Breaking: ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಮನೆ ಮೇಲೆ ಸಿಬಿಐ ದಾಳಿ
ನವದೆಹಲಿ, ಆಗಸ್ಟ್ 19: ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ನಿವಾಸ ಸೇರಿದಂತೆ ದೆಹಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳ 21 ಕ್ಕೂ ಹೆಚ್ಚು ಸ್ಥಳಗಳ ಮೇಲೆ ಕೇಂದ್ರ ತನಿಖಾ ದಳ (ಸಿಬಿಐ) ಶುಕ್ರವಾರ ಬೆಳಿಗ್ಗೆ ದಾಳಿ ನಡೆಸಿ, ಶೋಧ ಕಾರ್ಯ ನಡೆಸಿದೆ.
ದೆಹಲಿ ಅಬಕಾರಿ ನೀತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಸಿಬಿಐ ದಾಳಿ ನಡೆಸಲಾಗುತ್ತಿದೆ. ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸಿಬಿಐ ಅಧಿಕಾರಿಗಳನ್ನು ತಮ್ಮ ನಿವಾಸಕ್ಕೆ ಸ್ವಾಗತಿಸಿದ್ದಾರೆ. ಅವರಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಟ್ವೀಟ್ ಮಾಡಿರುವ ಸಿಸೋಡಿಯಾ, ನಮ್ಮ ದೇಶದಲ್ಲಿ ಒಳ್ಳೆಯ ಕೆಲಸ ಮಾಡುವವರಿಗೆ ಈ ರೀತಿ ಕಿರುಕುಳ ನೀಡುತ್ತಿರುವುದು ದುರದೃಷ್ಟಕರ. ಆದ್ದರಿಂದಲೇ ನಮ್ಮ ದೇಶ ಇನ್ನೂ ನಂಬರ್ 1 ಆಗಿಲ್ಲ ಎಂದಿದ್ದಾರೆ.
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡ ಟ್ವೀಟ್ ಮಾಡಿ, ಮನೀಶ್ ಸಿಸೋಡಿಯಾಗೆ ಬೆಂಬಲವನ್ನು ನೀಡಿದ್ದಾರೆ. ಈ ದಾಳಿಯಿಂದ ಏನೂ ಹೊರಬರುವುದಿಲ್ಲ ಮತ್ತು ಈ ಹಿಂದೆ ಇಂತಹ ಅನೇಕ ಘಟನೆಗಳು ನಡೆದಿವೆ ಎಂದಿದ್ದಾರೆ.
ಸಿಬಿಐ ಶುಕ್ರವಾರ ಮನೀಶ್ ಸಿಸೋಡಿಯಾ, ಐಎಎಸ್ ಅಧಿಕಾರಿಯ ನಿವಾಸಗಳು ಸೇರಿದಂತೆ ದೆಹಲಿಯ ಸುತ್ತಮುತ್ತಲಿನ 21 ಸ್ಥಳಗಳು ಪ್ರದೇಶಗಳ ಮೇಲೆ ದಾಳಿ ನಡೆಸಿದೆ.
"ನಾನು ಸಿಬಿಐಗೆ ನನ್ನ ಸ್ವಾಗತವನ್ನು ನೀಡುತ್ತೇನೆ, ನಾನು ತನಿಖೆಗೆ ಸಹಕರಿಸುತ್ತೇನೆ, ಇದರಿಂದ ಸತ್ಯವು ಆದಷ್ಟು ಬೇಗ ಹೊರಬರುತ್ತದೆ. ಇದುವರೆಗೆ ನನ್ನ ವಿರುದ್ಧ ಅನೇಕ ಪ್ರಕರಣಗಳು ದಾಖಲಾಗಿವೆ ಆದರೆ ಏನೂ ಹೊರಬಂದಿಲ್ಲ. ಅದರಿಂದ ಈಗಲೂ ಏನೂ ಸಿಗುವುದಿಲ್ಲ. ದೇಶದಲ್ಲಿ ಉತ್ತಮ ಶಿಕ್ಷಣ ನೀಡುವ ನನ್ನ ಕೆಲಸ ನಿಲ್ಲಿಸಲು ಸಾಧ್ಯವಿಲ್ಲ" ಎಂದು ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ.
ತಮ್ಮ ಮತ್ತು ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ವಿರುದ್ಧದ ಆರೋಪಗಳು ಸುಳ್ಳು ಎಂದು ಸಿಸೋಡಿಯಾ ಹೇಳಿದ್ದಾರೆ. "ಈ ಜನರು ದೆಹಲಿಯ ಶಿಕ್ಷಣ ಮತ್ತು ಆರೋಗ್ಯದ ಅತ್ಯುತ್ತಮ ಕೆಲಸದಿಂದ ತೊಂದರೆಗೀಡಾಗಿದ್ದಾರೆ. ಅದಕ್ಕಾಗಿಯೇ ಆರೋಗ್ಯ ಸಚಿವರು ಮತ್ತು ದೆಹಲಿಯ ಶಿಕ್ಷಣ ಸಚಿವರ ಮೇಲೆ ದೃಷ್ಠಿಯಿಟ್ಟಿದ್ದಾರೆ. ಇದರಿಂದ ಶಿಕ್ಷಣ ಮತ್ತು ಆರೋಗ್ಯದ ಉತ್ತಮ ಕೆಲಸಗಳನ್ನು ನಿಲ್ಲಿಸಬಹುದು ಎಂದುಕೊಂಡಿದ್ದಾರೆ" ಎಂದು ಹೇಳಿದರು.