ಸಿಗರೇಟ್ ಅಂಗಡೀಲಿ ಕೂಲ್ ಡ್ರಿಂಕ್ಸ್, ಚಾಕ್ಲೇಟ್ ನಿಷೇಧ!
ನವದೆಹಲಿ, ಸೆಪ್ಟೆಂಬರ್ 27: ತಂಬಾಕಿನ ಕಡೆಗೆ ಯುವ ಜನರು ಆಕರ್ಷಿತವಾಗುವುದನ್ನು ತಡೆಗಟ್ಟಲು ನಿರ್ಧರಿಸಿರುವ ಕೇಂದ್ರ ಆರೋಗ್ಯ ಇಲಾಖೆ, ತಂಬಾಕು ಉತ್ಪನ್ನಗಳನ್ನು ಮಾರುವ ಅಂಗಡಿಗಳಲ್ಲಿ ತಂಪು ಪಾನೀಯ, ಪೇಯ ಹಾಗೂ ಚಾಕಲೇಟ್ ಗಳನ್ನು ಮಾರಬಾರದೆಂಬ ಕಾನೂನನ್ನು ಜಾರಿಗೊಳಿಸಲು ಮುಂದಾಗಿದೆ.
ತಂಬಾಕು ಬದುಕು ತಂಬಿಸುವ ಮುನ್ನ ಜಾಗೃತರಾಗಿ...
ತನ್ನ ಈ ಉದ್ದೇಶವನ್ನು ಈಗಾಗಲೇ ಎಲ್ಲಾ ರಾಜ್ಯ ಸರ್ಕಾರಗಳಿಗೆ ಸೆ. 21ರಂದು ಪತ್ರದ ಮೂಲಕ ತಿಳಿಸಿರುವ ಕೇಂದ್ರ ಸರ್ಕಾರ, ತನ್ನ ಈ ಆಲೋಚನೆಗೆ ಸೂಕ್ತವಾಗುವಂಥ ಸಲಹೆಗಳನ್ನು ನೀಡುವಂತೆ ಸೂಚಿಸಿದೆ.
ಧೂಮಪಾನ ಹೆಚ್ಚಾದ್ರೆ ಸಂಶಯದ ಗುಣ ಹೆಚ್ಚಾಗುತ್ತಂತೆ!
ಸಿಗರೇಟು, ಬೀಡಿ, ಚುಟ್ಟಾ, ಗುಟ್ಕಾ ಅಥವಾ ಖೈನಿಗಳನ್ನು ಮಾರಾಟ ಮಾಡುವ ಅಂಗಡಿಗಳಲ್ಲಿ ಯಾವುದೇ ತಂಪು ಪಾನೀಯ ಅಥವಾ ಚಾಕಲೇಟ್ ಗಳನ್ನು ನಿಷೇಧಿಸುವುದರಿಂದ ಈ ಅಂಗಡಿಗಳತ್ತ ಧೂಮಪಾನ ಮಾಡದವರು ಬಾರದಂತೆ ತಡೆಹಿಡಿಯಬಹುದು ಎಂಬುದು ಕೇಂದ್ರದ ಉದ್ದೇಶ.
ಹೊಸ ಕ್ರಮಕ್ಕೆ ಚಿಂತನೆ
ಈ ಬಗ್ಗೆ ವಿವರಣೆ ನೀಡಿದ ಕೇಂದ್ರ ಆರೋಗ್ಯ ಇಲಾಖೆಯ ಆರ್ಥಿಕ ಸಲಹೆಗಾರ ಅರುಣ್ ಝಾ, ''ತಂಪು ಪಾನೀಯಗಳನ್ನೋ, ಚಾಕೋಲೇಟ್ ಗಳನ್ನೋ ಕೊಳ್ಳಲು ಬರುವಂಥ ಯುವಕ, ಯುವತಿಯರು, ಕೆಲವೊಮ್ಮೆ ಮಕ್ಕಳೂ ಸಹಿತ ಸಿಗರೇಟ್ ಅಥವಾ ಮತ್ಯಾವುದೋ ತಂಬಾಕು ಉತ್ಪನ್ನಗಳ ವ್ಯಾಮೋಹಕ್ಕೆ ಒಳಗಾಗುವ ಸಾಧ್ಯತೆಗಳು ಇರುತ್ತವೆ. ಹಾಗಾಗಿ, ಇದನ್ನು ತಪ್ಪಿಸಲು ಈ ಕ್ರಮಕ್ಕೆ ಆಲೋಚಿಸಲಾಗಿದೆ'' ಎಂದು ಅವರು ತಿಳಿಸಿದರು.
ಹದಿಹರೆಯದವರನ್ನು ಕಾಡುವ ವ್ಯಾಮೋಹ
ಹದಿಹರೆಯದವರು, ಮಕ್ಕಳಲ್ಲಿ ಎಷ್ಟೇ ಜಾಗೃತಿ ಮೂಡಿಸಿದರೂ, ಅವರು ಸಿಗರೇಟು ಸೇದುವವರನ್ನು ತಂಬಾಕು ತಿನ್ನುವವರನ್ನು ಕಂಡಾಗ ಅದರ ಮೋಹಕ್ಕೆ ಒಳಗಾಗುವ ಸಾಧ್ಯತೆಗಳಿರುತ್ತವೆ ಎಂದು ಝಾ ವಿವರಿಸಿದರು.
ಸ್ಥಳೀಯ ಸಂಸ್ಥೆಗಳಲ್ಲಿ ಘೋಷಣೆ
ಈ ಕಾನೂನು ಜಾರಿಯಾದರೆ, ಗುಟ್ಕಾ ಮಾರುವ ಅಂಗಡಿಗಳು ಇನ್ನು ಮುಂದೆ ತಮ್ಮ ಪ್ರಾಂತ್ಯದ ಪುರಸಭೆ, ನಗರಸಭೆ ಅಥವಾ ಮಹಾನಗರ ಪಾಲಿಕೆಗಳಲ್ಲಿ ತಾವು ತಂಪು ಪೇಯ ಅಥವಾ ಚಾಕೋಲೇಟ್ ಮಾರುತ್ತಿಲ್ಲವೆಂದು ಘೋಷಣಾ ಪತ್ರ ಬರೆದುಕೊಡಬೇಕೆಂಬ ನಿಯಮವನ್ನೂ ಜಾರಿಗೆ ತರಬೇಕೆಂಬುದು ಕೇಂದ್ರದ ಉದ್ದೇಶವಾಗಿದೆ.
ಪ್ರತಿಕ್ರಿಯೆ ಆಧರಿಸಿ ಮುಂದಿನ ಕ್ರಮ
ಈ ಕಾನೂನನ್ನು ಸಮರ್ಪಕವಾಗಿ, ಪರಿಣಾಮಕಾರಿಯಾಗಿ ಜಾರಿಗೆ ತರಲು ನಿರ್ಧರಿಸಿದ್ದು, ಈ ಬಗ್ಗೆ ರಾಜ್ಯ ಸರ್ಕಾರಗಳಿಂದ ಬರುವ ಪ್ರತಿಕ್ರಿಯೆಗಳನ್ನು ಆಧರಿಸಿ ಮುಂದಿನ ದಾರಿಯ ಬಗ್ಗೆ ಆಲೋಚಿಸಲಾಗುವುದು ಎಂದು ಇಲಾಖೆಯ ಮೂಲಗಳು ತಿಳಿಸಿವೆ.