ನವದೆಹಲಿಯಲ್ಲಿ ಕೊವಿಡ್-19 ಎರಡನೇ ಅಲೆ ಬಗ್ಗೆ ಸಚಿವರ ಸ್ಪಷ್ಟನೆ
ನವದೆಹಲಿ, ಸಪ್ಟೆಂಬರ್.03: ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬರುತ್ತಿರುವುದನ್ನು ಎರಡನೇ ಅಲೆ ಎಂದು ಕರೆಯುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ತಿಳಿಸಿದ್ದಾರೆ.
Recommended Video
ನವದೆಹಲಿಯಲ್ಲಿ ಎರಡು ತಿಂಗಳ ನಂತರ ಒಂದೇ ದಿನ 2509 ಜನರಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆ ವೇಳೆ ದೃಢಪಟ್ಟಿದೆ. ಈ ಬಗ್ಗೆ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಸ್ಪಷ್ಟನೆ ನೀಡಿದ್ದಾರೆ.
ಕೊರೊನಾವೈರಸ್ ಸೋಂಕಿತರಿಗಿಂತ ಜ್ವರ, ಕೆಮ್ಮು ಇಲ್ಲದವರೇ ಡೇಂಜರ್!
ದೆಹಲಿಯಲ್ಲಿ ಪತ್ತೆಯಾಗಿರುವ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯ ಮೇಲೆ ಹೆಚ್ಚು ಆದ್ಯತೆ ನೀಡುವ ಅಗತ್ಯವಿಲ್ಲ. ನಗರದಲ್ಲಿ ಕೊವಿಡ್-19 ಸೋಂಕಿನ ತಪಾಸಣೆ ವೇಗವನ್ನು ಹೆಚ್ಚಿಸಲಾಗಿದ್ದು, ಈ ಪ್ರಮಾಣದಲ್ಲಿ ಸೋಂಕಿತ ಪ್ರಕರಣಗಳು ಪತ್ತೆಯಾಗುತ್ತಿವೆ. ನವದೆಹಲಿಯಲ್ಲಿ ಒಂದೇ ಒಂದು ಸೋಂಕಿತ ಪ್ರಕರಣಗಳು ಇರಬಾರದು ಎನ್ನುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ತಿಳಿಸಿದ್ದಾರೆ.
ಎರಡನೇ ಕೊವಿಡ್-19 ಅಲೆ ಎನ್ನುವ ಅಗತ್ಯವಿಲ್ಲ:
ನವದೆಹಲಿಯಲ್ಲಿ ಕೊರೊನಾವೈರಸ್ ಸೋಂಕಿನ ಎರಡನೇ ಅಲೆ ಏಳುತ್ತಿದೆ ಎಂದು ಒತ್ತಿ ಹೇಳುವ ಅಗತ್ಯವಿಲ್ಲ. ಕೊವಿಡ್-19 ಒಂದು ಅಥವಾ ಎರಡು ತಿಂಗಳಿದ್ದು ಹೋಗುವ ವೈರಸ್ ಅಲ್ಲ. ಮುಂದಿನ ದಿನಗಳಲ್ಲಿ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ. ಮೊನ್ನೆ 30,000 ಜನರನ್ನು ಕೊರೊನಾವೈರಸ್ ಸೋಂಕಿನ ತಪಾಸಣೆಗೊಳಪಡಿಸಲಾಗಿದ್ದು, ನಿನ್ನೆ 35,000 ಜನರನ್ನು ಪರೀಕ್ಷಿಸಲಾಯಿತು. ಕೊವಿಡ್-19 ಸೋಂಕು ಪರೀಕ್ಷೆ ವೇಗ ಹೆಚ್ಚಿಸಿದಂತೆ ಸೋಂಕಿತ ಪ್ರಕರಣಗಳ ಸಂಖ್ಯೆಯು ಹೆಚ್ಚಾಗುವ ಸಾಧ್ಯತೆಗಳಿರುವುದು ಸಹಜ. ಆದರೆ ಸೋಂಕಿತ ಪ್ರಕರಣಗಳ ಸಂಖ್ಯೆಗೆ ಅಷ್ಟಾಗಿ ಒತ್ತು ನೀಡುವುದು ಬೇಕಾಗಿಲ್ಲ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.
ನವದೆಹಲಿಯಲ್ಲಿ ಕೊರೊನಾವೈರಸ್ ಪ್ರಕರಣ:
ನವದೆಹಲಿಯಲ್ಲಿ ಕಳೆದ 24 ಗಂಟೆಗಳಲ್ಲೇ 2509 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆಯು 179569ಕ್ಕೆ ಏರಿಕೆಯಾಗಿದೆ. ಈಗಾಗಲೇ 158586 ಸೋಂಕಿತರು ಗುಣಮುಖರಾಗಿದ್ದು, 16502 ಸಕ್ರಿಯ ಪ್ರಕರಣಗಳಿವೆ. ಮಹಾಮಾರಿಗೆ 4481 ಜನರು ಪ್ರಾಣ ಬಿಟ್ಟಿದ್ದಾರೆ.