ದೆಹಲಿಯಲ್ಲಿ ಬಿಜೆಪಿಯ ಹೀನಾಯ ಸೋಲಿನ ಹಿಂದಿನ ಸತ್ಯ ಬಹಿರಂಗ
ನವದೆಹಲಿ, ಫೆಬ್ರವರಿ.13: ಭಾರತೀಯ ಜನತಾ ಪಕ್ಷವು ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮುಖಭಂಗ ಅನುಭವಿಸಿದ ಹಿಂದಿನ ಅಸಲಿ ಕಾರಣವನ್ನು ಕೇಂದ್ರ ಸಚಿವ ಹಾಗೂ ಬಿಜೆಪಿ ಮುಖಂಡ ಅಮಿತ್ ಶಾ ಬಹಿರಂಗಪಡಿಸಿದ್ದಾರೆ.
ದೆಹಲಿ ಚುನಾವಣೆಯಲ್ಲಿ ಬಿಜೆಪಿ ನಾಯಕರು ನೀಡಿದ ವಿವಾದಾತ್ಮಕ ಹೇಳಿಕೆಗಳೇ ಪಕ್ಷದ ಪಾಲಿಗೆ ಮುಳುವಾದವು. "ಗೋಲಿ ಮಾರೋ" ಎಂಬ ಬಿಜೆಪಿ ಮುಖಂಡರ ಹೇಳಿಕೆ ಮತ್ತು ಇಂಡೋ-ಪಾಕಿಸ್ತಾನದ ಬಗ್ಗೆ ಮಾತುಕತೆಯೇ ಪಕ್ಷಕ್ಕೆ ನಷ್ಟವನ್ನು ಉಂಟು ಮಾಡಿತು ಎಂದು ಅಮಿತ್ ಶಾ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಮಫ್ಲರ್ ಮ್ಯಾನ್ ಎದುರು ಮಂಕಾಗಿದ್ದೇಕೆ ಬಿಜೆಪಿ?
ಬಿಜೆಪಿ ಒಂದು ಸಿದ್ದಾಂತವನ್ನು ಹೊಂದಿರುವ ಪಕ್ಷವಾಗಿದ್ದು, ಸೋಲು-ಗೆಲುವು ಏನೇ ಬಂದರೂ ಪಕ್ಷದ ಸಿದ್ದಾಂತ ಬದಲಾಗುವುದಿಲ್ಲ. ದೇಶದಲ್ಲಿ ಎದುರಾಗುವ ಚುನಾವಣೆಗಳು ಪಕ್ಷಗಳ ಸಿದ್ದಾಂತವನ್ನು ಪ್ರಚುರಪಡಿಸುವ ವೇದಿಕೆಗಳು ಅಷ್ಟೇ. ನಾನೊಬ್ಬ ಬಿಜೆಪಿ ಮುಖಂಡನಾಗಿ ಪಕ್ಷದ ಸಿದ್ದಾಂತವನ್ನು ಸಾರಿ ಹೇಳುವ ಕೆಲಸವನ್ನು ನಾನು ಅಚ್ಚುಕಟ್ಟಾಗಿ ಮಾಡಿದ್ದೇನೆ ಎಂದು ಅಮಿತ್ ಶಾ ತಿಳಿಸಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿನ ಸೋಲು ಮೊದಲೇನಲ್ಲ
ರಾಷ್ಟ್ರ ರಾಜಧಾನಿಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೋಲು ಇದೇ ಮೊದಲೇನಲ್ಲ. ಈ ಹಿಂದೆ ಕೂಡಾ ಸಾಕಷ್ಟು ಬಾರಿ ಬಿಜೆಪಿ ಇಲ್ಲಿ ಸೋಲನ್ನು ಕಂಡಿದೆ. ಆಗಲೂ ಕೂಡಾ ಕರ್ತವ್ಯ ನಿರ್ವಹಿಸುವ ವಿಚಾರದಲ್ಲಿ ನಮ್ಮ ಉತ್ಸಾಹ ಯಾವುದೇ ರೀತಿ ಕುಗ್ಗುವುದಿಲ್ಲ ಎಂದು ಸಚಿವ ಅಮಿತ್ ಶಾ ತಿಳಿಸಿದರು.
ಕೇಂದ್ರ ಯಾವುದೇ ಕಾರಣಕ್ಕೂ ನಿಲುವು ಬದಲಾಯಿಸಲ್ಲ
ಯಾವುದೇ ಚುನಾವಣೆಯಾಗಲಿ, ಒಂದು ವಿಚಾರದ ಮೇಲಷ್ಟೇ ತೀರ್ಮಾನವಾಗುವುದಿಲ್ಲ. ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ಕೇಂದ್ರ ಸರ್ಕಾರವು ಇಂದಿಗೂ ತನ್ನ ನಿಲುವಿಗೆ ಬದ್ಧವಾಗಿದೆ. ಅದರಲ್ಲಿ ಯಾವುದೇ ಬದಲಾವಣೆಯಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಎಷ್ಟಾದರೂ ಪ್ರತಿಭಟನೆ ಮಾಡಿಕೊಳ್ಳಲಿ. ಕೇಂದ್ರ ಸರ್ಕಾರ ಮಾತ್ರ ಮುಂದಿಟ್ಟ ಹೆಜ್ಜೆಯನ್ನು ಹಿಂದೆ ಇಡುವುದಿಲ್ಲ ಎಂದು ಅಮಿತ್ ಶಾ ಗುಡುಗಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ಸಂಬಂಧ ಚರ್ಚೆಗೆ ಅವಕಾಶ
ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿಚಾರದಲ್ಲಿ ಕೇಂದ್ರ ಸರ್ಕಾರವು ಯಾವುದೇ ರಾಜಿಗೆ ಸಿದ್ಧವಿಲ್ಲ. ಸಿಎಎ ವಿರುದ್ಧ ಚರ್ಚೆ ನಡೆಸಲು ಯಾರೇ ಬರಲಿ. ನಮ್ಮ ಕಚೇರಿಯಲ್ಲೇ ಚರ್ಚೆಗೆ 3 ದಿನಗಳಲ್ಲೇ ಅವಕಾಶ ಕಲ್ಪಿಸಿ ಕೊಡುತ್ತೇವೆ. ಅವರ ಅನುಮಾನಗಳಿಗೆ ನಾವೇ ಉತ್ತರ ನೀಡುತ್ತೇನೆ ಎಂದು ತಿಳಿಸಿದ್ದಾರೆ.
ರಾಜಸ್ಥಾನದಲ್ಲಿ 74 ಪಾಕಿಸ್ತಾನ ಪ್ರಜೆಗಳಿಗೆ ಪೌರತ್ವ
ಇನ್ನು, ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಬಂದಾಗಿನಿಂದ ಈವರೆಗೂ 74 ಮಂದಿಗೆ ಭಾರತೀಯ ಪೌರತ್ವ ನೀಡಲಾಗಿದೆ. ಪಾಕಿಸ್ತಾನದಿಂದ ವಲಸೆ ಬಂದಿದ್ದ 74 ಮಂದಿಗೆ ಭಾರತೀಯ ಪೌರತ್ವವನ್ನು ಸಿಎಎ ಅಡಿಯಲ್ಲಿ ನೀಡಲಾಗಿದೆ. ಕಳೆದ 2019ರ ಡಿಸೆಂಬರ್.12ರಂದು ಸಂಸತ್ ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಕೇಂದ್ರ ಸರ್ಕಾರವು ಜಾರಿಗೊಳಿಸಿತು.