ದೆಹಲಿ ಚುನಾವಣಾ ಅಖಾಡದಲ್ಲಿ ಪ್ರಚಾರ ಮಾಡಂಗಿಲ್ಲ ಈ ಬಿಜೆಪಿಗರು!
ನವದೆಹಲಿ, ಜನವರಿ.30: ದೆಹಲಿ ವಿಧಾನಸಭಾ ಚುನಾವಣೆಯ ಬಿಜೆಪಿ ಸ್ಟಾರ್ ಪ್ರಚಾರಕರೇ ಎನಿಸಿದ್ದ ಕೇಂದ್ರ ಹಣಕಾಸು ಖಾತೆಯ ರಾಜ್ಯ ಸಚಿವ ಅನುರಾಗ್ ಠಾಕೂರ್ ಅವರಿಗೆ ಪ್ರಚಾರ ಮಾಡುದಂತೆ ಕೇಂದ್ರ ಚುನಾವಣಾ ಆಯೋಗವು ನಿರ್ಬಂಧ ವಿಧಿಸಿದೆ.
ದೆಹಲಿಯಲ್ಲಿ ನಡೆದ ಬಿಜೆಪಿ ರೋಡ್ ಶೋನಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಕೇಂದ್ರ ಹಣಕಾಸು ಖಾತೆಯ ರಾಜ್ಯ ಸಚಿವ ಅನುರಾಗ್ ಠಾಕೂರ್ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. ಅಷ್ಟೇ ಅಲ್ಲದೇ ಬಿಜೆಪಿಯ ಮತ್ತೊಬ್ಬ ಮುಖಂಡ ಪರ್ವೇಶ್ ವರ್ಮಾರಿಗೆ ಚುನಾವಣಾ ಪ್ರಚಾರ ಮಾಡುದಂತೆ ಚುನಾವಣಾ ಆಯೋಗವು ಖಡಕ್ ಸೂಚನೆ ನೀಡಿದೆ.
ಕೇಂದ್ರ ಸಚಿವರಿಗೆ ಕೊಕ್ ಕೊಡಲು ಕಾರಣವೇ ಈ ವಿಡಿಯೋ!
ಅನುರಾಗ್ ಠಾಕೂರ್ ಗೆ 72 ಗಂಟೆಗಳ ಕಾಲ ನಿರ್ಬಂಧ ವಿಧಿಸಿದ್ದರೆ, ಬಿಜೆಪಿ ಮುಖಂಡ ಪರ್ವೇಶ್ ವರ್ಮಾರಿಗೆ 96 ಗಂಟೆಗಳ ಕಾಲ ದೆಹಲಿ ವಿಧಾನಸಭಾ ಚುನಾವಣಾ ಅಖಾಡದಲ್ಲಿ ಪ್ರಚಾರ ಮಾಡದಂತೆ ಕಟ್ಟಪ್ಪಣೆ ಹೊರಡಿಸಿದೆ.
ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಕೈ ಬಿಟ್ಟ ಬಿಜೆಪಿ:
ಕಳೆದ ಜನವರಿ.27ರಂದು ದೆಹಲಿ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆಯಲ್ಲಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕ ನೋಂದಣಿ ವಿರುದ್ಧ ಮಾತನಾಡುವವರೆಲ್ಲ ದೇಶದ್ರೋಹಿಗಳು ಎಂದಿದ್ದರು. ಇದರ ಜೊತೆಗೆ ಪ್ರಚೋದನಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಬಿಜೆಪಿಯೇ ತನ್ನ ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಅನುರಾಗ್ ಠಾಕೂರ್ ಹಾಗೂ ಪರ್ವೇಶ್ ವರ್ಮಾರನ್ನು ಕೈ ಬಿಟ್ಟಿತ್ತು.
ಅನುರಾಗ್ ಠಾಕೂರ್ ಗೆ ಶೋಕಾಸ್ ನೋಟಿಸ್:
ದೆಹಲಿ ವಿಧಾನಸಭಾ ಚುನಾವಣೆ 2020ರ ನೀತಿ ಸಂಹಿತೆ ಜಾರಿಯಲ್ಲಿದ್ದು, ಇಂಥ ಸಂದರ್ಭದಲ್ಲಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಪ್ರಚೋದನಕಾರಿ ಭಾಷಣ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಎಚ್ಚೆತ್ತ ಕೇಂದ್ರ ಚುನಾವಣಾ ಆಯೋಗವು, ಜನವರಿ.28ರ ಮಂಗಳವಾರವೇ ಅನುರಾಗ್ ಠಾಕೂರ್ ಅವರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿತ್ತು.