ಉ.ಕರ್ನಾಟಕ ಜನರಿಗೆ ಸಿಹಿ ಸುದ್ದಿ: ಕಳಸಾ-ಬಂಡೂರಿ ಯೋಜನೆಗೆ ಕೇಂದ್ರ ಒಪ್ಪಿಗೆ
Recommended Video
ನವದೆಹಲಿ, ಅಕ್ಟೋಬರ್ 23: ಉತ್ತರ ಕರ್ನಾಟಕ ಭಾಗದ ರೈತರ ಆಶಾ ಕಿರಣ ಮಹದಾಯಿ ಯೋಜನೆ ಕೈಗೂಡುವ ಲಕ್ಷಣಗಳೂ ಗೋಚರಿಸುತ್ತಿವೆ. ಕಳಸಾ-ಬಂಡೂರಿ ಯೋಜನೆಗೆ ರಾಜ್ಯ ಇನ್ನಷ್ಟು ಹತ್ತಿರವಾಗಿದೆ.
ಕಳಸಾ-ಬಂಡೂರಿ ಯೋಜನೆಗೆ ಕೇಂದ್ರ ಪರಿಸರ ಇಲಾಖೆ ಒಪ್ಪಿಗೆ ನೀಡಿದ್ದು, 'ಕಳಸಾ ಬಂಡೂರಿ ಕುಡಿಯುವ ನೀರಿನ ಯೋಜನೆ ಆಗಿರುವ ಕಾರಣ, 'ಪರಿಸರ ಪರಿಣಾಮ ಅಧ್ಯಯನ ಅಧಿ ಸೂಚನೆ-2006' ರ ವ್ಯಾಪ್ತಿಗೆ ಬರುವುದಿಲ್ಲ, ಹಾಗಾಗಿ ಯೋಜನೆ ಅನುಷ್ಠಾನಕ್ಕೆ ತಕರಾರಿಲ್ಲ' ಎಂದು ತಿಳಿಸಿದೆ.
ಇದೇ ತಿಂಗಳ 17 ರಂದು ಕೇಂದ್ರ ಪರಿಸರ ಇಲಾಖೆಯು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದು, 'ಜಲವಿದ್ಯುತ್ ಅಥವಾ ನೀರಾವರಿ ಯೋಜನೆ ಹಾಗೂ ಹೊಸ ಅಚ್ಚುಕಟ್ಟು ಪ್ರದೇಶಗಳಿಗೆ ನೀರನ್ನು ಹಾಯಿಸುವ ಉದ್ದೇಶವನ್ನು ಈ ಯೋಜನೆ ಒಳ ಗೊಂಡಿಲ್ಲ. ಕುಡಿಯುವ ನೀರಿನ ಯೋಜನೆ ಆಗಿರುವುದರಿಂದ ಯೋಜನೆ ಆರಂಭಿಸಲು ಅಡ್ಡಿ ಇಲ್ಲ. ಕರ್ನಾಟಕ ಸರ್ಕಾರ ಯೋಜನೆ ಅನುಷ್ಠಾನಕ್ಕೆ ಬೇಕಾದ ತಯಾರಿ ಮಾಡಿಕೊಳ್ಳಬಹುದಾಗಿದೆ' ಎಂದು ಪತ್ರ ವಿವರಿಸಿದೆ.
ಮಹದಾಯಿ ನದಿಗೆ ಸಂಬಂಧಿಸಿದಂತೆ ಗೋವಾ-ಕರ್ನಾಟಕ-ಮಹಾರಾಷ್ಟ್ರ ನಡುವೆ ತಿಕ್ಕಾಟ ನಡೆಯುತ್ತಿದ್ದು 2018 ರ ಆಗಸ್ಟ್ 14 ರ ತೀರ್ಪಿನಂತೆ ಮೂರೂ ರಾಜ್ಯಗಳು ಮಾತುಕತೆ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಾಗಿದೆ. ಅಷ್ಟೆ ಅಲ್ಲದೆ, ಕಳಸಾ-ಬಂಡೂರಿ ಯೋಜನೆಯನ್ನು ಸಂಬಂಧಪಟ್ಟ ಇಲಾಖೆ ಅನುಮತಿ ಪಡೆದ ನಂತರ ಪ್ರಾರಂಭ ಮಾಡಬಹುದಾಗಿದೆ.