ಡಿ.ಕೆ.ಶಿವಕುಮಾರ್ ಮನೆ ಮೇಲೆ ಸಿಬಿಐ ದಾಳಿ: ಪ್ರಕರಣ ಬೇರೆ
ನವದೆಹಲಿ, ಅಕ್ಟೋಬರ್ 21: ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೊಳಪಟ್ಟು ತಿಹಾರ್ ಜೈಲಿನಲ್ಲಿರುವ ಡಿ.ಕೆ.ಶಿವಕುಮಾರ್ ಗೆ ಕೇಂದ್ರ ತನಿಖಾ ಸಂಸ್ಥೆಗಳ ಬಲೆಯಿಂದ ಬೇಗನೇ ಬಿಡುಗಡೆ ಸಿಗುವ ಲಕ್ಷಣಗಳು ಗೋಚರಿಸುತ್ತಿಲ್ಲ.
Recommended Video
ಡಿ.ಕೆ.ಶಿವಕುಮಾರ್ ದೆಹಲಿ ಮನೆ ಮೇಲೆ ಸಿಬಿಐ ಇಂದು ದಾಳಿ ನಡೆಸಿದೆ. ಈ ಹಿಂದೆ ಆದಾಯ ತೆರಿಗೆ (ಐಟಿ) ಇಲಾಖೆ ಇದೇ ಮನೆಯ ಮೇಲೆ ದಾಳಿ ನಡೆಸಿದ್ದರು. ಶಿವಕುಮಾರ್ ಗೆ ಸೇರಿದ ದೆಹಲಿಯ ಸಫ್ದರ್ ಜಂಗ್ ರಸ್ತೆಯ ಎನ್ಕ್ಲೇವ್ ಬಿ-4/17 ಮನೆ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಆಸ್ತಿ ಗಳಿಕೆಯಲ್ಲಿ ಡಿಕೆ ಶಿವಕುಮಾರ್ ವಿಶ್ವ ದಾಖಲೆ: ಇ.ಡಿ. ಮಾಹಿತಿ
ಅಕ್ರಮ ಹಣ ವಿಷಯಕ್ಕಲ್ಲದೆ ಹೊಸ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದು, ಈ ಬಾರಿಯ ದಾಳಿಯ ಉದ್ದೇಶ ಭ್ರಷ್ಟಾಚಾರ.
ಶಿವಕುಮಾರ್, ರಾಜ್ಯದ ಇಂಧನ ಸಚಿವರಾಗಿದ್ದಾಗ ಲಂಚ ಪಡೆದಿದ್ದಾರೆ ಎಂಬ ಗುಮಾನಿಯ ಮೇಲೆ ಸಿಬಿಐ ದಾಳಿ ನಡೆಸಿದೆ. ಇಂಧನ ಸಚಿವರಾಗಿದ್ದಾಗ ಸೋಲಾರ ಪವರ್ ಪ್ಲಾಂಟ್ ಯೋಜನೆಯಲ್ಲಿ ಡಿ.ಕೆ.ಶಿವಕುಮಾರ್ ಲಂಚ ಪಡೆದಿದ್ದಾರೆ ಎಂಬ ಅನುಮಾನದ ಮೇಲೆ ತನಿಖೆಗೆಂದು ಸಿಬಿಐ ದಾಳಿ ನಡೆಸಿದೆ.
ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಇಡಿ ವಿಚಾರಣೆಗೆ ಒಳಪಟ್ಟು ಸೆಪ್ಟೆಂಬರ್ 3 ನೇ ತಾರೀಖಿನಿಂದಲೂ ಜೈಲುವಾಸದಲ್ಲಿರುವ ಡಿ.ಕೆ.ಶಿವಕುಮಾರ್ ಅವರು ಪ್ರಸ್ತುತ ದೆಹಲಿ ಹೈಕೋರ್ಟ್ನಲ್ಲಿ ಜಾಮೀನಿಗೆ ಅರ್ಜಿ ಹಾಕಿಕೊಂಡಿದ್ದಾರೆ. ಒಂದು ವೇಳೆ ಅಲ್ಲಿ ಜಾಮೀನು ದೊರೆತರೆ ಸಿಬಿಐ, ಡಿ.ಕೆ.ಶಿವಕುಮಾರ್ ಅವರ ವಶಕ್ಕೆ ಪಡೆಯುವ ಸಾಧ್ಯತೆ ಇದೆ.
ಜಾಮೀನು ದೊರೆಯದಿದ್ದ ಪಕ್ಷದಲ್ಲಿ ಬಾಡಿ ವಾರೆಂಟ್ ಪಡೆದು ಸಿಬಿಐ ಅಧಿಕಾರಿಗಳು ಡಿ.ಕೆ.ಶಿವಕುಮಾರ್ ಅವರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯೆತೆ ಇದೆ. ಒಟ್ಟಿನಲ್ಲಿ ಡಿ.ಕೆ.ಶಿವಕುಮಾರ್ ಅವರ ಜೈಲು ವಾಸ ಶೀಘ್ರವಾಗಿ ಮುಗಿಯುವ ಲಕ್ಷಗಳು ಕಾಣುತ್ತಿಲ್ಲ.