ಭಾರತೀಯ ಕ್ರೀಡಾ ಪ್ರಾಧಿಕಾರದ ಮೇಲೆ ಸಿಬಿಐ ದಾಳಿ, ನಿರ್ದೇಶಕನ ಬಂಧನ
ನವದೆಹಲಿ, ಜನವರಿ 18: ಭಾರತೀಯ ಕ್ರೀಡಾ ಪ್ರಾಧಿಕಾರದ (ಸಾಯ್) ಮೇಲೆ ದಾಳಿ ಮಾಡಿದ ಸಿಬಿಐ, ಸಾಯ್ ನಿರ್ದೇಶಕರನ್ನು ಸೇರಿ ಆರು ಮಂದಿಯನ್ನು ವಶಕ್ಕೆ ಪಡೆದುಕೊಂಡಿದೆ.
ಸಾಯ್ (ಸ್ಟೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ)ದ ವಿರುದ್ಧ ಭ್ರಷ್ಟಾಚಾರದ ದೂರು ಬಂದ ಹಿನ್ನೆಲೆಯಲ್ಲಿ ಇಂದು ದಾಳಿ ಮಾಡಿದ ಸಿಬಿಐ ಅಧಿಕಾರಿಗಳು ಕಚೇರಿಯನ್ನು ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಸಾಯ್ ಅಧಿಕಾರಿಗಳನ್ನೂ ವಿಚಾರಣೆ ನಡೆಸುತ್ತಿದ್ದಾರೆ.
ಕ್ರೀಡಾ ಪ್ರಾಧಿಕಾರದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಕೆಲವು ತಿಂಗಳುಗಳ ಹಿಂದೆಯೇ ದೂರು ಸಿಬಿಐಗೆ ನೀಡಲಾಗಿತ್ತು. ಕೆಲವು ಸಾಕ್ಷ್ಯಗಳನ್ನೂ ಒದಗಿಸಲಾಗಿತ್ತು. ಮತ್ತು ವಿಚಾರಣೆಗೆ ಕೋರಲಾಗಿತ್ತು ಎಂದು ಸಿಬಿಐ ಹೇಳಿದೆ. ಅದರಂತೆ ಇಂದು ಸಿಬಿಐ ದಾಳಿ ನಡೆಸಿದೆ.
ದಾಳಿ ಸಮಯ ಸಾಯ್ನ ಆರು ಮಂದಿಯನ್ನು ಸಿಬಿಐ ವಶಕ್ಕೆ ಪಡೆದಿದೆ. ಅದರಲ್ಲಿ ಸಾಯ್ನ ನಿರ್ದೇಶಕರಾದ ಎಸ್.ಕೆ.ಶರ್ಮಾ ಅವರು ಸೇರಿ ಆರು ಮಂದಿಯನ್ನು ಲಂಚಕ್ಕೆ ಬೇಡಿಕೆ ಇಟ್ಟ ಪ್ರಕರಣದಲ್ಲಿ ವಶಕ್ಕೆ ಪಡೆಯಲಾಗಿದ್ದು ವಿಚಾರಣೆ ನಡೆಸಲಾಗುತ್ತಿದೆ.
ಈ ದಾಳಿ ನಡೆದ ಕೆಲವೇ ಸಮಯದ ಬಳಿಕ ಕೇಂದ್ರ ಕ್ರೀಡಾ ಸಚಿವ ರಾಜವರ್ಧನ ಸಿಂಗ್ ರಾಥೋಡ್ ಟ್ವೀಟ್ ಮಾಡಿದ್ದು, ಇಲಾಖೆಯು ಪಾರದರ್ಶಕವಾಗಿ, ಭ್ರಷ್ಟಾಚಾರ ಮುಕ್ತವಾಗಿ ಇರಬೇಕೆಂದು ನಾವು ಬಯಸಿದ್ದೆವು, ಹಾಗಾಗಿ ಅನುಮಾನ ಬಂದ ಕೂಡಲೇ ಸಂಬಂಧಪಟ್ಟವರಿಗೆ ದೂರು ನೀಡಲಾಗಿತ್ತು ಎಂದಿದ್ದಾರೆ.
ಸಾಯ್ ಭಾರತದ ಅತ್ಯುತ್ತಮ ಕ್ರೀಡಾ ಪ್ರಾಧಿಕಾರವಾಗಿದ್ದು, ಅದರಲ್ಲಿಯೇ ಭ್ರಷ್ಟಾಚಾರ ನಡೆದಿರುವುದು ಮುಜುಗರ ತರುವ ವಿಷಯವಾಗಿದೆ. ಅದರಲ್ಲಿಯೂ ಸಾಯ್ನ ನಿರ್ದೇಶಕರೇ ಆರೋಪಿ ಸ್ಥಾನದಲ್ಲಿ ನಿಂತಿರುವುದು ಸಾಯ್ನ ಘನತೆಯನ್ನು ಮಣ್ಣುಪಾಲು ಮಾಡಿದಂತಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚಿಸಲಾಗುತ್ತಿದೆ.