ರಕ್ಷಣಾ ಸಚಿವರ ಕೈ ಸೇರಲಿದೆ ರಾವತ್ ಹೆಲಿಕಾಪ್ಟರ್ ದುರಂತದ ತನಿಖಾ ವರದಿ
ನವದೆಹಲಿ, ಜನವರಿ 05: ಸಿಡಿಎಸ್ ಬಿಪಿನ್ ರಾವತ್ ಅವರಿದ್ದ ವಾಯುಪಡೆಯ ಹೆಲಿಕಾಪ್ಟರ್ ದುರಂತ ಪ್ರಕರಣದ ತನಿಖೆ ಈಗಾಗಲೇ ಪೂರ್ಣಗೊಂಡಿದ್ದು, ವರದಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಕೈ ಸೇರಲಿದೆ. ದುರಂತ ನಡೆದ ದಿನದಿಂದಲೇ ಆರಂಭವಾಗಿದ್ದ ತನಿಖೆ ಒಂದು ತಿಂಗಳ ನಂತರ ಪೂರ್ಣಗೊಂಡಿದೆ. ದುರಂತ ಘಟನೆಗೆ ಕಾರಣವಾಗಿರಬಹುದಾದ ಎಲ್ಲ ಸನ್ನಿವೇಶಗಳನ್ನು ತನಿಖಾ ತಂಡವು ವಿಶ್ಲೇಷಿಸಿದೆ ಎನ್ನಲಾಗುತ್ತಿದೆ.
ತಮಿಳುನಾಡಿನ ಕೂನೂರಿನಲ್ಲಿ ನಡೆದ ವಾಯುಪಡೆಯ ಹೆಲಿಕಾಪ್ಟರ್ ದುರಂತ ಪ್ರಕರಣದ ತನಿಖೆಯನ್ನು ತನಿಖಾಧಿಕಾರಿಗಳು ಪೂರ್ಣಗೊಳಿಸಿದ್ದು, ಇಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ವರದಿಯನ್ನು ಒಪ್ಪಿಸಲಿದ್ದಾರೆ.
ವಿಡಿಯೋ: ಬಿಪಿನ್ ರಾವತ್ ಇದ್ದ ಸೇನಾ ಹೆಲಿಕಾಪ್ಟರ್ ಅಪಘಾತದ ಕೊನೆಯ ಕ್ಷಣಗಳು ಸೆರೆ
ಏರ್ ಮಾರ್ಷಲ್ ಮಾನವೇಂದ್ರ ಸಿಂಗ್ ನೇತೃತ್ವದ ಭಾರತೀಯ ವಾಯುಪಡೆಯ (ಐಎಎಫ್) ಉನ್ನತ ಅಧಿಕಾರಿಗಳು ತನಿಖೆ ನಡೆಸಿದ್ದು, ಈ ತಂಡವು ಹೆಲಿಕಾಪ್ಟರ್ನಲ್ಲಿ ಸಂಭವಿಸಿರಬಹುದಾದ ಮಾನವ ದೋಷ ಅಥವಾ ಹೆಲಿಕಾಪ್ಟರ್ ಲ್ಯಾಂಡಿಂಗ್ ತಯಾರಿಯಲ್ಲಿ ನಡೆದಿರಬಹುದಾದ ಸಮಸ್ಯೆಯ ಸಂಭವನೀಯ ಸನ್ನಿವೇಶಗಳನ್ನು ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಹೆಲಿಕಾಪ್ಟರ್ ದುರಂತ ಯಾವುದೇ ತಾಂತ್ರಿಕ ದೋಷದಿಂದ ಆಗಿಲ್ಲ ಎಂದು ವಾಯಪಡೆಯ ಮೂಲಗಳು ಹೇಳಿದ್ದರೂ ಕೂಡಾ, ಅಧಿಕೃತವಾಗಿ ದೃಢೀಕರಣವಿಲ್ಲದ ಕಾರಣದಿಂದ ಈ ವಿಚಾರದ ಬಗ್ಗೆಯೂ ತನಿಖೆ ನಡೆಸಲಾಗಿದೆ.
ಕೆಲವೊಂದು ಊಹೆಗಳು, ಅಂದಾಜುಗಳು ಇದ್ದರೂ ತನಿಖಾ ಸಮಿತಿಯ ವರದಿ ಬಂದ ನಂತರವೇ ಸತ್ಯಾಂಶ ಗೊತ್ತಾಗಲಿದೆ. ಈ ವರದಿ ಇಂದು ರಾಜನಾಥ್ ಸಿಂಗ್ ಕೈ ಸೇರಲಿದ್ದು, ದುರಂತಕ್ಕೆ ನಿಖರ ಕಾರಣ ಏನೆಂಬುದು ಸ್ಪಷ್ಟವಾಗುವ ಸಾಧ್ಯತೆಯಿದೆ ಅಥವಾ ಕೆಲವೊಂದು ಊಹೆಗಳಲ್ಲಿಯೇ ತನಿಖಾ ವರದಿ ಮುಕ್ತಾಯವಾಗುವ ಸಾಧ್ಯತೆಯೂ ಇದೆ.
ಅಂದಹಾಗೆ ಡಿಸೆಂಬರ್ 8ರಂದು, ಭಾರತೀಯ ವಾಯುಸೇನೆ ನಿರ್ವಹಿಸುತ್ತಿದ್ದ Mi-17V-5 ಹೆಲಿಕಾಪ್ಟರ್ ಸೂಲೂರು ಏರ್ ಫೋರ್ಸ್ ಸ್ಟೇಷನ್ನಿಂದ ಹೊರಟು ತಮಿಳುನಾಡಿನ ಕೊಯಮತ್ತೂರು ಮತ್ತು ವೆಲ್ಲಿಂಗ್ಟನ್ ನಡುವೆ ಅಪಘಾತಕ್ಕೀಡಾಗಿತ್ತು. ಈ ಅಪಘಾತದಲ್ಲಿ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಮತ್ತು ಇತರ 13 ಮಂದಿ ಹುತಾತ್ಮರಾಗಿದ್ದರು.
ಡಿಸೆಂಬರ್ 8ರಂದು ತಮಿಳುನಾಡಿವ ಕೂನೂರ್ ಬಳಿ ನಡೆದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಸಿಡಿಎಸ್ ಬಿಪಿನ್ ರಾವತ್, ಅವರ ಪತ್ನಿ ಮತ್ತು ಇತರ 12 ಸೇನಾ ಅಧಿಕಾರಿಗಳು ಮೃತಪಟ್ಟ ಪ್ರಕರಣದ ತನಿಖಾ ವರದಿಯನ್ನು ಇಂದು ಮೂರೂ ಸೇವೆಗಳ (ಭೂಸೇನೆ, ವಾಯುಸೇನೆ, ನೌಕಾಪಡೆ) ತನಿಖಾ ತಂಡ ರಕ್ಷಣಾ ಸಚಿವ ರಾಜನಾಥ್ ಸಿಂಗ್ರಿಗೆ ಸಲ್ಲಿಸಲಿದೆ ಎಂದು ಹೇಳಲಾಗಿದೆ.
ಡಿ.8ರಂದು ನಡೆದ ಈ ದುರ್ಘಟನೆಯಿಂದ ರಾಷ್ಟ್ರಕ್ಕೆ ಶಾಕ್ ಆಗಿತ್ತು. ಅಂದು ಪತನವಾಗಿದ್ದು Mi-17V5 ಸೇನಾ ಹೆಲಿಕಾಪ್ಟರ್ ಇದು ವಿವಿಐಪಿ ಹೆಲಿಕಾಪ್ಟರ್ ಆಗಿದ್ದು, ಪ್ರಮುಖ ವ್ಯಕ್ತಿಗಳು ಪ್ರಯಾಣ ಮಾಡುವಾಗ ಎಲ್ಲ ರೀತಿಯ ಪರಿಶೀಲನೆ ಮಾಡಿಯೇ ಕಳಿಸಲಾಗುತ್ತದೆ. ಹಾಗಿದ್ದಾಗ್ಯೂ ಕೂಡ ತಮಿಳುನಾಡಿನ ಬಳಿ ಪತನಗೊಂಡು ಪ್ರಮುಖ ಅಧಿಕಾರಿಗಳು ಮೃತಪಟ್ಟಿದ್ದರು.
ಚಾಪರ್ ಪತನಕ್ಕೆ ಕಾರಣವೇನು ಎಂಬ ಬಗ್ಗೆ ಸೇನೆಯ ಮೂರೂ ವಿಭಾಗಗಳಿಂದ ತನಿಖಾ ತಂಡ ನಿಯೋಜಿಸಲಾಗಿದ್ದು, ಅವರು ತಮ್ಮ ತನಿಖಾ ವರದಿಯನ್ನು ಇಂದು ಸಲ್ಲಿಸಲಿದ್ದಾರೆ ಎನ್ನಲಾಗಿದೆ. ಇನ್ನು ಸಿಡಿಎಸ್ ಜನರಲ್ ಬಿಪಿನ್ ರಾವತ್ ಮತ್ತು ಇತರ ಸೇನಾಧಿಕಾರಿಗಳು ಪ್ರಯಾಣ ಮಾಡುತ್ತಿದ್ದ ಈ ಚಾಪರ್ ತುಂಬ ಕೆಳಗೆ ಹೋಗುತ್ತಿತ್ತು.
ಅಲ್ಲಿಯೇ ಇದ್ದ ರೈಲ್ವೆ ಹಳಿಯನ್ನು ಅನುಸರಿಸಿ ಮೇಲೆ ಹಾರುತ್ತಿತ್ತು. ಆದರೆ ಅವರು ಹೋಗುತ್ತಿದ್ದ ದಾರಿಯಲ್ಲಿ ಒಮ್ಮೆಲೇ ಮೋಡದ ಹೊದಿಕೆ ಎದುರು ಬಂದಿದ್ದರಿಂದ, ಅದನ್ನು ತಪ್ಪಿಸಲು ಹೆಲಿಕಾಪ್ಟರ್ ಪೈಲಟ್ಗಳು ಪ್ರಯತ್ನ ಪಟ್ಟರು ಇದೇ ಅಪಘಾತಕ್ಕೆ ಕಾರಣ ಎಂದು ಮೂಲಗಳಿಂದ ತಿಳಿದುಬಂದಿದ್ದಾಗಿ ಎಎನ್ಐ ವರದಿ ಮಾಡಿದೆ. ಅಷ್ಟೇ ಅಲ್ಲ, ಈ ಹೆಲಿಕಾಪ್ಟರ್ನಲ್ಲಿ ಇದ್ದವರೆಲ್ಲ ಮಾಸ್ಟರ್ ಗ್ರೀನ್ ವರ್ಗಕ್ಕೆ ಸೇರಿದವರು.
ಹೆಲಿಕಾಪ್ಟರ್ ಅಪಘಾತದ ಕೊನೇ ಹಂತದಲ್ಲಿ ಅದರಲ್ಲಿ ಇದ್ದ ಪೈಲಟ್ಗಳು ಸಮೀಪದ ಏರ್ಸ್ಟೇಶನ್ಗಳಿಗೆ ಯಾವುದೇ ಕರೆ ಮಾಡಿಲ್ಲ. ಹೀಗಾಗಿ ಅವರಿಗೆ ಕೊನೇ ಕ್ಷಣದವರೆಗೂ ಎಮರ್ಜನ್ಸಿ ಇದೆ ಎಂದು ಅನ್ನಿಸಲಿಲ್ಲ ಎನ್ನಿಸುತ್ತದೆ. ಎಲ್ಲವೂ ಒಂದೇ ಬಾರಿಗೆ ಆಗಿಹೋಯಿತು ಎಂದೂ ತನಿಖಾ ತಂಡಗಳ ವರದಿಯಲ್ಲಿ ಉಲ್ಲೇಖವಾಗಿದೆ ಎಂದು ಎಎನ್ಐ ತಿಳಿಸಿದೆ.
ಇನ್ನು ಪ್ರಕರಣದ ತನಿಖೆಯ ನೇತೃತ್ವವನ್ನು ಭಾರತೀಯ ವಾಯು ಸೇನೆ (IAF) ಅಧಿಕಾರಿ ವಹಿಸಿದ್ದರು. ಹಾಗೇ, ಈ ತಂಡದಲ್ಲಿ ನೇವಿ ಚಾಪರ್ ಪೈಲಟ್ ಮತ್ತು ಸೇನಾ ಅಧಿಕಾರಿಯೊಬ್ಬರು ಇದ್ದಾರೆ ಎಂದೂ ಹೇಳಲಾಗಿದೆ.
ಹೆಲಿಕಾಪ್ಟರ್, ವಿಮಾನ ಸಾರಿಗೆಯಲ್ಲಿ ಅತ್ಯಂತ ಉತ್ತಮ ಪೈಲಟ್ಗಳು ಎಂದು ಗುರುತಿಸಿಕೊಂಡವರು. ಕಡಿಮೆ ಗೋಚರತೆಯ ಸಂದರ್ಭದಲ್ಲೂ ಇವರು ಹೆಲಿಕಾಪ್ಟರ್ನ್ನು ಕೆಳಗೆ ಇಳಿಸುವಷ್ಟು ನುರಿತರು ಆಗಿದ್ದರೂ. ಅವರು ಸಾಗುತ್ತಿದ್ದ ಮಾರ್ಗದಲ್ಲಿಯೇ ಹೆಲಿಕಾಪ್ಟರ್ ಕೆಳಗೆ ಇಳಿಸಬಹುದಿತ್ತು.
ಆದರೆ ಮೋಡದಿಂದ ಹೊರಗೆ ಹೋಗುವ ಪ್ರಯತ್ನ ಮಾಡಿದರು. ಇದೇ ಕಾರಣಕ್ಕೆ ಕೆಳಗೆ ಬಿದ್ದು, ಬಂಡೆಗೆ ಅಪ್ಪಳಿಸಿದೆ ಎಂದು ತನಿಖಾ ವರದಿಯಲ್ಲಿ ಉಲ್ಲೇಖವಾಗಿದೆ ಎಂದೂ ಎಎನ್ಐ ತಿಳಿಸಿದೆ.
Recommended Video