Breaking: ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಬಗ್ಗೆ ಬಿಎಸ್ವೈ ಮಾತು
ಬೆಂಗಳೂರು, ಆಗಸ್ಟ್ 26: ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರ ಆಯ್ಕೆ ವಿಷಯವನ್ನು ಕೇಂದ್ರ ನಾಯಕರು ನಿರ್ಧರಿಸಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ನವದೆಹಲಿ ಪ್ರವಾಸಕ್ಕೆ ತೆರಳಿರುವ ಅವರು, ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ರಾಜ್ಯದ ರಾಜಕೀಯ ಬೆಳವಣಿಗೆಗಳ ಕುರಿತು ಕೇಂದ್ರ ನಾಯಕರ ಗಮನಕ್ಕೆ ತರುವ ಕೆಲಸವನ್ನು ಮಾಡಿದ್ದೇನೆ. ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆ ರಾಜ್ಯಕ್ಕೆ ಹೆಚ್ಚಿನ ಸಮಯವನ್ನು ನೀಡುವಂತೆ ಕೇಂದ್ರ ನಾಯಕರಲ್ಲಿ ಮನವಿ ಮಾಡಿಕೊಂಡಿದ್ದೇನೆ ಎಂದು ಹೇಳಿದರು.
ಬಿಎಸ್ ಯಡಿಯೂರಪ್ಪ ದೆಹಲಿ ಭೇಟಿ: ಚುನಾವಣೆ ಸಂಪುಟದ ಮಹತ್ವದ ಚರ್ಚೆ!
ಕರ್ನಾಟಕದಲ್ಲಿ ಮುಂದಿನ 8 ತಿಂಗಳಿನಲ್ಲಿ ವಿಧಾನಸಭೆ ಚುನಾವಣೆ ಬರಲಿದೆ. ಈ ಹಂತದಲ್ಲಿ ರಾಜ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಬಿಜೆಪಿಯನ್ನು ಸಂಘಟಿಸುವ ಮೂಲಕ ಮತ್ತೊಮ್ಮೆ ಅಧಿಕಾರಕ್ಕೆ ತರಬೇಕು. ಇದರ ಬಗ್ಗೆ ಕೇಂದ್ರ ನಾಯಕರೊಂದಿಗೆ ಚರ್ಚಿಸಿದ್ದೇನೆ ಎಂದು ಬಿಎಸ್ ಯಡಿಯೂರಪ್ಪ ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷರ ಗಾದಿಗೆ ಯಾರ ಕರ್ಚೀಫ್?
ಬಿಜೆಪಿ ಹೈಕಮಾಂಡ್ ರಾಜಹುಲಿ ಬಿಎಸ್ವೈ ಅನ್ನು ಎದುರಾಕಿಕೊಂಡು ಯಾವುದೇ ಮಹತ್ವದ ತೀರ್ಮಾನವನ್ನು ಕೈಗೊಳ್ಳವು ಸ್ಥಿತಿಯಲ್ಲಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮೂರು ವರ್ಷದ ಅವಧಿ ಮುಕ್ತಾಯವಾಗುತ್ತಿದೆ. ಇದರಿಂದ ಬಿಎಸ್ವೈ ಮತ್ತು ಹೈಕಮಾಂಡ್ ಜೊತೆ ಸಮನ್ವಯ ಸಾಧಿಸುವ ವ್ಯಕ್ತಿಯನ್ನು ಆರ್ಎಸ್ಎಸ್ ಸಹ ಒಪ್ಪಬಹುದಾದ ವ್ಯಕ್ತಿಯನ್ನು ರಾಜ್ಯಾಧ್ಯಕ್ಷ ಹುದ್ದೆಗೆ ಕೂರಿಸಲು ಕೇಂದ್ರ ನಾಯಕರು ಅಣಿಯಾಗಿದ್ದಾರೆ.
ಬಿಜೆಪಿ ರಾಜ್ಯಧ್ಯಕ್ಷ ಹುದ್ದೆ ಒಕ್ಕಲಿಗರಾದ ಸಿಟಿ ರವಿ, ಶೋಭಾ ಕರಂದ್ಲಾಜೆ ಹೆಸರು ಮುಂಜೂಣಿಯಲ್ಲಿ ಕೇಳಿ ಬರುತ್ತಿದೆ. ಇನ್ನು ಆರ್ಎಸ್ಎಸ್ ಅಂಗಳದಲ್ಲಿ ದಲಿತ ಅರವಿಂದ ಲಿಂಬಾವಳಿ ಹೆಸರು ಕೇಳಿ ಬರುತ್ತಿದೆ. ಇದರಿಂದ ರಾಜಹುಲಿ ಬಿಎಸ್ವೈ ಯಾರ ಹೆಸರನ್ನು ಸೂಚಿಸುತ್ತಾರೆ. ಆ ಹೆಸರಿಗೆ ಅಂತಿಮ ಮುದ್ರೆ ಬೀಳುವ ಸಾಧ್ಯತೆಗಳಿದ್ದೂ ಹೈಕಮಾಂಡ್ ಮತ್ತು ಬಿಎಸ್ವೈ, ಬಿಎಲ್ ಸಂತೋಷ್ ಜೊತೆಗೆ ಸಮನ್ವಯ ಸಾಧಿಸುವ ವ್ಯಕ್ತಿಯೇ ನೂತನ ರಾಜ್ಯಾಧ್ಯಕ್ಷರ ಹುದ್ದೆ ಒಲಿಯುವ ನಿರೀಕ್ಷೆಯಿದೆ.
ಹೈಕೋರ್ಟ್ ತೀರ್ಪು ಸ್ವಾಗತಿಸಿದ ಬಿಎಸ್ ವೈ
ಬೆಂಗಳೂರಿನ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡುವಂತೆ ಹೈಕೋರ್ಟ್ ನೀಡಿದ ಆದೇಶವನ್ನು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸ್ವಾಗತಿಸಿದರು. ಈದ್ಗಾ ಮೈದಾನ ಸೇರಿದಂತೆ ಯಾವುದೇ ಪ್ರದೇಶದಲ್ಲಾದರೂ ಗಣೇಶನ ಪ್ರತಿಷ್ಠಾಪನೆ ಮಾಡುವುದಕ್ಕೆ ಅವಕಾಶ ಇರುತ್ತದೆ. ಈ ವಿಷಯದಲ್ಲಿ ಸುಖಾಸುಮ್ಮನೆ ವಿವಾದ ಹುಟ್ಟು ಹಾಕುವ ಅಗತ್ಯವಿಲ್ಲ ಎಂದು ಯಡಿಯೂರಪ್ಪ ಹೇಳಿದರು.