ಕಾವೇರಿ ವಿವಾದ: ಮೇ 3ರೊಳಗೆ ಕೇಂದ್ರದ ಯೋಜನೆ ಸುಪ್ರೀಂಗೆ ತಿಳಿಸಬೇಕು
ಕಾವೇರಿ ನಿರ್ವಹಣಾ ಮಂಡಳಿ ವಿಚಾರವಾಗಿ ಇದ್ದ ಗೊಂದಲಕ್ಕೆ ಒಂದು ತೆರೆ ಬಿದ್ದಿದೆ. ಸೋಮವಾರದಂದು ಕರ್ನಾಟಕವು ಸುಪ್ರೀಂ ಕೋರ್ಟ್ ನ ಎದುರು ತನ್ನ ವಾದವನ್ನು ಸಮರ್ಥಿಸಿಕೊಂಡಿದೆ. ಕರ್ನಾಟಕವನ್ನು ಪ್ರತಿನಿಧಿಸುವ ವಕೀಲ ಮೋಹನ್ ಕಾತರಕಿ ಒನ್ಇಂಡಿಯಾ ಜತೆಗೆ ಈ ಬಗ್ಗೆ ಮಾತನಾಡಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ
ಸುಪ್ರೀಂ ಕೋರ್ಟ್ ನಿಂದ ಕೇಂದ್ರಕ್ಕೆ ಯೋಜನೆ ಬಗ್ಗೆ ಪ್ರಸ್ತಾವ ಸಲ್ಲಿಸಲು ಸೂಚಿಸಿದ್ದು, ಕಾವೇರಿ ನಿರ್ವಹಣಾ ಮಂಡಳಿಯ ರಚನೆಗೆ ನ್ಯಾಯಾಧಿಕರಣ ಸೂಚಿಸಿರುವುದನ್ನು ಅಳವಡಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಸಮರ್ಥಿಸುವಂತಿದೆ ಎಂದು ಹೇಳಿದರು.
ಈ ಹಿಂದೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಕೂಡ ಈ ವಿಚಾರದ ಬಗ್ಗೆ ಬೊಟ್ಟು ಮಾಡಿದ್ದರು. ಕೇಂದ್ರ ಸರಕಾರವು ಕಾವೇರಿ ನ್ಯಾಯಾಧಿಕರಣವು 2007ರಲ್ಲಿ ಹೇಳಿದ್ದರ ಬಗ್ಗೆ ಈಗ ಆಲೋಚಿಸುವ ಅಗತ್ಯವಿಲ್ಲ. ಡಿಕ್ರಿ ಜತೆಗೆ ನ್ಯಾಯಾಧಿಕರಣದ ಆದೇಶ ಸೇರಿಹೋಗಿದೆ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹೇಳಿದ್ದಾರೆ.
ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಪರಿಹಾರ ಸೂತ್ರವನ್ನು ರೂಪಿಸುವಂತೆ ಸುಪ್ರೀಂ ಕೋರ್ಟ್ ನಿಂದ ಕೇಂದ್ರ ಸರಕಾರಕ್ಕೆ ಸೂಚನೆ ನೀಡಲಾಗಿತ್ತು. ಇನ್ನು ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರದ ವಿರುದ್ಧ ತಮಿಳುನಾಡು ಸರಕಾರ ಹಾಕಿದ್ದ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಂಡಿತ್ತು.
ತಮಿಳುನಾಡಿನ ಅರ್ಜಿಯಲ್ಲಿ, ಕೇಂದ್ರ ಸರಕಾರವು ನಿಗದಿತ ಕಾಲಾವಧಿಯಲ್ಲಿ ಕಾವೇರಿ ನಿರ್ವಹಣಾ ಮಂಡಳಿ ರಚಿಸಲು ವಿಫಲವಾಗಿದೆ ಎಂದು ಹೇಳಲಾಗಿತ್ತು. ಸೋಮವಾರದಂದು ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ಸೂಚನೆ ಕೊಟ್ಟಿದ್ದು, ಮೇ 3ನೇ ತಾರೀಕಿನೊಳಗೆ ಆದೇಶವನ್ನು ಹೇಗೆ ಪಾಲನೆ ಮಾಡಲಿದೆ ಎಂಬುದರ ಪ್ರಸ್ತಾವ ಸಲ್ಲಿಸಲು ಸೂಚಿಸಿದೆ.
ಈ ಪ್ರಸ್ತಾವದಲ್ಲಿ ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಪುದುಚೆರಿ ಮಧ್ಯೆ ಹೇಗೆ ನೀರು ಹಂಚಿಕೆ ಮಾಡಲಾಗುವುದು ಎಂಬ ಬಗ್ಗೆ ಕೇಂದ್ರದ ಯೋಜನೆಯನ್ನು ತಿಳಿಸಬೇಕಿದೆ.