ಕಂದಾಯ ಗುಪ್ತಚರ ವಿಭಾಗದಲ್ಲಿ ಭಾರಿ ಭ್ರಷ್ಟಾಚಾರ ಶಂಕೆ: ಉನ್ನತ ಅಧಿಕಾರಿ ಬಂಧನ
ನವದೆಹಲಿ, ಜನವರಿ 1: ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್ಐ) ಹೆಚ್ಚುವರಿ ಪ್ರಧಾನ ನಿರ್ದೇಶಕ ಚಂದ್ರಶೇಖರ್ ಅವರನ್ನು 25 ಲಕ್ಷ ರೂ. ಲಂಚ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಬುಧವಾರ ಬಂಧಿಸಿದೆ.
ಈ ಹಗರಣದ ಬೆನ್ನತ್ತಿರುವ ಸಿಬಿಐ ನವದೆಹಲಿ, ನೋಯ್ಡಾ ಮತ್ತು ಲೂಧಿಯಾನಗಳಲ್ಲಿ ಪತ್ತೆಕಾರ್ಯ ನಡೆಸಿದೆ. ಚಂದ್ರಶೇಖರ್ ಅವರು ಲೂಧಿಯಾನದ ಕಚೇರಿಯಲ್ಲಿ ಎಡಿಜಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
110 ಕೋಟಿ ರುಪಾಯಿ ಹಗರಣ; ಸಿಬಿಐ ಬಲೆಗೆ ಬಿದ್ದ ಕಟ್ಟರ್
ಎಡಿಜಿ ಚಂದ್ರಶೇಖರ್ ಪರವಾಗಿ ಲಂಚ ಪಡೆದುಕೊಳ್ಳುತ್ತಿದ್ದ ಇಬ್ಬರು ಮಧ್ಯವರ್ತಿಗಳನ್ನು ಸಿಬಿಐ ಈ ಮುಂಚೆ ಬಂಧಿಸಿತ್ತು. ವಿಚಾರಣೆ ವೇಳೆ ಮಧ್ಯವರ್ತಿಗಳು ಎಡಿಜಿ ಅವರ ಪರವಾಗಿ ಲಂಚ ಪಡೆದುಕೊಳ್ಳುತ್ತಿದ್ದುದ್ದಾಗಿ ಬಾಯ್ಬಿಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
25 ಲಕ್ಷ ರೂ. ಲಂಚದ ಪ್ರಕರಣದ ಸಂಬಂಧ ದೂರು ಬಂದ ಹಿನ್ನೆಲೆಯಲ್ಲಿ ಸಿಬಿಐ ತನಿಖೆ ನಡೆಸಿತ್ತು. ಇದಕ್ಕೂ ಮೀರಿದ ಭಾರಿ ಮೊತ್ತದ ಅವ್ಯವಹಾರ ಕಂದಾಯ ಜಾಗ್ರತದಳದಲ್ಲಿ ನಡೆದಿರುವ ಸಾಧ್ಯತೆ ಇದೆ ಎಂದು ಸಿಬಿಐ ಅನುಮಾನ ವ್ಯಕ್ತಪಡಿಸಿದೆ. ಚಂದ್ರಶೇಖರ್ ಹಣಕಾಸು ವರ್ಗಾವಣೆಗಳು ಮತ್ತು ಸಂಸ್ಥೆಗಳು ಹಾಗೂ ವ್ಯಕ್ತಿಗಳ ಬ್ಲ್ಯಾಕ್ಮೇಲ್ನ ಜಾಲದ ನೇತೃತ್ವ ವಹಿಸಿದ್ದರು ಎನ್ನಲಾಗಿದೆ.
2019ರ ಜೂನ್ನಲ್ಲಿ ವಿವಿಧ ರಫ್ತುದಾರ ಸಂಸ್ಥೆಗಳಿಗೆ ಸೇವೆ ಒದಗಿಸುವ ಖಾಸಗಿ ಕ್ಲಿಯರಿಂಗ್ ಹೌಸ್ನಲ್ಲಿ ಪತ್ತೆ ಕಾರ್ಯ ನಡೆಸಿದ್ದ ಡಿಆರ್ಐ, ರಫ್ತುದಾರ ಸಂಸ್ಥೆಯೊಂದಕ್ಕೆ ಸೇರಿದ್ದ ದಾಖಲೆಗಳನ್ನು ವಶಪಡಿಸಿಕೊಂಡಿತ್ತು. ಬಳಿಕ ವಶಪಡಿಸಿಕೊಂಡ ದಾಖಲೆಗಳ ಆಧಾರದಲ್ಲಿ ಕ್ರಮ ತೆಗೆದುಕೊಳ್ಳದಂತೆ ನೋಡಿಕೊಳ್ಳಲು 3 ಕೋಟಿ ರೂ ಕ್ಲಿಯರಿಂಗ್ ಹೌಸ್ ಏಜೆಂಟ್ ಅನೂಪ್ ಜೋಶಿ ಹಾಗೂ ಚಂದ್ರಶೇಖರ್ ಅವರ ಆತ್ಮೀಯ ಸ್ನೇಹಿತ ರಾಜೇಶ್ ಧಂಡ ಬೇಡಿಕೆ ಇರಿಸಿದ್ದರು ಎಂದು ದೂರು ನೀಡಲಾಗಿತ್ತು.
ಈ ಬೇಡಿಕೆಯ ಮೊದಲ ಕಂತಿನ ಭಾಗವಾದ 25 ಲಕ್ಷ ರೂ. ಹಣವನ್ನು ಚಂದ್ರಶೇಖರ್ ಪರವಾಗಿ ಪಡೆದುಕೊಳ್ಳುವ ಸಂದರ್ಭದಲ್ಲಿ ಜೋಶಿ ಮತ್ತು ಧಂಡ ಅವರನ್ನು ಸಿಬಿಐ ಬಂಧಿಸಿತ್ತು.
ವಿವಿಧ ರಾಜ್ಯಗಳ ಡಿಆರ್ಐ ಘಟಕದ ಉಸ್ತುವಾರಿಯಾಗಿದ್ದ ಚಂದ್ರಶೇಖರ್ ಅವರನ್ನು ಲೂಧಿಯಾನದಲ್ಲಿ ಬಂಧಿಸಿರುವ ಅಧಿಕಾರಿಗಳು, ಹೆಚ್ಚಿನ ವಿಚಾರಣೆಗಾಗಿ ದೆಹಲಿಗೆ ಕರೆದೊಯ್ದಿದ್ದಾರೆ.