ಅಧಿಕೃತ ನಾಡಧ್ವಜಕ್ಕೆ ಸದ್ಯಕ್ಕೆ ಮಾನ್ಯತೆ ಇಲ್ಲ: ಕೇಂದ್ರ
ನವದೆಹಲಿ, ಮೇ 02: ಕರ್ನಾಟಕವು ಅಧಿಕೃತ ನಾಡಧ್ವಜ ಹೊಂದುವ ಉಮೇದಿಗೆ ಕೇಂದ್ರ ಸರ್ಕಾರ ತಾತ್ಕಾಲಿಕ ತಡೆ ನೀಡಿದೆ. ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಇರುವ ಕಾರಣ ರಾಜ್ಯದ ಪ್ರಸ್ತಾವವನ್ನು ಕೇಂದ್ರ ತಡೆಹಿಡಿದಿದೆ.
ಕರ್ನಾಟಕ ರಾಜ್ಯಕ್ಕೆ ಅಧಿಕೃತ ನಾಡಧ್ವಜ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರಕ್ಕೆ ಕೆಲವು ತಿಂಗಳುಗಳ ಹಿಂದೆ ಪ್ರಸ್ತಾವನೆ ಸಲ್ಲಿಸಿದ್ದರು. ನಾಡ ಧ್ವಜದ ರೂಪು ರೇಷೆ ಮತ್ತು ಒಕ್ಕೂಟ ವ್ಯವಸ್ಥೆಯಲ್ಲಿ ರಾಷ್ಟ್ರಧ್ವಜಕ್ಕೆ ಸಲ್ಲತಕ್ಕ ಎಲ್ಲಾ ಗೌರವಗಳನ್ನು ನೀಡಿದ ಮೇಲೆಯೂ ನಾಡಧ್ವಜ ಅವಶ್ಯಕತೆಯ ಬಗ್ಗೆ ಕೇಂದ್ರಕ್ಕೆ ಕಳಿಸಿರುವ ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿತ್ತು.
ಕನ್ನಡ ಬಾವುಟದಲ್ಲಿ ಸತ್ಯ ಮೇವ ಜಯತೇ..ಮರೆತಿರಾ?
ಸೋಮವಾರ ಸಹ ಮೋದಿ ಅವರು ಕರ್ನಾಟಕಕ್ಕೆ ಆಗಮಿಸುವ ಹಿಂದಿನ ದಿನ ಮುಖ್ಯಮಂತ್ರಿ ಅವರು ಟ್ವಿಟ್ಟರ್ ಮೂಲಕ ' 'ನಾನೊಬ್ಬ ಕನ್ನಡಿಗನೆಂದು ಮೋದಿ ಘೋಷಿಸಿಕೊಂಡಿರುವುದಕ್ಕೆ ಅವರಿಗೆ ಅಭಿನಂದನೆಗಳು ನೀವು ನಿಜವಾದ ಕನ್ನಡಿಗನೇ ಆಗಿದ್ದರೆ ಕನ್ನಡ ಭಾಷೆ, ನಾಡಗೀತೆ ಒಪ್ಪಿಕೊಳ್ಳಬೇಕು. ಪ್ರತ್ಯೇಕ ನಾಡಧ್ವಜಕ್ಕೆ ಅನುಮತಿ ಕೊಡಬೇಕು' ಎಂದು ಒತ್ತಾಯಿಸಿದ್ದರು.
ಸಿದ್ದರಾಮಯ್ಯ ಅವರ ಒತ್ತಾಯಕ್ಕೆ ಪ್ರತಿಕ್ರಿಯಿಸಿರುವ ಗೃಹ ಸಚಿವಾಲಯ ಕರ್ನಾಟಕದಲ್ಲಿ ಚುನಾವಣೆ ನಡೆಯುತ್ತಿರುವ ಕಾರಣ ನಾಡಧ್ವಜ ಪ್ರಸ್ತಾವನೆಯನ್ನು ತಡೆ ಹಿಡಿಯಲಾಗಿದೆ, ಚುನಾವಣೆ ಮುಗಿದ ನಂತರ ಪ್ರಸ್ತಾವನೆಯ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು' ಎಂದಿದೆ.
ಕನ್ನಡ ಧ್ವಜ, ರಾಜಕೀಯ ಪ್ರೇರಿತವೇ? ರಾಜ್ಯದ ಅಸ್ಮಿತೆಯೇ?
ಹಳದಿ, ಬಿಳಿ, ಕೆಂಪು ಬಣ್ಣ ಹಾಗೂ ಗಂಡ ಬೇರುಂಡ ಹೊಂದಿರುವ ಧ್ವಜಕ್ಕೆ ಅಧಿಕೃತ ನಾಡಧ್ವಜದ ಸ್ಥಾನ ನೀಡಬೇಕು ಎಂದು ಕರ್ನಾಟಕ ಸರ್ಕಾರ ಕೇಳಿದೆ.