ಕೋರ್ಟ್ಗೆ ನೀಡಿದ ದಾಖಲೆಯನ್ನೇ ಸೋರಿಕೆ ಮಾಡಿದರೇ ಸಿಬಿಐ ನಿರ್ದೇಶಕ?
ನವದೆಹಲಿ, ನವೆಂಬರ್ 20: ಲಂಚ ಪ್ರಕರಣ, ಒಳಜಗಳ ಮುಂತಾದವುಗಳ ಮೂಲಕ ವಿವಾದ ಸೃಷ್ಟಿಸಿರುವ ಸಿಬಿಐ, ಈಗ ಸುಪ್ರೀಂಕೋರ್ಟ್ನ ಕಣ್ಣು ಕೆಂಪಗಾಗಿಸಿದೆ.
ಲಂಚ ಪ್ರಕರಣದ ಆರೋಪ ಎದುರಿಸುತ್ತಿರುವ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರ ವಿರುದ್ಧ ಸುಪ್ರೀಂಕೋರ್ಟ್ ನಿರ್ದೇಶನದಂತೆ ತನಿಖೆ ನಡೆಸಿದ್ದ ಕೇಂದ್ರ ವಿಚಕ್ಷಣಾ ದಳ (ಸಿವಿಸಿ) ವರದಿ ಸಲ್ಲಿಸಿತ್ತು. ಈ ವರದಿ ಬಗ್ಗೆ ಅಲೋಕ್ ವರ್ಮಾ ಸೋಮವಾರ ಪ್ರತಿಕ್ರಿಯೆಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ನೀಡಿದ್ದರು.
ಆದರೆ, ಅಲೋಕ್ ವರ್ಮಾ ಸುಪ್ರೀಂಕೋರ್ಟ್ಗೆ ಏನು ಅಭಿಪ್ರಾಯ ನೀಡಿದ್ದಾರೆ ಎಂಬ ಬಗ್ಗೆ 'ದಿ ವೈರ್' ವೆಬ್ಸೈಟ್ನಲ್ಲಿ ವರದಿ ಪ್ರಕಟವಾಗಿದೆ.
ಈ ಬಗ್ಗೆ ಸುಪ್ರೀಂಕೋರ್ಟ್ ಮಂಗಳವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಗೋಪ್ಯತೆ ಕಾಪಾಡಿಕೊಳ್ಳುವಂತೆ ಸೂಚಿಸಿದ್ದರೂ, ಅದು ಸೋರಿಕೆಯಾಗಿರುವುದಕ್ಕೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಕಿಡಿಕಾರಿದ್ದಾರೆ.
ಸಿಬಿಐ ಅಧಿಕಾರಿ ವಿರುದ್ಧದ ತನಿಖೆಯಲ್ಲಿ ಅಜಿತ್ ದೋವಲ್ ಮೂಗು ತೂರಿಸಿದರೇ?
ಅಲೋಕ್ ವರ್ಮಾ ಅವರ ಅರ್ಜಿಯ ವಿಚಾರಣೆಯನ್ನು ನವೆಂಬರ್ 29ಕ್ಕೆ ಮುಂದೂಡುವ ವೇಳೆ, ರಂಜನ್ ಗೊಗೊಯ್, 'ನೀವು ಯಾರೂ ವಿಚಾರಣೆಗೆ ಅರ್ಹರಲ್ಲ' ಎಂದು ಕೋಪದಿಂದ ಹೇಳಿದರು.
ಮಂಗಳವಾರದ ವಿಚಾರಣೆ ವೇಳೆ ನಡೆದ ಕೆಲವು ಬೆಳವಣಿಗೆಗಳ ಅಂಶಗಳು ಇಲ್ಲಿವೆ...
ಗೊಗೊಯ್ ಅಸಮಾಧಾನ
ಮಂಗಳವಾರ ಬೆಳಿಗ್ಗೆ ವಿಚಾರಣೆ ಆರಂಭವಾಗುತ್ತಿದ್ದಂತೆಯೇ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ಅಸಮಾಧಾನದಿಂದಲೇ ಅಲೋಕ್ ವರ್ಮಾ ಅವರ ಪರ ವಕೀಲ ಫಾಲಿ ನಾರಿಮನ್ ಅವರಿಗೆ ಕೆಲವು ದಾಖಲೆಗಳನ್ನು ನೀಡಿದರು.
'ನೀವು ಹಿರಿಯ ವಕೀಲರಾಗಿರುವುದರಿಂದ ನಿಮಗೆ ಇದನ್ನು ನೀಡುತ್ತಿದ್ದೇವೆ. ದಯವಿಟ್ಟು ನಮಗೆ ಸಹಾಯ ಮಾಡಿ. ನಿಮಗೆ ಪ್ರತಿಕ್ರಿಯೆ ನೀಡಲು ಕೆಲವು ಸಮಯ ಬೇಕು ಎಂದರೆ ದಯಮಾಡಿ ತೆಗೆದುಕೊಳ್ಳಿ. ನಾವು ಬೇರೆ ಪ್ರಕರಣಗಳ ವಿಚಾರಣೆ ನಡೆಸುತ್ತೇವೆ' ಎಂದು ಖಾರವಾಗಿ ಹೇಳಿದರು.
ಸಿಬಿಐ ವಿವಾದ: ಅಲೋಕ್ ವರ್ಮಾ ವಿರುದ್ಧ ಮಿಶ್ರ ಮಾಹಿತಿ ವರದಿ
ಹೇಗೆ ಸೋರಿಕೆಯಾದವೋ ಗೊತ್ತಿಲ್ಲ
ಫಾಲಿ ನಾರಿಮನ್ ಅವರಿಗೆ ನೀಡಿದ ಕಾಗದಗಳಲ್ಲಿ 'ದಿ ವೈರ್' ನ್ಯೂಸ್ ವೆಬ್ಸೈಟ್ನಲ್ಲಿ ಪ್ರಕಟವಾದ ಸುದ್ದಿಯ ಪ್ರತಿಗಳಿದ್ದವು. 'ಇವು ಹೇಗೆ ಸೋರಿಕೆಯಾದವು? ನಮಗೆ ಗೊತ್ತಿಲ್ಲ' ಎಂದು ನಾರಿಮನ್ ಹೇಳಿದರು. 'ಕೆಲವು ಕಾರಣಗಳಿಂದ ಇದನ್ನು ದಾಖಲಿಸಿಕೊಳ್ಳುವ ಅಗತ್ಯವಿಲ್ಲ. ನಾವು ವಿಚಾರಣೆ ನಡೆಸಲು ಬಯಸುತ್ತಿಲ್ಲ' ಎಂದು ಗೊಗೊಯ್ ಪ್ರತಿಕ್ರಿಯಿಸಿದರು.
ತಾವೂ ಈ ಘಟನೆಯಿಂದ ವಿಚಲಿತಗೊಂಡಿರುವುದಾಗಿ ನಾರಿಮನ್ ಹೇಳಿದರು. 'ಇದು ಒಪ್ಪತಕ್ಕದ್ದಲ್ಲ. ನನಗೂ ಗೊಂದಲವಾಗಿದೆ. ಈ ರೀತಿ ಮಾಡಿದ ವ್ಯಕ್ತಿಗೆ ಸಮನ್ಸ್ ನೀಡಬೇಕು. ನಾನು ಇದಕ್ಕಾಗಿ ಇಡೀ ರಾತ್ರಿ ಕೆಲಸ ಮಾಡಿದ್ದೆ' ಎಂದು 89 ವರ್ಷದ ನಾರಿಮನ್ ಹೇಳಿದರು.
ಮುಖ್ಯಸ್ಥರಿಲ್ಲದೆ ನಾವಿಕನಿಲ್ಲದ ದೋಣಿಯಂತಾದ ಸಿಬಿಐ
ನ್ಯಾಯಾಲಯ ತೀರ್ಪು ನೀಡುವ ಸ್ಥಳ
ವಿಚಾರಣೆ ಕಾಯ್ದಿರಿಸಿದ ಸಂದರ್ಭದಲ್ಲಿ ಗೊಗೊಯ್, ನಿನ್ನೆ ವಿಚಾರಣೆ ವೇಳೆ ಅತ್ಯಂತ ಗೋಪ್ಯತೆಯನ್ನು ಕಾಪಾಡಿಕೊಳ್ಳಬೇಕು ಎಂದು ಸೂಚಿಸಲಾಗಿತ್ತು. ಆದರೆ, ಪತ್ರಗಳನ್ನು ತೆಗೆದುಕೊಂಡು ಹೋಗಿ ಎಲ್ಲರಿಗೂ ಹಂಚಲಾಗಿದೆ. ನ್ಯಾಯಾಲಯ ಯಾವುದೋ ವೇದಿಕೆಯಲ್ಲ, ಅದು ತೀರ್ಪು ನೀಡುವ ಸ್ಥಳ. ಅದು ಸಮರ್ಪಕವಾಗಿರಬೇಕು ಎಂದು ನಾವು ಬಯಸುತ್ತೇವೆ ಎಂದು ಸಿಟ್ಟಿನಿಂದ ನುಡಿದರು.
ಸಿನ್ಹಾ ವರದಿ ಸೋರಿಕೆಗೂ ಕೋಪ
ಮತ್ತೊಬ್ಬ ಸಿಬಿಐ ಅಧಿಕಾರಿ ಮನೀಶ್ ಕುಮಾರ್ ಸಿನ್ಹಾ ಸಲ್ಲಿಸಿರುವ ಅರ್ಜಿಯ ಮಾಹಿತಿಗಳೂ ಮಾಧ್ಯಮಗಳಲ್ಲಿ ಪ್ರಕಟವಾಗಿರುವುದರ ಬಗ್ಗೆ ಕೂಡ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು. ಅಸ್ಥಾನಾ ವಿರುದ್ಧದ ಆರೋಪಗಳ ತನಿಖೆಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಸರ್ಕಾರದ ಇತರೆ ಅಧಿಕಾರಿಗಳು ಅಡ್ಡಿಪಡಿಸಿದ್ದರು ಎಂದು ಸಿನ್ಹಾ ಆರೋಪಿಸಿದ್ದರು.
ಸ್ಪಷ್ಟನೆ ನೀಡಿದ ವೈರ್
ಆದರೆ, ಅಲೋಕ್ ವರ್ಮಾ ಅವರು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ ಮಾಹಿತಿಯನ್ನು ಪ್ರಕಟ ಮಾಡಿಲ್ಲ ಎಂದು 'ದಿ ವೈರ್' ಸ್ಪಷ್ಟನೆ ನೀಡಿದೆ. ವಿಚಕ್ಷಣಾ ದಳದ ಪ್ರಶ್ನೆಗಳನ್ನು ಆಧಾರವಾಗಿ ಇಟ್ಟುಕೊಂಡು ವರದಿ ಪ್ರಕಟಿಸಲಾಗಿದೆಯೇ ವಿನಾ, ಅವರು ನ್ಯಾಯಾಲಯಕ್ಕೆ ನೀಡಿದ ಪ್ರತಿಕ್ರಿಯೆಯನ್ನು ವರದಿ ಮಾಡಿಲ್ಲ ಎಂದು ತಿಳಿಸಿದೆ.
ಘನತೆ ಕಾಪಾಡಲು ಬಯಸಿದ್ದೆವು
ಸ್ಪಷ್ಟೀಕರಣ ನೀಡುವುದರ ಬಗ್ಗೆ ನಾರಿಮನ್ ಹೇಳಿದಾಗ ರಂಜನ್ ಗೊಗೊಯ್ ಅವರು ಎಂಕೆ ಸಿನ್ಹಾ ಅವರ ಅರ್ಜಿಯ ಕುರಿತಾದ ವರದಿಗಳನ್ನು ತೋರಿಸಿದರು. 'ನಮ್ಮ ಬಳಿ ಇತರೆ ದಾಖಲೆಗಳೂ ಇವೆ. ಇವುಗಳನ್ನೂ ನೋಡಿ' ಎಂದರು. ವೈರ್ ವೆಬ್ಸೈಟ್ನ ಮತ್ತೊಂದು ಲೇಖನವನ್ನು ತೋರಿಸಿದ ಅವರು, ಸಿಬಿಐನ ಘನತೆಯನ್ನು ಕಾಪಾಡಲು ಅಲೋಕ್ ವರ್ಮಾ ಅವರ ಪ್ರತಿಕ್ರಿಯೆಯನ್ನು ಗೋಪ್ಯವಾಗಿ ಇರಿಸಲು ಬಯಸಿದ್ದೆವು ಎಂದರು.
ಕ್ಲೀನ್ ಚಿಟ್ ನೀಡಿಲ್ಲ
ಕೇಂದ್ರ ವಿಚಕ್ಷಣಾ ದಳ ಸಲ್ಲಿಸಿರುವ ವರದಿಯಲ್ಲಿ ಅಲೋಕ್ ವರ್ಮಾ ಅವರನ್ನು ದೋಷಮುಕ್ತ ಎಂದು ಕ್ಲೀನ್ ಚಿಟ್ ನೀಡಿಲ್ಲ. ಕೆಲವು ಆರೋಪಗಳು ಗಂಭೀರವಾಗಿಲ್ಲ ಎಂದರೂ, ಇನ್ನು ಕೆಲವು ಆರೋಪಗಳು ಗಂಭೀರವಾಗಿವೆ ಎಂದು ವರದಿ ಹೇಳಿದೆ. ಇನ್ನು ಕೆಲವು ಪ್ರಕರಣಗಳು ತೀರಾ ಗಂಭೀರವಾಗಿವೆ ಎಂದೂ ತಿಳಿಸಿದೆ ಎಂದು ವರ್ಮಾ ಅವರಿಗೆ ನ್ಯಾಯಾಲಯ ತಿಳಿಸಿತು.