ಬೋಡೋ ದಂಗೆಕೋರರಿಗೆ ಬಂಪರ್ ಕೊಡುಗೆ ಕೊಟ್ಟ ಕೇಂದ್ರ ಸರ್ಕಾರ
ನವದೆಹಲಿ, ಜನವರಿ.27: ಪ್ರತ್ಯೇಕ ಬೋಡೋಲ್ಯಾಂಡ್ ನ ದಶಕಗಳ ಕನಸಿಗೆ ಕೇಂದ್ರ ಸರ್ಕಾರದ ನಿರ್ಧಾರದಿಂದ ರೆಕ್ಕೆ ಪುಕ್ಕ ಬಂದಿದೆ. ಹಲವು ವರ್ಷಗಳಿಂದ ನಡೆದ ಹೋರಾಟಕ್ಕೆ ಸೋಮವಾರ ಫಲ ಸಿಕ್ಕಿದೆ. ಅಸ್ಸಾಂನಲ್ಲಿ ಬೋಡೋ ಜನಾಂಗದ ಜನರು ನಡೆಸುತ್ತಿದ್ದ ಹೋರಾಟ ತಾರ್ಕಿಕ ಅಂತ್ಯ ಕಂಡಿದೆ.
ಅಸ್ಸಾಂನಲ್ಲಿ ಪ್ರತ್ಯೇಕ ಬೋಡೋಲ್ಯಾಂಡ್ ಬೇಡಿಕೆಗೆ ಕೇಂದ್ರ ಸರ್ಕಾರ ಸಮ್ಮತಿಸಿದೆ. ಈ ಸಂಬಂಧ ನ್ಯಾಷನಲ್ ಡೆಮಾಕ್ರಟಿಕ್ ಫ್ರೆಂಟ್ ಆಫ್ ಬೋಡೋಲ್ಯಾಂಡ್ (NDFB) ಹಾಗೂ ಆಲ್ ಬೋಡೋ ಸ್ಟೂಡೆಂಟ್ಸ್ ಯೂನಿಯನ್ ಜೊತೆಗೆ (ABSU) ತ್ರಿಪಕ್ಷೀಯ ಒಪ್ಪಂದಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಸಹಿ ಹಾಕಲಾಗಿದೆ.
NDAಗೆ ಮತ್ತೊಂದು ಆಘಾತ? ಒಂದು ಕಾಲು ಹೊರಗಿಟ್ಟ ಮಿತ್ರಪಕ್ಷ!
ತ್ರಿಪಕ್ಷೀಯ ಒಪ್ಪಂದಕ್ಕೆ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ್ ಸೋನೋವಾಲಾ, ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಸತ್ಯಂದ್ರ ಗರ್ಗ್, ಅಸ್ಸಾಂನ ಮುಖ್ಯ ಕಾರ್ಯದರ್ಶಿ ಕುಮಾರ್ ಸಂಜಯ್ ಕೃಷ್ಣ ಹಾಗೂ ಎನ್ ಡಿಎಫ್ ಬಿಯ ನಾಲ್ಕು ಮತ್ತು ಎಬಿಎಸ್ ಯುನ ನಾಲ್ವರು ಸದಸ್ಯರು ತ್ರಿಪಕ್ಷೀಯ ಒಪ್ಪಂದಕ್ಕೆ ಅಂಕಿತ ಹಾಕಿದರು.
ಅಸ್ಸಾಂನಲ್ಲಿ ಶಾಂತಿಸ್ಥಾಪನೆಗೆ ಅಂಕಿತ ಹಾಕಿದ ಕೇಂದ್ರ
ದಶಕಗಳಿಂದ ಪ್ರತ್ಯೇಕ ಬೋಡೋಲ್ಯಾಂಡ್ ಗಾಗಿ ಉಗ್ರ ಹೋರಾಟಗಳು ನಡೆದುಕೊಂಡು ಬಂದಿದ್ದವು. ಅದಕ್ಕಾಗಿ ದಂಗೆಕೋರರು ಹಿಂಸಾಚಾರದ ಮಾರ್ಗವನ್ನು ಕೂಡಾ ಅನುಸರಿಸಿದ್ದು, ಅಸ್ಸಾಂನಲ್ಲಿ ಮರುಸ್ಥಾಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈ ದಿಟ್ಟ ಹೆಜ್ಜೆ ಇಟ್ಟಿದೆ.
ಬೋಡೋಲ್ಯಾಂಡ್ ಅಭಿವೃದ್ಧಿಗೆ ಪಣತೊಟ್ಟ ಕೇಂದ್ರ ಸರ್ಕಾರ
ಅಸ್ಸಾಂನಲ್ಲಿ ಶಾಂತಿಸ್ಥಾಪನೆಯಷ್ಟೇ ಅಲ್ಲ. ಹಿಂದುಳಿದ ಪ್ರದೇಶ ಎಂದು ಗುರುತಿಸಿಕೊಂಡಿದ್ದ ಬೋಡೋಲ್ಯಾಂಡ್ ನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರವು ಪಣ ತೊಟ್ಟಿದೆ. ಅದಕ್ಕಾಗಿ ಬೋಡೋಲ್ಯಾಂಡ್ ಟೆರಿಟೋರಿಯಲ್ ಕೌನ್ಸಿಲ್ ರಚಿಸಿದ್ದು, ಈ ಪ್ರದೇಶದಲ್ಲಿ ಸಾಮಾಜಿಕ ಭದ್ರತೆ, ಸಾಂಸ್ಕೃತಿಕ ಹಾಗೂ ಭಾಷಾ ಕಲಿಕೆಯ ಬಗ್ಗೆ ತಿಳುವಳಿಕೆ ಮೂಡಿಸಲಾಗುತ್ತದೆ.
1500 ಕೋಟಿ ರುಪಾಯಿ ಅನುದಾನ ನೀಡಿದ ಕೇಂದ್ರ
ಬೋಡೋಲ್ಯಾಂಡ್ ಅಭಿವೃದ್ಧಿಗೊಳಿಸಲು ಕೇಂದ್ರ ಸರ್ಕಾರವು ಮುಂದಿನ ಮೂರು ವರ್ಷಗಳಲ್ಲಿ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ. ಇದರ ಜೊತೆಗೆ ಮುಂದಿನ ಮೂರು ವರ್ಷಗಳಲ್ಲಿ ಈ ಪ್ರದೇಶದ ಅಭಿೃದ್ಧಿಗೆ 1500 ಕೋಟಿ ರುಪಾಯಿ ಅನುದಾನವನ್ನು ಕೇಂದ್ರ ಸರ್ಕಾರ ಘೋಷಿಸಿದೆ.
ಮುಖ್ಯವಾಹಿನಿಗೆ ಬರಲಿರುವ 1500 ದಂಗೆಕೋರರು
ಪ್ರತ್ಯೇಕ ಬೋಡೋಲ್ಯಾಂಡ್ ಹೋರಾಟ ನಡೆಸಿದ ಎನ್ ಡಿಎಫ್ ಬಿಯ 1500 ದಂಗೆಕೋರರನ್ನು ಮುಖ್ಯವಾಹಿನಿಗೆ ತರಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಜನವರಿ.30ರಂದು 1500 ದಂಗೆಕೋರರು ತಮ್ಮ ಶಸ್ತ್ರಾಸ್ತ್ರಗಳೊಂದಿಗೆ ಶರಣಾಗಲಿದ್ದಾರೆ. ಈ ದಂಗೆಕೋರರನ್ನು ಮುಖ್ಯವಾಹಿನಿಗೆ ತರುವಲ್ಲಿ ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ.
ಬೋಡೋ ಒಪ್ಪಂದಕ್ಕೆ ಪ್ರಧಾನಿ ಮೋದಿ ಪ್ರಶಂಸೆ
ಇನ್ನು, ಬೋಡೋ ದಂಗೆಕೋರರು ಹಾಗೂ ಸಂಘಟನೆಗಳ ಜೊತೆಗಿನ ತ್ರಿಪಕ್ಷೀಯ ಒಪ್ಪಂದ ಪರಿವರ್ತನೆಯ ಸಂಕೇತ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ಬೋಡೋ ದಂಗೆಕೋರರನ್ನು ಮುಖ್ಯವಾಹಿನಿಗೆ ತಂದು ಎಲ್ಲರಂತೆ ಬದುಕುವ ಹಕ್ಕನ್ನು ನೀಡಬೇಕಿದೆ. ಈ ನಿಟ್ಟಿನಲ್ಲಿ ಮಾಡಿಕೊಂಡ ಒಪ್ಪಂದವು ಶಾಂತಿಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.