯ ಪ್ರಮುಖವಾಗಿ ಎರಡು ಲಸಿಕೆಗಳನ್ನು ಅಭಿಯಾನದಲ್ಲಿ ಬಳಸಲಾಗುತ್ತಿದೆ. ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸುತ್ತಿರುವ ಕೊವಿಶೀಲ್ಡ್ ಹಾಗೂ ಭಾರತ್ ಬಯೋಟೆಕ್ ಅಭಿವೃದ್ಧಿ ಪಡಿಸಿರುವ ಕೊವಾಕ್ಸಿನ್ ಈ ಲಸಿಕಾ ಕಾರ್ಯಕ್ರಮದ ಭಾಗವಾಗಿದೆ. ಇತ್ತೀಚೆಗೆ ರಷ್ಯಾ ಮೂಲದ ಸ್ಪುಟ್ನಿಕ್ ವಿ ಲಸಿಕೆಗೂ ಅನುಮತಿ ನೀಡಲಾಗಿದ್ದು ಸಣ್ಣ ಪ್ರಮಾಣದಲ್ಲಿ ಉತ್ಪಾದನೆ ನಡೆಯುತ್ತಿದೆ.
ಈ ಸಂದರ್ಭದಲ್ಲಿ ಹೆಚ್ಚಿನ ಲಸಿಕೆಗಳಿಗೆ ತುರ್ತು ಅನುಮೋದನೆಯನ್ನು ನೀಡದ ಕೇಂದ್ರ ಸರ್ಕಾರದ ನೀತಿಗೂ ಅಶಿತಿ ಪ್ರಶ್ನೆಗಳನ್ನು ಹಾಕಿದ್ದಾರೆ. "ವಿಶ್ವಾದ್ಯಂತ ಸಾಕಷ್ಟು ಲಸಿಕೆಗಳಿಗೆ ಅನುಮತಿಯನ್ನು ನೀಡಲಾಗಿದೆ. ಫೈಜರ್ ಲಸಿಕೆಗೆ 85 ರಾಷ್ಟ್ರಗಳು ಅನುಮತಿಯನ್ನು ನೀಡಿದ್ದರೆ ಮಾಡೆರ್ನಾ ಲಸಿಕೆಗೆ 46 ದೇಶಗಳು ಮತ್ತು ಜಾನ್ಸನ್ ಮತ್ತು ಜಾನ್ಸನ್ ಲಸಿಕೆಗೆ 41 ದೇಶಗಳಲ್ಲಿ ಅನುಮತಿ ದೊರೆತಿದೆ"
"ಆದರೆ ಈ ಮೂರು ಲಸಿಕೆಗಳಿಗೆ ಭಾರತದಲ್ಲಿ ಯಾವ ಕಾರಣಕ್ಕೆ ತುರ್ತು ಅನುಮೋದನೆ ದೊರೆತಿಲ್ಲ? ವಿಶ್ವ ಆರೋಗ್ಯ ಸಂಸ್ಥೆ ಇದಕ್ಕೆ ಅನುಮೋದನೆ ನೀಡಿದರು ಭಾರತ ಯಾಕೆ ನೀಡಿಲ್ಲ? ಇದರಿಂದ ಕೇಂದ್ರ ಸರ್ಕಾರ ಭಾರತದಲ್ಲಿ ಲಸಿಕೆಯ ಕೃತಕ ಅಭಾವ ಸೃಷ್ಟಿಸುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ. ಈ ಮೂಲಕ ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್ ಕಂಪನಿಗಳಿಗೆ ಲಾಭ ಮಾಡಿಕೊಡುತ್ತಿದೆ" ಎಂದು ಆರೋಪಿಸಿದ್ದಾರೆ.
ಕೋವಿಡ್ 19: ಮೇ 28ರಂದು ವಿಶ್ವದಲ್ಲಿ ಎಷ್ಟು ಮಂದಿ ಚೇತರಿಕೆ?
ಈ ಎರಡು ಕಂಪನಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಉತ್ಪಾದಿಸುವ ಸಾಮರ್ಥ್ಯವಿಲ್ಲ. ಆದರೆ ಕೇಂದ್ರ ಹೆಚ್ಚಿನ ಲಸಿಕೆಗಳಿಗೆ ಅನುಮತಿಯನ್ನು ನೀಡುತ್ತಿಲ್ಲ. ಈ ರೀತಿಯಾಗಿ ಕೇಂದ್ರ ಸರ್ಕಾರ ಕೃತಕ ಅಭಾವ ಸೃಷ್ಟಿಸಿರುವುದರಿಂದಾಗಿ ಈ ಎರಡು ಕಂಪನಿಗಳಿಂದ ಮಾತ್ರವೇ ರಾಜ್ಯ ಸರ್ಕಾರಗಳು ಲಸಿಕೆಯನ್ನು ಕೊಂಡುಕೊಳ್ಳಬೇಕಿದೆ. ಇದಕ್ಕೆ ಕೇಂದ್ರ ಸರ್ಕಾರ ತನ್ನ ಉತ್ತರವನ್ನು ನೀಡಲೇಬೇಕಿದೆ ಎಂದು ದೆಹಲಿಯ ಶಾಸಕಿಯೂ ಆಗಿರುವ ಅತಿಶಿ ಮರ್ಲೆನಾ ಆಗ್ರಹಿಸಿದ್ದಾರೆ.