ಎಲ್ಲರನ್ನೂ ಸಂತೋಷಪಡಿಸಿದ್ದೇವೆ ಎನ್ನಲು ಸಾಧ್ಯವಿಲ್ಲ; ಸುನಿಲ್ ಅರೋರಾ
ನವದೆಹಲಿ, ಫೆಬ್ರವರಿ 26: ನವದೆಹಲಿಯ ವಿಜ್ಞಾನ ಭವನದಲ್ಲಿ ಫೆ.26ರಂದು ಸುದ್ದಿಗೋಷ್ಟಿ ನಡೆಸಿದ ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ, ನಾಲ್ಕು ರಾಜ್ಯಗಳು ಹಾಗೂ ಪುದುಚೆರಿ ಕೇಂದ್ರಾಡಳಿತ ಪ್ರದೇಶದ ವಿಧಾನಸಭೆಗಳಿಗೆ ಚುನಾವಣಾ ದಿನಾಂಕ ಪ್ರಕಟಿಸಿದ್ದಾರೆ. ಚುನಾವಣೆ ದಿನಾಂಕ ಘೋಷಣೆ ಬೆನ್ನಲ್ಲೇ "ಎಲ್ಲರನ್ನೂ ಸಂತೋಷಪಡಿಸಿದ್ದೇವೆ ಎನ್ನಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.
ಚುನಾವಣೆ ನಡೆಯುತ್ತಿರುವ ರಾಜ್ಯಗಳಲ್ಲಿ ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ಸಿದ್ಧತೆಗಳ ಕುರಿತು ಮಾತನಾಡಿರುವ ಅವರು, ಚುನಾವಣೆ ನಡೆಯುತ್ತಿರುವ ಎಲ್ಲಾ ರಾಜ್ಯಗಳಿಗೆ ಕೆಲವು ದಿನಗಳ ಹಿಂದೆಯೇ ಭೇಟಿ ನೀಡಿದ್ದೇವೆ. ಕೆಲವು ರಾಜ್ಯಗಳಲ್ಲಿ ಶುಕ್ರವಾರದಂದು ಚುನಾವಣೆ ನಡೆಯುವುದನ್ನು ತಪ್ಪಿಸಲು ಪ್ರಯತ್ನಿಸಿದ್ದೇವೆ. ಬಿಹು ಹಾಗೂ ಇನ್ನಿತರ ಹಬ್ಬಗಳನ್ನು ನೋಡಿಕೊಂಡು ಚುನಾವಣೆ ದಿನಾಂಕ ನಿಗದಿಪಡಿಸಿದ್ದೇವೆ. ಇದರ ಜತೆಗೆ ಐದು ರಾಜ್ಯಗಳಲ್ಲಿನ ಹಬ್ಬ ಆಚರಣೆಗಳು ಮತ್ತು ಪರೀಕ್ಷೆಗಳನ್ನು ಸಹ ಗಮನದಲ್ಲಿರಿಸಲಾಗಿದೆ. ಇದಾಗ್ಯೂ ಎಲ್ಲರನ್ನೂ ಸಂತೋಷಪಡಿಸಿದ್ದೇವೆ ಎಂದು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.
Breaking: 5 ರಾಜ್ಯಗಳ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟ, ಸಂಪೂರ್ಣ ವಿವರ
ತಾವು ಮುಖ್ಯ ಚುನಾವಣಾ ಆಯುಕ್ತರಾಗಿ ಆಯೋಜಿಸುತ್ತಿರುವ ಕೊನೆಯ ಚುನಾವಣೆ ಇದಾಗಲಿದೆ ಎಂದು ಹೇಳಿದ್ದಾರೆ. ಇನ್ನು ಕೆಲವೇ ತಿಂಗಳುಗಳಲ್ಲಿ ಸುನಿಲ್ ಅರೋರಾ ಅವರು ನಿವೃತ್ತಿಯಾಗಲಿದ್ದಾರೆ.
ಕೊರೊನಾ ವೈರಸ್ ಸೋಂಕಿನ ಸನ್ನಿವೇಶವನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಚುನಾವಣೆ ನಡೆಸಲಾಗುವುದು. ಎಲ್ಲ ರಾಜ್ಯಗಳಲ್ಲಿಯೂ ಮತಗಟ್ಟೆಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು.ಹಾಗೂ ಮತ ಚಲಾವಣೆಗೆ ಒಂದು ಗಂಟೆ ಹೆಚ್ಚಿನ ಸಮಯ ನೀಡಲಾಗುವುದು. 80 ವರ್ಷ ಮೇಲ್ಪಟ್ಟವರು, ಅನಾರೋಗ್ಯ ಪೀಡಿತರು ಮತ್ತು ಅಗತ್ಯ ಸೇವಾ ಉದ್ಯೋಗಿಗಳಿಗೆ ಅಂಚೆ ಮೂಲಕ ಮತ ಚಲಾಯಿಸಲು ಅವಕಾಶವಿದೆ. ಮನೆಯಿಂದ ಮನೆಗೆ ಚುನಾವಣಾ ಪ್ರಚಾರ ನಡೆಸಲು ಐದು ಜನರ ತಂಡಕ್ಕೆ ಮಾತ್ರ ಅವಕಾಶ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಚುನಾವಣೆ ನಡೆಯುತ್ತಿರುವ ಎಲ್ಲಾ ರಾಜ್ಯಗಳಿಗೆ ಭೇಟಿ ನೀಡಿ ರಾಜಕೀಯ ಪಕ್ಷಗಳೊಂದಿಗೆ ಸಂವಾದ ನಡೆಸಿದ್ದೇವೆ. ಕ್ಷೇತ್ರದ ಅಧಿಕಾರಿಗಳೊಂದಿಗೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ರಾಜ್ಯ ಡಿಜಿಪಿಯನ್ನು ಭೇಟಿಯಾಗಿದ್ದೇವೆ. ದಿನಾಂಕಗಳ ಘೋಷಣೆಯಂತೆ ಚುನಾವಣಾ ಪ್ರಕ್ರಿಯೆ ಮುಕ್ತಾಯವಾಗುತ್ತದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.