ಸಿಬಿಐ ವಿವಾದ: ಅಲೋಕ್ ವರ್ಮಾ ವಿರುದ್ಧ ಮಿಶ್ರ ಮಾಹಿತಿ ವರದಿ
ನವದೆಹಲಿ, ನವೆಂಬರ್ 16: ಲಂಚ ಪಡೆದ ವಿವಾದಕ್ಕೆ ಸಂಬಂಧಿಸಿದಂತೆ ಕಡ್ಡಾಯ ರಜೆಯ ಮೇಲೆ ತೆರಳಿರುವ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರ ವಿರುದ್ಧ ಕೇಂದ್ರ ಜಾಗ್ರತಾ ದಳ ನೀಡಿರುವ ವರದಿಯು ಮಿಶ್ರ ಮಾಹಿತಿಗಳನ್ನು ಒಳಗೊಂಡಿದ್ದು, ಕೆಲವು ಆರೋಪಗಳ ಕುರಿತು ಹೆಚ್ಚಿನ ವಿಚಾರಣೆ ನಡೆಯಬೇಕಿದೆ ಎಂಬ ಅಭಿಪ್ರಾಯ ತಿಳಿಸಿರುವುದಾಗಿ ಸುಪ್ರೀಂಕೋರ್ಟ್ ಹೇಳಿದೆ.
ಸಿವಿಸಿ ನೀಡಿರುವ ವರದಿ ಬಗ್ಗೆ ಸೋಮವಾರ (ನ.20) ಪ್ರತಿಕ್ರಿಯೆ ನೀಡುವಂತೆ ಸುಪ್ರೀಂಕೋರ್ಟ್, ಅಲೋಕ್ ವರ್ಮಾ ಅವರಿಗೆ ಸೂಚಿಸಿದೆ.
ಸಿಬಿಐ ಕುರಿತಾದ ಸಾರ್ವಜನಿಕ ವಿಶ್ವಾಸಾರ್ಹತೆ, ಪಾವಿತ್ರ್ಯ ಮತ್ತು ಹೊಣೆಗಾರಿಕೆಗಳನ್ನು ಕಾಪಾಡಿಕೊಳ್ಳುವುದನ್ನು ಗಮನದಲ್ಲಿ ಇರಿಸಿಕೊಂಡು ಅವರ ಪ್ರತಿಕ್ರಿಯೆಯನ್ನು ಮುಖ್ಯ ಎಂದು ಪರಿಗಣಿಸಿರುವುದಾಗಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಹೇಳಿದರು.
ಅಲೋಕ್ ವಿರುದ್ಧದ ತನಿಖೆ ಪೂರ್ಣ : ಕ್ಷಮೆಯೊಂದಿಗೆ ವರದಿ ಸಲ್ಲಿಕೆ
ಅಲೋಕ್ ವರ್ಮಾ ಕುರಿತಾಗಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಸಿವಿಸಿಗೆ ಸೂಚಿಸಿತ್ತು. ಅದರಂತೆ ಸಿವಿಸಿ ಸೋಮವಾರ ಸುಪ್ರೀಂಕೋರ್ಟ್ಗೆ ಮುಚ್ಚಿದ ಲಕೋಟೆಯಲ್ಲಿ ವರದಿ ನೀಡಿತ್ತು.
ಸೋಮವಾರ ಮಧ್ಯಾಹ್ನದ ಒಳಗೆ ಪ್ರತಿಕ್ರಿಯೆ
ಈಗ ಸರ್ಕಾರದ ಇಬ್ಬರು ಹಿರಿಯ ಅಧಿಕಾರಿಗಳು, ಅಟಾರ್ನಿ ಜನರಲ್ ವಿವಿ ವೇಣುಗೋಪಾಲ್ ಮತ್ತು ಸಾಲಿಸಿಟರಿ ಜನರಲ್ ಅವರೂ ಈ ತನಿಖಾ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಪಡೆದುಕೊಳ್ಳಲಿದ್ದಾರೆ.
ಸಿವಿಸಿ ವರದಿಯ ಒಂದು ಪ್ರತಿಯನ್ನು ಅಲೋಕ್ ವರ್ಮಾ ಕೂಡ ಪಡೆದುಕೊಳ್ಳಲಿದ್ದು, ಅದರ ಕುರಿತು ಅವರು ನ.20ರಂದು ಮಧ್ಯಾಹ್ನ 1 ಗಂಟೆಯ ಒಳಗೆ ಪ್ರತಿಕ್ರಿಯೆ ಸಲ್ಲಿಸಬೇಕು.
ರಾಕೇಶ್ ಅಸ್ಥಾನಾ ವಿರುದ್ಧ ದಾಖಲೆಗಳಿವೆ: ದೆಹಲಿ ಹೈಕೋರ್ಟ್ಗೆ ಸಿಬಿಐ
ನಾಗೇಶ್ವರ್ ರಾವ್ ನಿರ್ಧಾರಗಳೇನು?
ಅ.23 - 26ರ ಅವಧಿಯಲ್ಲಿ ತೆಗೆದುಕೊಂಡ ನಿರ್ಧಾರಗಳ ಕುರಿತು ಸಿಬಿಐ ಹಂಗಾಮಿ ನಿರ್ದೇಶಕ ಎಂ. ನಾಗೇಶ್ವರ ರಾವ್ ಸಲ್ಲಿಸಿರುವ ವರದಿಯನ್ನು ಕೂಡ ಸಿಬಿಐ ಪರಿಗಣಿಸುವ ಸಾಧ್ಯತೆ ಇದೆ. ಅಲೋಕ್ ವರ್ಮಾ ಮತ್ತು ರಾಕೇಶ್ ಅಸ್ಥಾನಾ ಅವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿ ನಾಗೇಶ್ವರ ರಾವ್ ಅವರನ್ನು ತಕ್ಷಣದಿಂದ ಅನ್ವಯವಾಗುವಂತೆ ಹಂಗಾಮಿ ನಿರ್ದೇಶಕರನ್ನಾಗಿ ನೇಮಿಸಲಾಗಿತ್ತು.
ನಾಗೇಶ್ವರ ರಾವ್ ಯಾವ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಎಂಬುದನ್ನು ವಿವರಿಸಿ ಎಂದು ಅರ್ಜಿದಾರರಿಗೆ ಗೊಗೊಯ್ ಪ್ರಶ್ನಿಸಿದರು.
ಗೊಂದಲದ ಗೂಡಾಗಿರುವ ಸಿಬಿಐ 'ಲಂಚ'ದ ಹಗರಣ : ಯಾರು ಭ್ರಷ್ಟರು?
ಅಸ್ಥಾನಾ ವಕೀಲರಿಗೆ ವರದಿ ಇಲ್ಲ
ಸಿವಿಸಿ ವರದಿಯ ಒಂದು ಪ್ರತಿಯನ್ನು ತಮಗೂ ನೀಡುವಂತೆ ರಾಕೇಶ್ ಅಸ್ಥಾನಾ ಪರ ವಕೀಲರು ಕೋರಿದರು. ಅದು ಸಾಧ್ಯವೇ ಇಲ್ಲ ಎಂದು ಮುಖ್ಯ ನ್ಯಾಯಮೂರ್ತಿ ತಿರಸ್ಕರಿಸಿದರು.
ರಾಕೇಶ್ ಅಸ್ಥಾನಾ ಪರ ವಕೀಲರಾದ ಮುಕುಲ್ ರೋಹಟಕಿ, ತಮ್ಮ ದೂರಿನ ಮೂಲಕವೇ ಸಂಪೂರ್ಣ ವಿವಾದ ಸೃಷ್ಟಿಯಾಗಿರುವುದರಿಂದ ತಮಗೂ ವರದಿ ವೀಕ್ಷಿಸಲು ಅವಕಾಶ ನೀಡಬೇಕು. ಅದರ ಬಗ್ಗೆ ಅಭಿಪ್ರಾಯ ತಿಳಿಸಲು ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಅದಕ್ಕೆ ರಂಜನ್ ಗೊಗೊಯ್, ನಿಮಗೆ ಅದರ ಪ್ರತಿ ಸಿಗುವುದಿಲ್ಲ ಎಂದರು.
ಸಿವಿಸಿ ವಕೀಲರೇ ವರದಿ ನೋಡಿಲ್ಲ
ಕೇಂದ್ರ ಜಾಗೃತಾ ದಳದ ಮುಖ್ಯ ವಕೀಲರಾಗಿರುವ ತಾವು ಆ ವರದಿಯನ್ನು ನೋಡಿಯೇ ಇಲ್ಲ ಎಂದು ಸಿವಿಸಿ ವಕೀಲ ತುಷಾರ್ ಮೆಹ್ತಾ ನ್ಯಾಯಾಲಯಕ್ಕೆ ತಿಳಿಸಿದರು. ಈ ವರದಿಯ ಲೇಖಕರೇ ನೀವು. ಮತ್ತೆ ನೀವೇ ಅದನ್ನು ನೋಡಿಲ್ಲವೇ ಎಂದು ಗೊಗೊಯ್ ಪ್ರಶ್ನಿಸಿದರು. ವಕೀಲನಾಗಿ ನಾನು ಅದನ್ನು ನೋಡಿಲ್ಲ ಎಂದು ಮೆಹ್ತಾ ತಿಳಿಸಿದರು.
ವರ್ಮಾ ಅವರ ಅರ್ಜಿಯ ಜತೆಗೆ, ಕಾಮನ್ ಕಾಸ್ ಎಂಬ ಎನ್ಜಿಒ ಈ ಪ್ರಕರಣದಲ್ಲಿ ವಿಶೇಷ ತನಿಖಾ ದಳದ ತನಿಖೆ ನಡೆಯಬೇಕು ಎಂದು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪರಿಗಣಿಸಲಿದೆ.
|
ಅಲೋಕ್ ಪರ ಸ್ವಾಮಿ ಬ್ಯಾಟಿಂಗ್
ನಾನು ಅಲೋಕ್ ವರ್ಮಾ ಅವರನ್ನು ದೆಹಲಿ ಪೊಲೀಸ್ ಕಮಿಷನರ್ ಆಗಿದ್ದ ಸಂದರ್ಭದಿಂದ ನೋಡುತ್ತಿದ್ದೇನೆ. ಏರ್ಸೆಲ್-ಮ್ಯಾಕ್ಸಿಸ್ ಮತ್ತು ಇತರೆ ಪ್ರಕರಣಗಳಲ್ಲಿ ಸಿಬಿಐನಲ್ಲಿ ಅವರು ಕೆಲಸ ಮಾಡುವುದನ್ನು ಕಂಡಿದ್ದೇನೆ. ಅವರೊಬ್ಬ ಪ್ರಾಮಾಣಿಕ ಅಧಿಕಾರಿ ಎಂದು ಪರಿಗಣಿಸಿದ್ದೇನೆ. ಅವರಿಗೆ ಸಾಕಷ್ಟು ಅನ್ಯಾಯಗಳನ್ನು ಮಾಡಲಾಗಿದೆ. ಭ್ರಷ್ಟಾಚಾರ ವಿರುದ್ಧದ ನಮ್ಮ ಚಳವಳಿಗೆ ಇದರಿಂದ ಅಘಾತವಾಗಿದೆ. ಅವರಿಗೆ ಸುಪ್ರೀಂಕೋರ್ಟ್ ನ್ಯಾಯ ನೀಡಲಿದೆ ಎಂಬ ವಿಶ್ವಾಸವಿದೆ ಎಂದು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.