ಕೈಮೀರಿದ ದೆಹಲಿ ಪರಿಸ್ಥಿತಿ: ಸೇನೆ ಕರೆಸಲು ಕೇಜ್ರಿವಾಲ್ ಮನವಿ
ನವದೆಹಲಿ, ಫೆಬ್ರವರಿ 26: ದೆಹಲಿ ಹಿಂಸಾಚಾರ ಮಿತಿ ಮೀರಿದ್ದು, ಈಗಾಗಲೇ 18 ಮಂದಿ ಹಿಂಸಾಚಾರಕ್ಕೆ ಬಲಿಯಾಗಿದ್ದಾರೆ.
ದೆಹಲಿ ಪರಿಸ್ಥಿತಿ ನಿಯಂತ್ರಿಸಲು ಸೇನೆಯನ್ನು ಕರೆಸುವಂತೆ ಸಿಎಂ ಅರವಿಂದ ಕೇಜ್ರಿವಾಲ್ ಅವರು ಕೇಂದ್ರಕ್ಕೆ ಮನವಿ ಮಾಡಿದ್ದಾರೆ.
ನಿನ್ನೆಯಷ್ಟೆ ಗೃಹ ಸಚಿವ ಅಮಿತ್ ಶಾ ಜೊತೆ ದೆಹಲಿ ಹಿಂಸಾಚಾರದ ಬಗ್ಗೆ ಮಾತುಕತೆ ನಡೆಸಿದ್ದ ಅರವಿಂದ ಕೇಜ್ರಿವಾಲ್, 'ಸೇನೆ ಕರೆಸಲಾಗುತ್ತಿಲ್ಲ, ಪೊಲೀಸರು ದೆಹಲಿ ಸ್ಥಿತಿಯನ್ನು ತಹಬದಿಗೆ ತರಲಿದ್ದಾರೆ' ಎಂದಿದ್ದರು.
ಆದರೆ ಸಾವಿನ ಸಂಖ್ಯೆ ಹಾಗೂ ಗಾಯಗೊಂಡವರ ಸಂಖ್ಯೆ ಹೆಚ್ಚಾಗುತ್ತಿರುವುದು ಮತ್ತು ನಿಷೇಧಾಜ್ಞೆ ಇದ್ದರೂ ಸಹ ಗಲಭೆ ನಿಯಂತ್ರಣಕ್ಕೆ ಬರದೇ ಇರುವುದು ಅರವಿಂದ ಕೇಜ್ರಿವಾಲ್ ಅವರಿಗೆ ಆತಂಕ ಮೂಡಿಸಿದೆ, ಹೀಗಾಗಿ ಅವರು ದೆಹಲಿಗೆ ಸೇನೆಯನ್ನು ಕರೆಸಲು ಕೇಂದ್ರಕ್ಕೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅರವಿಂದ ಕೇಜ್ರಿವಾಲ್, 'ಪೊಲೀಸರ ಅವಿರತ ಪ್ರಯತ್ನದ ಬಳಿಕವೂ ಪರಿಸ್ಥಿತಿ ಹತೋಟಿಗೆ ಬಂದಿಲ್ಲ, ಕೂಡಲೇ ಸೇನೆಯನ್ನು ಕರೆಸಬೇಕು ಮತ್ತು ಹಿಂಸಾಚಾರ ಎದ್ದಿರುವ ಭಾಗಗಳಿಗೆ ಭದ್ರತಾ ಸಿಬ್ಬಂದಿ ನಿಯೋಜಿಸಬೇಕು, ನಾನು ಈ ಬಗ್ಗೆ ಈ ಕೂಡಲೇ ಅಮಿತ್ ಶಾ ಅವರಿಗೆ ಪತ್ರ ಬರೆಯುತ್ತಿದ್ದೇನೆ' ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಹಿಂಸಾಚಾರ ತೀವ್ರಗೊಂಡ ಮೂರು ದಿನಗಳ ನಂತರ ಪ್ರಧಾನಿ ಮೋದಿ ಅವರು ಟ್ವೀಟ್ ಮಾಡಿದ್ದು, ದೆಹಲಿಯ ಸಹೋದರ, ಸಹೋದರಿಯರು ಶಾಂತಿ ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ. ದೆಹಲಿ ಹಿಂಸಾಚಾರ ಕುರಿತು ಸಭೆಯೊಂದನ್ನೂ ನಡೆಸಿರುವುದಾಗಿ ಅವರು ಹೇಳಿದ್ದಾರೆ.