'ಹಿಂದುಳಿದ ವರ್ಗದ ಜಾತಿಗಣತಿ ನಿಷ್ಪ್ರಯೋಜಕ, ಕಷ್ಟ' ಎಂದ ಕೇಂದ್ರ ಸರ್ಕಾರ
ನವದೆಹಲಿ, ಸೆಪ್ಟೆಂಬರ್ 24: "ಹಿಂದುಳಿದ ವರ್ಗಗಳ ಜಾತಿಗಣತಿಯನ್ನು ಮಾಡುವುದು ಆಡಳಿತಾತ್ಮಕವಾಗಿ ಕಷ್ಟ ಹಾಗೂ ತೊಡಕು ಉಂಟಾಗುತ್ತದೆ," ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್ಗೆ ತಿಳಿಸಿದೆ.
"ಸ್ವಾತಂತ್ಯ್ರಕ್ಕೂ ಮೊದಲು ಮಾಡಲಾಗಿರುವ ಜಾತಿಗಣತಿಯಲ್ಲಿ ಡೇಟಾದಲ್ಲಿ ಹಲವಾರು ತೊಂದರೆ ಹಾಗೂ ಸ್ಪಷ್ಟತೆಯ ಕೊರತೆ ಇದ್ದವು," ಎಂದು ಕೇಂದ್ರ ಸರ್ಕಾರವು ಬೊಟ್ಟು ಮಾಡಿದೆ. "2011 ರಲ್ಲಿ ನಡೆಸಿದ ಸಾಮಾಜಿಕ, ಆರ್ಥಿಕ ಹಾಗೂ ಜಾತಿಗಣತಿಯಲ್ಲಿ (ಎಸ್ಇಸಿಸಿ) ಜಾತಿಯ ಡೇಟಾವನ್ನು ಜನರಿಂದ ಪಡೆಯಲಾಗಿದೆ. ಆದರೆ ಅದು ಯಾವುದೇ ಪ್ರಯೋಜನಕ್ಕೆ ಬಂದಿಲ್ಲ. ಬದಲಾಗಿ ಹಲವಾರು ತಾಂತ್ರಿಕ ದೋಷವೇ ಇದೆ," ಎಂದು ಕೇಂದ್ರ ಸರ್ಕಾರವು ಸ್ಪಷ್ಟವಾಗಿ "ಜಾತಿಗಣತಿ ನಿಷ್ಪ್ರಯೋಜಕ" ಎಂದು ಸುಪ್ರೀಂಗೆ ಹೇಳಿದೆ.
ಜಾತಿ ಲೆಕ್ಕಾಚಾರ ತಪ್ಪಿಸಲು ಕೇಂದ್ರದ ಸಂಚು: ಶೀಘ್ರ ಜನಗಣತಿ ಪುನರಾರಂಭ
"ಈ ಜಾತಿಗಣತಿ ವಿಚಾರವನ್ನು ಈ ಹಿಂದಿನ ಎಲ್ಲಾ ಅಂಶಗಳೊಂದಿಗೆ ತುಲನೆ ಮಾಡಿ ಪರಿಶೀಲನೆ ನಡೆಸಲಾಗಿದೆ. ಆದರೆ ಎಲ್ಲಾ ಸಂದರ್ಭದಲ್ಲೂ ಈ ಜಾತಿಗಣತಿಯು ಕಷ್ಟ ಹಾಗೂ ನಿಷ್ಪ್ರಯೋಜಕ ಎಂದು ತಿಳಿದು ಬಂದಿದೆ. ಈ ಜಾತಿ ಗಣತಿಯನ್ನು ಮಾಡಿದರೆ, ಇದು ಪೂರ್ತಿ ಎಂದು ಆಗದು ಹಾಗೂ ಯಾವುದೇ ಸ್ಪಷ್ಟತೆಯೂ ಇರದು. ಇದು 2011 ರಲ್ಲಿ ನಡೆಸಿದ ಜಾತಿಗಣತಿಯಿಂದ ಸ್ಪಷ್ಟವಾಗಿದೆ," ಎಂದು ಕೂಡಾ ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ತನ್ನ ಅಫಿಡವಿಟ್ನಲ್ಲಿ ಅಭಿಪ್ರಾಯಿಸಿದೆ.
"2011 ರಲ್ಲಿ ನಡೆಸಿದ ಸಾಮಾಜಿಕ, ಆರ್ಥಿಕ ಹಾಗೂ ಜಾತಿಗಣತಿಯಲ್ಲಿನ (ಎಸ್ಇಸಿಸಿ) ಮಾಹಿತಿಯು ಯಾವುದೇ ಅಧಿಕೃತ ಬಳಕೆಗೆ ಸಹಕಾರಿಯಾಗಿಲ್ಲ. ಹಾಗೆಯೇ ಇದು ಇದನ್ನು ಜನಸಂಖ್ಯೆಯ ಬಗ್ಗೆ ತಿಳಿಯಲು ಸಹಾಯ ಮಾಡುವ ಮೂಲ ಡೇಟಾ ಎಂದು ಕೂಡಾ ಪರಿಗಣಿಸಲಾಗದು," ಎಂದು ಕೇಂದ್ರ ಸರ್ಕಾರವು ತಿಳಿಸಿದೆ.
2021 ರ ಜನಗಣತಿಯ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಜಾತಿಗಣತಿಯನ್ನು ಕೂಡಾ ಮಾಡಬೇಕು. ಜನರಿಂದ ಜಾತಿಯ ಮಾಹಿತಿ ಕೂಡಾ ಸಂಗ್ರಹ ಮಾಡಬೇಕು ಎಂದು ಮಹಾರಾಷ್ಟ್ರವು ಸಲ್ಲಿಕೆ ಮಾಡಿರುವ ರಿಟ್ ಅರ್ಜಿಗೆ ಪ್ರತಿಕ್ರಿಯೆ ನೀಡಿ ತನ್ನ ಅಫಿಡವಿಟ್ನಲ್ಲಿ ಕೇಂದ್ರ ಸರ್ಕಾರ ಈ ಹೇಳಿಕೆ ನೀಡಿದೆ. 2011 ರ ಎಸ್ಇಸಿಸಿಯಲ್ಲಿ ಸುಮಾರು 4.28 ಲಕ್ಷ ಜಾತಿಗಳನ್ನು ಮಹಾರಾಷ್ಟ್ರ ರಾಜ್ಯದಲ್ಲಿ ಎಣಿಕೆ ಮಾಡಲಾಗಿದೆ. ಆದರೆ ಪ್ರಸ್ತುತ ಮಹಾರಾಷ್ಟ್ರದಲ್ಲಿ ಇರುವ ಎಸ್ಸಿ, ಎಸ್ಟಿ, ಒಬಿಸಿ ಜಾತಿಗಳು 494 ಮಾತ್ರ ಎಂದು ಕೂಡಾ ಕೇಂದ್ರ ಅಫಿಡವಿಟ್ನಲ್ಲಿ ಉಲ್ಲೇಖ ಮಾಡಿದೆ.
ಜನಗಣತಿ ವೇಳೆ ಒಬಿಸಿ ಸಂಖ್ಯೆ ದಾಖಲಿಸಲು ಆಯೋಗ ಮನವಿ
"ಜಾತಿಗಳ ಮಾಹಿತಿಯನ್ನು ಪಡೆಯಲು ಜಾತಿಗಣತಿ ಉತ್ತಮ ಅಸ್ತ್ರವಲ್ಲ ಎಂದು ಕೂಡಾ ಕೇಂದ್ರ ಸರ್ಕಾರ ಅಭಿಪ್ರಾಯಿಸಿದೆ. ಈ ರೀತಿ ಜಾತಿಯ ಲೆಕ್ಕಾಚಾರವನ್ನು ಮಾಡಲು ಮುಂದಾದರೆ ನಾವು ದೇಶದ ಏಕತೆ, ಸಮಗ್ರತೆಗೆ ಧಕ್ಕೆ ತಂದತ್ತೆ ಆಗುತ್ತದೆ. ಮುಖ್ಯವಾಗಿರುವ ಜನಗಣತಿಯು ಇದರಿಂದಾಗಿ ವಿಕೃತಗೊಳ್ಳಬಹುದು," ಎಂದಿದೆ. ಇನ್ನು ಅಷ್ಟೇ ಅಲ್ಲದೇ ಕೇಂದ್ರ ಸರ್ಕಾರವು "ಈ ಜನಗಣತಿಯಲ್ಲಿ ಈ ಜಾತಿಗಣತಿಯನ್ನು ಸೇರಿಸುವುದು ಈಗಾಗಲೇ ತಡವಾಗಿದೆ. ಜನಗಣತಿಯ ಎಲ್ಲಾ ಸಿದ್ದತೆ, ಯೋಜನೆ ಸಂಪೂರ್ಣವಾಗಿದೆ," ಎಂದು ಕೂಡಾ ಹೇಳಿಕೊಂಡಿದೆ.
ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಸ್ಥಗಿತಗೊಂಡಿರುವ ಜನಗಣತಿ ಕಾರ್ಯಾಚರಣೆಗಳು ಶೀಘ್ರದಲ್ಲೇ ಪುನರಾರಂಭಗೊಳ್ಳಲಿವೆ. ಈ ನಡುವೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ರಾಷ್ಟ್ರೀಯ ಜನತಾ ದಳದ (ಆರ್ಜೆಡಿ) ಮುಖಂಡ ತೇಜಸ್ವಿ ಯಾದವ್ ಜಾತಿಗಣತಿ ಕೂಡಾ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಹಾಗೆಯೇ ಮಹಾರಾಷ್ಟ್ರದಿಂದಲೂ ಈ ಆಗ್ರಹವಿದೆ. ಆದರೆ ಕೇಂದ್ರ ಸರ್ಕಾರ ಮಾತ್ರ ಆರಂಭದಿಂದಲೇ ಜಾತಿಗಣತಿಯನ್ನು ತಪ್ಪಿಸಲು ಎಲ್ಲಾ ತಂತ್ರವನ್ನು ರೂಪಿಸಿದಂತಿದೆ. ಇನ್ನೇನು ಜಾತಿಗಣತಿಯ ಆಗ್ರಹ ಹೆಚ್ಚಾಗುತ್ತದೆ ಎನ್ನುತ್ತಿರುವಂತೆ ಕೇಂದ್ರ ಸರ್ಕಾರವು ಜನಗಣತಿಯ ಎಲ್ಲಾ ಸಿದ್ದತೆಯನ್ನು ಮಾಡಿದೆ. ಈಗ ಸುಪ್ರೀಂ ಕೋರ್ಟ್ಗೆ ಕೇಂದ್ರ ಸರ್ಕಾರ ನೀಡಿರುವ ಕಾರಣಗಳಲ್ಲಿ, "ಈಗಾಗಲೇ ತಯಾರಿ ನಡೆದಿದೆ" ಎಂಬುವುದು ಕೂಡಾ ಒಂದು ಎಂಬುವುದು ಗಮನಾರ್ಹ.
(ಒನ್ ಇಂಡಿಯಾ ಸುದ್ದಿ)