ಜಿಎಸ್ಟಿ ಪರಿಹಾರ: ಕೇಂದ್ರವು ರಾಜ್ಯಗಳಿಗೆ ದ್ರೋಹವೆಸಗಿದೆ ಎಂದ ಮನೀಶ್ ಸಿಸೋಡಿಯಾ
ನವದೆಹಲಿ, ಆಗಸ್ಟ್ 28: ಗುರುವಾರ 41ನೇ ಜಿಎಸ್ಟಿ ಮಂಡಳಿ ಸಭೆ ಬಳಿಕ ಮಾತನಾಡಿರುವ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಕೇಂದ್ರ ಸರಕಾರವು ಜಿಎಸ್ಟಿ ನಷ್ಟ ಪರಿಹಾರಕ್ಕೆ ತಿರಸ್ಕರಿಸುವ ಮೂಲಕ ರಾಜ್ಯಗಳಿಗೆ ಮಹಾ ದ್ರೋಹ ಎಸಗಿದೆ ಎಂದು ಖಂಡಿಸಿದ್ದಾರೆ.
ಜಿಎಸ್ಟಿ ಪರಿಹಾರವನ್ನು ಕೊಡುವುದರ ಬದಲಿಗೆ ಸಾಲ ತೆಗೆದುಕೊಳ್ಳಿ ಎನ್ನುವ ಮೂಲಕ ಕೇಂದ್ರ ಸರಕಾರ ಒಕ್ಕೂಟ ವ್ಯವಸ್ಥೆಯ ಸಹಕಾರ ತತ್ತ್ವವನ್ನೇ ಗಾಳಿಗೆ ತೂರಿದೆ ಎಂದು ಸಿಸೋಡಿಯಾ ಕಿಡಿಕಾರಿದ್ದಾರೆ.
41ನೇ ಜಿಎಸ್ಟಿ ಮಂಡಳಿ ಸಭೆ: ರಾಜ್ಯಗಳಿಗೆ GST ಪರಿಹಾರ 1.65 ಲಕ್ಷ ಕೋಟಿ ರೂಪಾಯಿ
ಕೇಂದ್ರದಿಂದ ಅತಿ ಕಳಪೆ ರೀತಿಯಲ್ಲಿ ಜಿಎಸ್ಟಿ ಜಾರಿಯಾಗಿದೆ. ಕೇಂದ್ರವು ರಾಜ್ಯಗಳ ದಿಕ್ಕು ತಪ್ಪಿಸುತ್ತಿದೆ. ರಾಜ್ಯಗಳ ಆದಾಯವನ್ನು ಹದಗೆಡಿಸುತ್ತಿದೆ ಎಂದು ಅವರು ಟೀಕಿಸಿದರು. ಕೇಂದ್ರ ಸರಕಾರ ರಾಜ್ಯಗಳಿಗೆ ನೆರವಾಗುತ್ತಿಲ್ಲ ಎಂದು ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಹಣಕಾಸು ಮಂತ್ರಿಗಳು ಮಂಡಳಿ ಸಭೆಯ ನಂತರ ಅಸಮಾಧಾನ ವ್ಯಕ್ತಪಡಿಸಿದರು.
ಸಾಂಕ್ರಾಮಿಕ ರೋಗದಿಂದಾಗಿ ಈ ವರ್ಷ 2.35 ಲಕ್ಷ ಕೋಟಿ ರೂ.ಗಳ ಅಂದಾಜು ಜಿಎಸ್ಟಿ ಪರಿಹಾರದ ಕೊರತೆಯನ್ನು ಪೂರೈಸಲು ರಾಜ್ಯಗಳು ಸಾಲ ಪಡೆಯಲು ಕೇಂದ್ರವು ಎರಡು ಆಯ್ಕೆಗಳನ್ನು ನೀಡಿದೆ.
ಆಯ್ಕೆ 1:
ಆರ್ಬಿಐನೊಂದಿಗೆ ಚರ್ಚಿಸಿ ರಾಜ್ಯಗಳಿಗೆ ವಿಶೇಷ ಸವಲತ್ತು ಒದಗಿಸಲಾಗುತ್ತದೆ. 97 ಸಾವಿರ ಕೋಟಿ ರುಪಾಯಿಯನ್ನು ಉತ್ತಮ ಬಡ್ಡಿ ದರದಲ್ಲಿ ಕೊಡಿಸಲಾಗುತ್ತದೆ. ಅದನ್ನು ಐದು ವರ್ಷಗಳ ಅವಧಿಗೆ ಸೆಸ್ ಸಂಗ್ರಹದ ಮೂಲಕ ಮರುಪಾವತಿಗೆ ಅವಕಾಶ ಇರುತ್ತದೆ.
ಆಯ್ಕೆ 2:
ಒಟ್ಟಾರೆ ಜಿಎಸ್ ಟಿ ಪರಿಹಾರ ಕೊರತೆಯಾದ 2.35 ಲಕ್ಷ ಕೋಟಿ ರುಪಾಯಿ ಮೊತ್ತವನ್ನು ಆರ್ ಬಿಐ ಜತೆಗೆ ಚರ್ಚೆ ನಡೆಸಿ, ಸಾಲ ಪಡೆಯುವ ಮೂಲಕ ರಾಜ್ಯಗಳೇ ಅದನ್ನು ತುಂಬಿಕೊಳ್ಳಬಹುದು ಎಂದು ಅವರು ಹೇಳಿದರು.