ಸೆಂಟ್ರಲ್ ವಿಸ್ಟಾ ಯೋಜನೆ ತಡೆಗೆ ಒಪ್ಪದ ದೆಹಲಿ ಹೈಕೋರ್ಟ್, ಅರ್ಜಿದಾರರಿಗೆ ದಂಡ
ನವದೆಹಲಿ, ಮೇ, 31: ಕೊರೊನಾ ವೈರಸ್ನ ಸಂಕಷ್ಟದ ಸಂದರ್ಭದಲ್ಲಿ ಸೆಂಟ್ರಲ್ ವಿಸ್ಟಾ ಯೋಜನೆಯ ಕಾಮಗಾರಿಗೆ ತಡೆ ನೀಡಲು ದೆಹಲಿ ಹೈಕೋರ್ಟ್ಗೆ ಅರ್ಜಿಯನ್ನು ಸಲ್ಲಿಸಲಾಗಿತ್ತು. ಈ ಅರ್ಜಿಯನ್ನು ಸೋಮವಾರ ದೆಹಲಿ ಹೈಕೋರ್ಟ್ ವಜಾಗೊಳಿಸಿದ್ದು ಇದೊಂದು ರಾಷ್ಟ್ರೀಯ ಅಗತ್ಯ ಯೋಜನೆ ಎಂದು ಹೇಳಿದೆ. ಈ ಕಾಮಗಾರಿಗೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿದಾರರಿಗೆ ಒಂದು ಲಕ್ಷ ರೂಪಾಯಿ ದಂಡವನ್ನು ದೆಹಲಿ ಹೈಕೋರ್ಟ್ ವಿಧಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿಎನ್ ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರಿದ್ದ ವಿಭಾಗೀಯ ಪೀಠ ಈ ಅರ್ಜಿಯ ವಿಚಾರಣೆಯನ್ನು ನಡೆಸಿತ್ತು. ಮೇ 31ಕ್ಕೆ ಇದರ ತೀರ್ಪು ನೀಡುವುದಾಗಿ ದಿನಾಂಕವನ್ನು ಪ್ರಕಟಿಸಿತ್ತು. ಅದರಂತೆಯೇ ಇಂದು ತೀರ್ಪಿನಲ್ಲಿ ಸೆಂಟ್ರಲ್ ವಿಸ್ತಾ ಯೋಜನೆ ಮುಂದುವರಿಸಲು ಅನುಮತಿಯನ್ನು ನೀಡಿದೆ.
ಸೆಂಟ್ರಲ್ ವಿಸ್ಟಾ ಯೋಜನೆ: ಕಾನೂನು ಪ್ರಕರಣದ ಕಾಲಾನುಕ್ರಮ
ಸೆಂಟ್ರಲ್ ವಿಸ್ಟಾ ಯೋಜನೆಯ ಭಾಗವಾಗಿ ಸೆಂಟ್ರಲ್ ವಿಸ್ತಾ ಅವೆನ್ಯೂ ಕಾಮಗಾರಿ ನಡೆಯುತ್ತಿದೆ. ಇದು ಸಾರ್ವಜನಿಕ ಹಿತಾಸಕ್ತಿಯನ್ನು ಒಳಗೊಂಡಿದೆ. ಸೆಂಟ್ರಲ್ ವಿಸ್ತಾ ಅವೆನ್ಯೂ ಪುನರಾಭಿವೃದ್ಧಿಯ ನಿರ್ಮಾಣವನ್ನು ಪ್ರತ್ಯೇಕವಾಗಿ ನೋಡಲು ಸಾಧ್ಯವಿಲ್ಲ ಎಂದು ವಿಭಾಗೀಯ ಪೀಠ ಹೇಳಿದೆ. ಇದೊಂದು ಪ್ರಚೋದಿತ ಅರ್ಜಿಯಾಗಿದ್ದು ಇದರಲ್ಲಿ ಸಾರ್ವಜನಿಕ ಹಿತಾಸಕ್ತಿ ಇಲ್ಲ ಎಂದು ಹೇಳಿ ಅರ್ಜಿದಾರರರಿಗೆ ಕೋರ್ಟ್ ದಂಡವನ್ನು ವಿಧಿಸಿದೆ.
ಕಾರ್ಮಿಕರು ಕೆಲಸ ಪ್ರಾರಂಭಿಸಿದಾಗಿನಿಂದ ನಿರ್ಮಾಣ ಸ್ಥಳದಲ್ಲಿಯೇ ಇದ್ದಾರೆ. ಹೀಗಾಗಿ ಸೆಂಟ್ರಲ್ ವಿಸ್ತಾ ಅವೆನ್ಯೂ ಪುನರಾಭಿವೃದ್ಧಿ ಯೋಜನೆಗೆ ತಡೆ ನೀಡುವ ಪ್ರಶ್ನೆಯೇ ಬರುವುದಿಲ್ಲ ಎಂದು ಕೋರ್ಟ್ ನೇರವಾಗಿ ಹೇಳಿದೆ. ಡಿಡಿಎಂಎ(ಡಿಪಾರ್ಟ್ಮೆಂಟ್ ಆಫ್ ಡೆಲ್ಲಿ ಡಿಸಾಸ್ಟರ್ ಮ್ಯಾನೇಜ್ಮೆಂಟ್ ಅಥಾರಿಟಿ)ಯ ಏಪ್ರಿಲ್ 19 ರ ಆದೇಶದಲ್ಲಿ ಕಟ್ಟಡ ಕಾಮಗಾರಿಗಳಿಗೆ ಅವಕಾಶ ನೀಡಿರುವುದನ್ನು ಕೂಡ ಕೋರ್ಟ್ ಉಲ್ಲೇಖಿಸಿದೆ.
Recommended Video
ಒಪ್ಪಂದದ ಪ್ರಕಾರ ಈ ಯೋಜನೆ ನವೆಂಬರ್ 2021ರ ಒಳಗೆ ಸಂಪೂರ್ಣವಾಗಬೇಕಿದೆ. ಹೀಗಾಗಿ ಅದನ್ನು ಮುಂದುವರಿಸಲು ಅವಕಾಶವನ್ನು ನೀಡಬೇಕು ಎಂದು ನ್ಯಾಯಾಲಯ ಹೇಳಿದೆ.