ಸಿಬಿಐ ವಿಚಾರಣೆಯಲ್ಲಿ ಸಿಲುಕಿದ ದೆಹಲಿ ಸಚಿವ ಸತ್ಯೇಂದ್ರ ಜೈನ್
ನವದೆಹಲಿ, ಜೂನ್ 19: ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿಯ ಆಮ್ ಆದ್ಮಿ ಪಕ್ಷದ ಸರ್ಕಾರಕ್ಕೆ ಮತ್ತೊಮ್ಮೆ ಹಿನ್ನಡೆಯಾಗಿದೆ. ದೆಹಲಿಯ ಅರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರ ನಿವಾಸಕ್ಕೆ ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಲು ಆಗಮಿಸಿದ್ದಾರೆ.
ಮನಿಲಾಂಡ್ರಿಂಗ್ ಕೇಸಿನಲ್ಲಿ ಸಿಲುಕಿರುವ ಜೈನ್ ಹಾಗೂ ಅವರ ಪತ್ನಿ ವಿಚಾರಣೆ ಜಾರಿಯಲ್ಲಿದೆ. ಕಳೆದ ಏಪ್ರಿಲ್ ತಿಂಗಳಿನಲ್ಲಿ ಸತ್ಯೇಂದ್ರ ಜೈನ್ ವಿರುದ್ಧ ಸಿಬಿಐ ತಂಡವು ಪ್ರಕರಣ ದಾಖಲಿಸಿಕೊಂಡಿತ್ತು.
2015-16ರಲ್ಲಿ ಪ್ರಯಾಸ್ ಇನ್ಫೋ ಸಲ್ಯೂಷನ್ಸ್, ಅಕಿನ್ ಚಂದ್ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ಹಾಗೂ ಮನಗಲ್ಯಾತಾನ್ ಪ್ರಾಜೆಕ್ಟ್ ಪ್ರೈ ಲಿ ಜತೆಗೆ ಸೇರಿದ 4.63 ಕೋಟಿ ರು ಗುಳಂ ಮಾಡಿದ್ದಾರೆ ಎಂಬ ಆರೋಪ ಹೊರೆಸಲಾಗಿದೆ. 2010-12ರಲ್ಲಿ ಇನ್ನೊಂದು ಪ್ರಕರಣದಲ್ಲಿ 11.78 ಕೋಟಿ ರು ಅಕ್ರಮ ಹಣ ರವಾನೆ ಆರೋಪ ಕೂಡಾ ಕೇಳಿ ಬಂದಿದೆ.
ಇತ್ತೀಚೆಗೆ 10 ಕೋಟಿ ರೂ. ಅವ್ಯವಹಾರಕ್ಕೆ ಸಂಬಂಧಿಸಿದಂತೆ ದೆಹಲಿಯ ಆರೋಗ್ಯ ಇಲಾಖೆ ಮಾಜಿ ಕಾರ್ಯದರ್ಶಿ ಡಾ.ತರುಣ್ ಸೀಮ್ ಕಚೇರಿಯ ಮೇಲೆ ದಾಳಿ ನಡೆಸಲಾಗಿತ್ತು. ಆದರೆ, ಇದಕ್ಕೂ ಸತ್ಯೇಂದ್ರ ಜೈನ್ ಗೂ ಯಾವುದೇ ಸಂಬಂಧವಿಲ್ಲ ಎಂದು ಸಿಬಿಐ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.